ಕನ್ನಡಪ್ರಭ ವಾರ್ತೆ ಸಂಕೇಶ್ವರ ಇಂದಿನ ಬದಲಾದ ಆಹಾರ ಪದ್ಧತಿ ಮತ್ತು ಒತ್ತಡದ ಜೀವನ ಶೈಲಿಯಿಂದ ಉಂಟಾಗುತ್ತಿರುವ ಕಾಯಿಲೆಗಳಿಗೆ ಪ್ರಾಚೀನ ವೈದ್ಯ ಸಿದ್ಧಾಂತಗಳೇ ಸೂಕ್ತ ಪರಿಹಾರ. ಸಾವಿರಾರು ವರ್ಷಗಳ ಹಿಂದೆಯೇ ಚರಕ ಮಹರ್ಷಿಗಳು ಪ್ರತಿಪಾದಿಸಿದ ಆರೋಗ್ಯ ಸೂತ್ರಗಳು ಇಂದಿನ ಕಾಲಕ್ಕೂ ಅತ್ಯಂತ ಪ್ರಸ್ತುತವಾಗಿವೆ ಎಂದು ಕೃಷ್ಣ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯದ ಅಧ್ಯಕ್ಷ ಡಾ.ಜಯಪ್ರಕಾಶ ಎನ್. ಕರಜಗಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಸಂಕೇಶ್ವರ

ಇಂದಿನ ಬದಲಾದ ಆಹಾರ ಪದ್ಧತಿ ಮತ್ತು ಒತ್ತಡದ ಜೀವನ ಶೈಲಿಯಿಂದ ಉಂಟಾಗುತ್ತಿರುವ ಕಾಯಿಲೆಗಳಿಗೆ ಪ್ರಾಚೀನ ವೈದ್ಯ ಸಿದ್ಧಾಂತಗಳೇ ಸೂಕ್ತ ಪರಿಹಾರ. ಸಾವಿರಾರು ವರ್ಷಗಳ ಹಿಂದೆಯೇ ಚರಕ ಮಹರ್ಷಿಗಳು ಪ್ರತಿಪಾದಿಸಿದ ಆರೋಗ್ಯ ಸೂತ್ರಗಳು ಇಂದಿನ ಕಾಲಕ್ಕೂ ಅತ್ಯಂತ ಪ್ರಸ್ತುತವಾಗಿವೆ ಎಂದು ಕೃಷ್ಣ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯದ ಅಧ್ಯಕ್ಷ ಡಾ.ಜಯಪ್ರಕಾಶ ಎನ್. ಕರಜಗಿ ಅಭಿಪ್ರಾಯಪಟ್ಟರು.

ಪಟ್ಟಣದ ಕೃ಼ಷ್ಣ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಆವರಣದಲ್ಲಿ ಸಂಭ್ರಮದಿಂದ ಜರುಗಿದ ಚರಕ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚರಕ ಸಂಹಿತೆಯು ಬರೀ ರೋಗೋಪಶಮನದ ಔಷಧೀಯ ಕೈಪಿಡಿಯಲ್ಲ. ಬದಲಿಗೆ ಅದೊಂದು ರೋಗಬಾರದಂತೆ ತಡೆಯುವ ಉನ್ನತ ಜೀವನಶೈಲಿ ವಿಜ್ಞಾನ. ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಯುವ ವಿದ್ಯಾರ್ಥಿಗಳು ಈ ಮಹಾನ್ ಗ್ರಂಥದ ಆಳವಾದ ಅಧ್ಯಯನ ನಡೆಸಬೇಕು. ಪ್ರಾಚೀನ ಸಿದ್ಧಾಂತಗಳನ್ನು ಆಧುನಿಕ ಸಂಶೋಧನೆ ಹಾಗೂ ತಂತ್ರಜ್ಞಾನದೊಂದಿಗೆ ಮೇಳೈಸಿ ರೋಗಿಗಳಿಗೆ ಉತ್ತಮ ಸೇವೆ ನೀಡಲು ಮುಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದ ವಿಶೇಷ ಆಕಷರ್ಣೆಯಾಗಿ ಕಾಲೇಜಿನ ವಿವಿಧ ವರ್ಷಗಳ ವಿದ್ಯಾರ್ಥಿಗಳಿಗೆ ಆಯುರ್ವೇದ ತತ್ವಗಳು ಹಾಗೂ ಚರಕ ಸಂಹಿತೆಯ ವಿಷಯಗಳನ್ನಾಧರಿಸಿದ ಪಾತ್ರಾಭಿನಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಅತ್ಯಂತ ಕಲಾತ್ಮಕವಾಗಿ ಶಾಸ್ತ್ರೀಯ ಚಿಂತನೆಗಳನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು. ಈ ಸ್ಪರ್ಧೆಗೆ ಡಾ.ವಿಕಾಸ್ ಔತಾಡ್, ಡಾ.ಅದಿತಿ ಕುಲಕರ್ಣಿ ಮತ್ತು ಡಾ.ಚಂದುಮೂರ್ತಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

ಆರಂಭದಲ್ಲಿ ಧನ್ವಂತರಿ ಹಾಗೂ ಚರಕ ಸಂಹಿತೆಗೆ ವಿಶೇಷ ಪೂಜೆ ನೆರವೇರಿಸಿ, ಚರಕ ವಂದನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಮಾರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಡಾ.ಸಂತೋಷ ಎಸ್.ಖಜ್ಜನವರ, ಪ್ರಾಂಶುಪಾಲ ಡಾ.ಮಂಜುನಾಥ ಎಸ್. ಗವಿಮಠ, ಅಕಾಡೆಮಿಕ್ ಸಂಯೋಜಕಿ ಡಾ.ಮೋನಿಕಾ ಪಾಟೀಲ, ಕೌನ್ಸಿಲ್ ಅಧ್ಯಕ್ಷ ಡಾ.ವಿಕಾಸ್ ಔತಾಡ್, ಉಪನ್ಯಾಸಕರಾದ ಡಾ. ಶೈಲೇಂದ್ರ ಚರಂತಿಮಠ, ಡಾ. ಅಜಿತ್ ಬಡಮಲ್ಲನವರ, ಶಿವಪಾದ ಜೋಶಿ ಸೇರಿದಂತೆ ಹಲವು ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿವೃಂದ ಉಪಸ್ಥಿತರಿದ್ದರು.

---------------

ಕೋಟ್‌....

ದಿನದಿಂದ ದಿನಕ್ಕೆ ಜನರಲ್ಲಿ ಒತ್ತಡದ ಜೀವನ ಹೆಚ್ಚಾಗುತ್ತಿದೆ. ಇದರಿಂದಾಗಿಯೇ ರೋಗ ರುಜಿನಗಳು ದೇಹವನ್ನು ಪ್ರವೇಶಿಸುತ್ತಿವೆ. ಇಂತಹ ಆಧುನಿಕ ಶೈಲಿಯ ಜೀವನದಿಂದಾಗಿ ಉಂಟಾಗುತ್ತಿರುವ ರೋಗಗಳಿಗೆ ಪ್ರಾಚೀನ ವೈದ್ಯ ಸಿದ್ಧಾಂತಗಳು ಪರಿಹಾರ ಒದಗಿಸುತ್ತವೆ. ಹೀಗಾಗಿ ಆಯುರ್ವೇದ ವೈದ್ಯ ಪದ್ಧತಿ ಜನರಿಗೆ ಉತ್ತಮ ಮತ್ತು ಪರಿಣಾಮಕಾರಿಯಾದ ಆರೋಗ್ಯ ಒದಗಿಸುವಲ್ಲಿ ಸಹಾಯ ಮಾಡುತ್ತದೆ.

- ಡಾ.ಜಯಪ್ರಕಾಶ ಎನ್. ಕರಜಗಿ, ಅಧ್ಯಕ್ಷ, ಕೃಷ್ಣ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯದ

-------------