ಮುರುಘಾಶ್ರೀ ಪೋಕ್ಸೋ ಪ್ರಕರಣಕ್ಕೆ ಮತ್ತೊಂದು ತಿರುವು

| Published : May 29 2024, 12:52 AM IST

ಸಾರಾಂಶ

1ನೇ ಪ್ರಕರಣದ ಸಂತ್ರಸ್ತ ಬಾಲಕಿಯಿಂದ ಇದೀಗ ಸಿಡಬ್ಲ್ಯುಸಿಗೆ ದೂರು ದಾಖಲಾಗಿದ್ದು, ಚಿಕ್ಕಪ್ಪನಿಂದ ಕಿರುಕುಳ ಆರೋಪ ಮಾಡಲಾಗಿದೆ. ಇನ್ನು ಸಂತ್ತಸ್ಥೆಯ ಚಿಕ್ಕಪ್ಪನಿಗೆಆಮಿಷವೊಡ್ಡಿ, ಒತ್ತಡ ಹಾಕಿ ಪ್ರಕರಣ ದಿಕ್ಕು ತಪ್ಪಿಸುವ ಹುನ್ನಾರ ನಡೆದಿ ಎಂದು ಒಡನಾಡಿ ಸ್ಟಾನ್ಲಿ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಅಪ್ರಾಪ್ತರ ಮೇಲಿನ ಲೈಂಗಿಕ ಕಿರುಕುಳಕ್ಕೆಸಂಬಂಧಿಸಿದಂತೆ ಮುರುಘಾಶ್ರೀ ಮೇಲೆ ದಾಖಲಾಗಿರುವ ಪೋಕ್ಸೋ ಮೊದಲ ಪ್ರಕರಣ ಮಂಗಳವಾರ ಮತ್ತೊಂದು ತಿರುವು ಪಡೆದಿದೆ. ಪ್ರಕರಣದ ಸಂತ್ರಸ್ತೆ ನನ್ನ ಚಿಕ್ಕಪ್ಪ ನನಗೂ ಹಾಗೂ ನನ್ನ ತಮ್ಮನಿಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಯ್ಸೂಸಿ) ಮೊರೆ ಹೋಗಿದ್ದಾರೆ. ಇದಕ್ಕೂ ಮೊದಲು ಮೇ 24ರಂದು ಮಹಿಳಾ ಠಾಣೆಗೆ ಸಂತ್ರಸ್ತೆ ಚಿಕ್ಕಪ್ಪ ದೂರು ನೀಡಿ ಬಾಲಕಿ ಮನೆಯಿಂದ ನಾಪತ್ತೆಯಾಗಿದ್ದಳೆಂಬ ಸಂಗತಿಯ ಪೊಲೀಸರ ಗಮನಕ್ಕೆ ತಂದಿದ್ದರು. ಮಂಗಳವಾರ ಸಂಜೆ ಸಂತ್ರಸ್ತ ಬಾಲಕಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾಗುವುದರ ಮೂಲಕ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಾಳೆ.

ಮೇ 24 ರಂದು ಚಿತ್ರದುರ್ಗದ ನಿವಾಸದಿಂದ ನಾಪತ್ತೆಯಾದ ಸಂತ್ರಸ್ತೆ ನೇರವಾಗಿ ಮೈಸೂರಿನ ಒಡನಾಡಿ ಸಂಸ್ಥೆಗೆ ಹೋಗಿ ತಮ್ಮ ಚಿಕ್ಕಪ್ಪ ಕಿರುಕುಳ ನೀಡುತ್ತಿರುವ ಸಂಗತಿ ಗಮನಕ್ಕೆ ತಂದಿದ್ದಾಳೆ. ನಂತರ ಒಡನಾಡಿ ಸಂಸ್ಥೆಯವರು ಅಲ್ಲಿನ ಮಕ್ಕಳ ಕಲ್ಯಾಣ ಸಮಿತಿಗೆ ಸಂತ್ರಸ್ತೆಯ ಕರೆದೊಯ್ದು ದೂರು ದಾಖಲಿಸಿದ್ದಾರೆ. ಸಿಡಬ್ಲ್ಯೂಸಿ ಸೂಚನೆ ಅನ್ವಯ ಎರಡು ಮೂರು ದಿನ ತಮ್ಮ ಬಳಿ ಇಟ್ಟುಕೊಂಡು ನಂತರ ಮಂಗಳವಾರ ನೇರವಾಗಿ ಚಿತ್ರದುರ್ಗಕ್ಕೆ ಕರೆತೊಂದು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಸಂತ್ರಸ್ಥೆ ತನ್ನ ಚಿಕ್ಕಪ್ಪನ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾಳೆ. ಆರೋಪಿ ಮುರುಘಾಶ್ರೀ ಬೆಂಬಲಿಗರು ನಮ್ಮ ಚಿಕ್ಕಪ್ಪಗೆ ಆಮಿಷವೊಡ್ಡಿ ಒತ್ತಡ ಹಾಕುತ್ತಿದ್ದಾರೆ. ಹಾಗಾಗಿ ಚಿಕ್ಕಪ್ಪ ಕಿರುಕುಳ ನೀಡುತ್ತಿದ್ದಾನೆ. ನನ್ನ ಸಹೋದರ ಕೂಡ ಕಿರುಕುಳ ಅನುಭವಿಸುತ್ತಿದ್ದಾನೆಂದು ದೂರಿದ್ದಾಳೆ.ಮೈಸೂರು ಸಿಡಬ್ಲ್ಯುಸಿ ಬಳಿ ಸಂತ್ರಸ್ತೆ ಸವಿವರವಾಗಿ ಎಲ್ಲವನ್ನೂ ಹೇಳಿದ್ದಾಳೆ. ಇದೊಂದು ಅಕ್ಷಮ್ಯ ಅಪರಾಧವಾಗಿದ್ದು, ಒಂದು ಸಿಂಡಿಕೇಟ್ ಕೆಲಸ ಮಾಡಿದೆ, ಹಣಕಾಸು ವಹಿವಾಟು ನಡೆದಿದೆ. ಸಂತ್ರಸ್ತೆಯ ದೈಹಿಕ ಮತ್ತು ಮಾನಸಿಕ ಕ್ಷೋಭೆಗೆ ಒಳಪಡಿಸಲಾಗಿದೆ. ಅವರ ಚಿಕ್ಕಪ್ಪ ಹೊಡೆಯೋದು, ಬಡೆಯೋದು, ನೇಣು ಹಾಕುತ್ತೇನೆ ಎಂದಿದ್ದಾರೆ‌. ಊಟದಲ್ಲಿ ವಿಷ ಕೊಟ್ಟು ಸಾಯಿಸುತ್ತೇನೆ ಎಂದು ಬೆದರಿಸಿದ್ದಾರೆ. ಹಾಗಾಗಿ ಸಂತ್ರಸ್ತೆ ರಾತ್ರೋ ನಮ್ಮ ಬಳಿಗೆ ಓಡಿ ಬಂದಿದೆ ಎಂದು ಸ್ಟ್ಯಾನ್ಲಿ ಹೇಳಿದರು.ಇದರ ಹಿಂದೆ ಬಹಳ ಪ್ರಬಲ ಕಾರಣ ಇದೆ. ಪೋಕ್ಸೋ ಅಪರಾಧ ಮುಚ್ಚಿ ಹಾಕಲು ಸಂಘಟಿತ ಪ್ರಯತ್ನ ನಡೆದಿದೆ. ಪೋಕ್ಸೋ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಆಗಿದೆ. ಸಾಕ್ಷಿ ಹೇಳಬಾರ್ದು, ವಿಮುಖ ಆಗಬೇಕು ಎಂದು ಸಂತ್ರಸ್ತೆ ಮೇಲೆ ಒತ್ತಡ ಹಾಕಿದ್ದಾರೆ. ದೇವರ ಮುಂದೆ ನಿಲ್ಲಿಸಿ ಪ್ರಮಾಣ ಮಾಡಿಸಿದ್ದಾರೆ ಎಂದು ಆಕೆ ಹೇಳಿದ್ದಾಳೆ. ತಮ್ಮನ ಮೇಲೆ ಆಣೆ ಮಾಡಿಸಿ ಕೂಡ ವಿಡಿಯೋ ಮಾಡಿದ್ದಾರೆ. ಸಿಡಬ್ಲ್ಯುಸಿ ಮುಂದೆ ಎಲ್ಲವನ್ನೂ ಆಕೆ ಹೊರ ಹಾಕಿದ್ದಾಳೆ. ಸರಿಯಾದ ತನಿಖೆ ಮೂಲಕ ಎಲ್ಲವೂ ಬಹಿರಂಗ ಆಗಬೇಕು. ಅಲ್ಲಿನ ಸಿಡಬ್ಲ್ಯುಸಿ ವರದಿಯನ್ನು ಮೈಸೂರಿಂದ ಚಿತ್ರದುರ್ಗಕ್ಕೆ ವರ್ಗಾವಣೆ ಮಾಡಿದ್ದಾರೆ ಎಂದು ಸ್ಟಾನ್ಲಿ ಹೇಳಿದರು.ಸಂತ್ರಸ್ತ ಬಾಲಕಿಯ ಕೊಂಡುಕೊಂಡು ಪ್ರಕರಣ ದಿಕ್ಕು ತಪ್ಪಿಸುವ ಹುನ್ನಾರ ನಡೆದಿದೆ. ಸಂತ್ರಸ್ತ ಬಾಲಕಿಗೆ ಶಿಕ್ಷಣದಿಂದ ವಂಚನೆ ಮಾಡಲಾಗಿದ್ದು, ಪರೀಕ್ಷೆಗೆ ಕಳುಹಿಸದೆ ಬದುಕಿಗೆ ಕೊಳ್ಳಿ ಇಡಲಾಗಿದೆ ಎಂದು ಸ್ಟಾನ್ಲಿ ದೂರಿದರು. ಚಿತ್ರದುರ್ಗದ ಸಿಡಬ್ಲೂಸಿಗೆ ಈ ಬಗ್ಗೆ ಬಾಲಕಿ ದೂರು ದಾಖಲಿಸಲಿದ್ದಾಳೆ ಎಂದರು. ಸಂತ್ರಸ್ತೆ ತಮ್ಮ ಬಳಿಗೆ ಆಗಮಿಸಿರುವುದರ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ, ಚಿತ್ರದುರ್ಗದ ಬಾಲಕಿಯರ ಬಾಲಭವನದಲ್ಲಿ ಆಕೆಯ ಆಪ್ತ ಸಮಾಲೋಚನೆ ನಡೆಸಲಾಗುತ್ತಿದೆ ಎಂದರು.