ಕನ್ನಡಪ್ರಭವಾರ್ತೆ ಕುಶಾಲನಗರ

ಕುಶಾಲನಗರದ ಸಮೀಪದ ದುಬಾರೆ ಸಾಕಾನೆ ಶಿಬಿರದಲ್ಲಿ ಸೋಮವಾರ ಬೆಳಗ್ಗೆ ನಡೆದ ಪ್ರವಾಸಿ ಮಹಿಳೆಯ ಚೆನ್ನೈ ಮೂಲದ ಜಿನ್ಶು ದಾರುಣ ಅಂತ್ಯ ಘಟನೆ ನೋಡುಗರ ಮನ ಕಲಕುವಂತಿತ್ತು. ಸೋಮವಾರ ಮುಂಜಾನೆ ಜಿನ್ಶು ಕುಟುಂಬ ಚೆನ್ನೈನಿಂದ ಮೈಸೂರಿಗೆ ರೈಲು ಮೂಲಕ ಪ್ರಯಾಣಿಸಿ ನಂತರ ಟ್ಯಾಕ್ಸಿ ಮೂಲಕ ನೇರವಾಗಿ ದುಬಾರೆ ಆನೆ ಶಿಬಿರಕ್ಕೆ ಆಗಮಿಸಿದ ಕುಟುಂಬಕ್ಕೆ ಶಿಬಿರದಲ್ಲಿ ಕೆಲವೇ ಕ್ಷಣಗಳಲ್ಲಿ ಬರ ಸಿಡಿಲು ಎರಗಿದಂತೆ ಈ ಆಘಾತ ಎದುರಾಗಿತ್ತು.ದೂರದಿಂದ ಬಂದ ಆಯಾಸದ ನಡುವೆ ತನ್ನ ಮೂರು ವರ್ಷದ ಪುಟ್ಟ ಮಗುವಿನೊಂದಿಗೆ ಆನೆಗಳ ಜಳಕದ ಪುಳಕದ ನಡುವೆ ಸಂಭ್ರಮದೊಂದಿಗೆ ಇನ್ನೇನು ಸೆಲ್ಫಿ ತೆಗೆಯಬೇಕು ಎನ್ನುವಷ್ಟರಲ್ಲಿ ಎರಡು ಆನೆಗಳ ಕಾದಾಟದ ನಡುವೆ ಮಹಿಳೆ ಸಿಲುಕಿ ಪ್ರಾಣ ಕಳೆದುಕೊಳ್ಳುವ ದುರ್ಘಟನೆ ಎದುರಾಗಿದ್ದು ನಿಜಕ್ಕೂ ಬೇಸರದ ಸಂಗತಿ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.ತನ್ನ ಪತ್ನಿ ಆನೆಯೊಂದರ ಕೆಳಭಾಗದಲ್ಲಿ ಸಿಲುಕಿದಾಗ ಆಕೆಯ ರಕ್ಷಣೆಗೆ ಪತಿ ತನ್ನ ಪುಟ್ಟ ಮಗುವಿನೊಂದಿಗೆ ಸೆಣೆಸಾಡುತ್ತಿದ್ದ ದೃಶ್ಯವಂತೂ ಮನಕಲಕುವಂತಿತ್ತು.ಸ್ಥಳೀಯರು ರಕ್ಷಣೆಗೆ ಸಹಕರಿಸಿದರೂ ಆನೆಯ ಕೆಳಭಾಗದಲ್ಲಿ ನದಿ ನೀರಿನಲ್ಲಿ ಮುಳುಗಿದ್ದ ಮಹಿಳೆಯನ್ನು ರಕ್ಷಿಸಲು ಸಾಧ್ಯವಾಗದಿರುವುದು ನಿಜಕ್ಕೂ ಬೇಸರದ ಸಂಗತಿ ಎನ್ನುತ್ತಾರೆ ಶಿಬಿರದ ಕಾವಾಡಿಗರು. ತನ್ನ ಮತ್ತು ಮಗುವಿನ ಅಪಾಯ ಅರಿವಿದ್ದರೂ ಆ ಕ್ಷಣದಲ್ಲಿ ಜೀವವನ್ನು ಲೆಕ್ಕಿಸದೆ ಕೆಲವು ಕ್ಷಣ ತನ್ನ ಪತ್ನಿಯ ರಕ್ಷಣೆಗೆ ಹೋರಾಟ ಒಂದೆಡೆಯಾದರೆ ಇನ್ನೊಂದೆಡೆ ಎರಡು ಆನೆಗಳ ಕಾದಾಟ ನಿಯಂತ್ರಿಸಲು ಕಂಜನ್ ಆನೆಯ ಆನೆ ಕಾವಡಿಗೆನೊಬ್ಬ ಕೊನೆ ಕ್ಷಣದವರೆಗೂ ತನ್ನ ಆನೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿ ವಿಫಲವಾದ ದೃಶ್ಯ ನಿಜಕ್ಕೂ ಭಯಾನಕ ಜತೆಗೆ ಮನಕಲಕುವಂತಿತ್ತು.ತಕ್ಷಣ ದುಬಾರೆ ರಾಪ್ಟರ್ಸ್ ಅಸೋಸಿಯೇಷನ್ ತಂಡದ ಸದಸ್ಯರು ಸಂತ್ರಸ್ತರ ಸಹಕಾರಕ್ಕೆ ಬಂದು ನದಿ ದಾಟಿಸುವ ಕೆಲಸ ಮಾಡುವುದರೊಂದಿಗೆ ಕುಶಾಲನಗರ ಖಾಸಗಿ ಆಸ್ಪತ್ರೆಗೆ ಸೇರಿಸುವ ಕೆಲಸವೂ ನಡೆಯಿತು. ಆದರೆ ಆ ವೇಳೆಯಲ್ಲಿ ಪ್ರವಾಸಿ ಮಹಿಳೆಯ ಪ್ರಾಣಪಕ್ಷಿ ಹಾರಿಹೋಗಿತ್ತು. ಕೊಡಗು ಜಿಲ್ಲೆಯ ಪ್ರವಾಸಿ ಕೇಂದ್ರಕ್ಕೆ ಆಗಮಿಸಿದ ಕೆಲವೇ ಕ್ಷಣದಲ್ಲಿ ತನ್ನ ಕುಟುಂಬಕ್ಕೆ ಎರಗಿದ ಆಘಾತದಿಂದ ಜೋಯೆಲ್ ಸೈಮನ್ ಸಂಪೂರ್ಣ ಗದ್ಗತಿತರಾಗಿ ಕುಳಿತಿದ್ದ ದೃಶ್ಯ ಆಸ್ಪತ್ರೆಯಲ್ಲಿ ಕಂಡು ಬಂತು..

ಈ ನಡುವೆ ಪುಟ್ಟ ಕಂದ ತನ್ನ ತಾಯಿಗೆ ಏನಾಗಿದೆ ಅನ್ನೋ ಪರಿಸ್ಥಿತಿ ಅರಿಯದೆ ಮೊಬೈಲ್ ವೀಕ್ಷಿಸುತ್ತಾ ಇದ್ದಿದ್ದು ಕೂಡ ಕಂಡು ಬಂತು.