ಕನ್ನಡಪ್ರಭ ವಾರ್ತೆ ಹಾಸನ ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್ ಪ್ರಕರಣದ ಕಿಂಗ್‌ಮೇಕರ್‌ ದೇವರಾಜೇಗೌಡ ಅವರನ್ನು ಕೂಡಲೇ ಬಂಧಿಸಿ ಹಾಸನ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಮಹಿಳಾ ಧ್ವನಿ ಸಂಘದ ರಾಜ್ಯಾಧ್ಯಕ್ಷೆ ಅನ್ನಪೂರ್ಣ ಗೌಡ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ದೇವರಾಜೇಗೌಡ ಅವರು ಹಲವು ಮಹಿಳೆಯರ ಮಾನ, ಮರ್ಯಾದೆಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮುಂದಿನ ಮಾರ್ಚ್ 7 ಮತ್ತು 8ರಂದು ನಡೆಯಲಿರುವ ಮಹಿಳಾ ಸಮಾವೇಶದಲ್ಲಿ ಈ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಗುವುದು. ಜಿಲ್ಲೆಯ ಎಲ್ಲಾ ಮಹಿಳಾ ಸಂಘಟನೆಗಳು ಒಂದಾಗಿ ಸೇರಿ ದೇವರಾಜೇಗೌಡ ವಿರುದ್ಧ ಹೋರಾಟ ಹಮ್ಮಿಕೊಳ್ಳಲಿವೆ ಎಂದು ತಿಳಿಸಿದರು. ಮಹಿಳೆಯರ ಗೌರವಕ್ಕೆ ಧಕ್ಕೆ ಉಂಟುಮಾಡುವ ಯಾವುದೇ ಹೇಳಿಕೆ ಅಥವಾ ನಡೆನುಡಿಗಳನ್ನು ಸಹಿಸಲಾಗುವುದಿಲ್ಲ. ತಮ್ಮ ವಿರುದ್ಧವೂ ಪೂರ್ವಾಪರ ತಿಳಿಯದೆ ರಾಜಕೀಯ ದ್ವೇಷದಿಂದ ಆರೋಪಗಳನ್ನು ಮಾಡಲಾಗಿದೆ. ಯಾವುದೇ ಮಹಿಳೆಯ ಬಗ್ಗೆ ತೀರಾ ಹೀನಾಯ ಹಾಗೂ ಅವ್ಯಾಚ್ಯ ಶಬ್ದಗಳನ್ನು ಬಳಸುವುದು ಅಕ್ಷಮ್ಯ ಎಂದು ಖಂಡಿಸಿದರು. ಇಂತಹ ಹೇಳಿಕೆಗಳನ್ನು ಮುಂದುವರಿಸಿದರೆ ಕಾನೂನು ಹೋರಾಟದ ಜೊತೆಗೆ ಸಾರ್ವಜನಿಕ ಮಟ್ಟದಲ್ಲೂ ತೀವ್ರ ಪ್ರತಿಭಟನೆ ನಡೆಸಲಾಗುವುದು. ದೇವರಾಜೇಗೌಡ ಅವರ ಹೇಳಿಕೆಗಳು ಹಾಗೂ ವರ್ತನೆ ಕುರಿತು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಗಂಭೀರ ತನಿಖೆ ನಡೆಸಬೇಕು. ಮುಖ್ಯಮಂತ್ರಿಗಳು, ಗೃಹ ಸಚಿವರು, ಉಪ ಮುಖ್ಯಮಂತ್ರಿಗಳು ಹಾಗೂ ಪೊಲೀಸ್ ಮಹಾನಿರ್ದೇಶಕರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಮುಖಂಡರಾದ ರತ್ನಮ್ಮ, ಶಶಿಕಲಾ, ಜ್ಯೋತಿ, ರೇಣುಕಾ ಸೇರಿದಂತೆ ಇತರರು ಉಪಸ್ಥಿತರಿದ್ದರು.