ಭೂಮಿ ಪಡೆಯುವಾಗ ಉದ್ಯೋಗದಲ್ಲಿ ಸ್ಥಳೀಯರಿಗೆ ಮೊದಲನೇ ಆದ್ಯತೆ ಎಂದು ಭರವಸೆ ನೀಡಿದ್ದರು. ಆದರೆ, ಈಗ ಉದ್ಯೋಗ ಮಾಡುತ್ತಿರುವ ಸ್ಥಳೀಯರನ್ನು ಸುಖಾಸುಮ್ಮನೆ ಆರೋಪ ಮಾಡಿ ಕೆಲಸದಿಂದ ವಜಾ ಮಾಡಿದ್ದಾರೆ. ನಮ್ಮ ಗ್ರಾಮದ ದೊಡ್ಡ ಮಂಜಿಕೆರೆಗೆ ಫುಡ್ ಫ್ಯಾಕ್ಟರಿಯಿಂದ ಕಲುಷಿತ ನೀರು ಬರುತ್ತಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮೆಗಾ ಫೇವರಿಚ್ ಫುಡ್ ಕಂಪನಿಯು ರೈತ ವಿರೋಧಿ ನಿಲುವು ಹೊಂದಿ ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪಿಸಿ ಬಣ್ಣೇನಹಳ್ಳಿ ಸುತ್ತಮುತ್ತಲಿನ ರೈತರು ಕಂಪನಿ ವಿರುದ್ಧ ಪ್ರತಿಭಟನೆ ನಡೆಸಿದರು.

ತಾಲೂಕಿನ ಬಣ್ಣೇನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಆಗಮಿಸಿದ ರೈತರು, ಸುಮಾರು 300 ಎಕರೆಗೂ ಅಧಿಕ ಭೂಮಿಯನ್ನು ಕಡಿಮೆ ಬೆಲೆಗೆ ಕೊಂಡು ರೈತರಿಗೆ ವಂಚಿಸಿದೆ. ಭೂಮಿ ಖರೀದಿಸಿದ ವೇಳೆ ಆಗಿರುವ ಒಪ್ಪಂದದ ಪ್ರಕಾರ ನಡೆದುಕೊಳ್ಳದೆ ಮಾತಿಗೆ ತಪ್ಪಿದ್ದಾರೆ ಎಂದು ದೂರಿದರು.

ಭೂಮಿ ಪಡೆಯುವಾಗ ಉದ್ಯೋಗದಲ್ಲಿ ಸ್ಥಳೀಯರಿಗೆ ಮೊದಲನೇ ಆದ್ಯತೆ ಎಂದು ಭರವಸೆ ನೀಡಿದ್ದರು. ಆದರೆ, ಈಗ ಉದ್ಯೋಗ ಮಾಡುತ್ತಿರುವ ಸ್ಥಳೀಯರನ್ನು ಸುಖಾಸುಮ್ಮನೆ ಆರೋಪ ಮಾಡಿ ಕೆಲಸದಿಂದ ವಜಾ ಮಾಡಿದ್ದಾರೆ. ನಮ್ಮ ಗ್ರಾಮದ ದೊಡ್ಡ ಮಂಜಿಕೆರೆಗೆ ಫುಡ್ ಫ್ಯಾಕ್ಟರಿಯಿಂದ ಬರುವ ಕಲುಷಿತ ನೀರನ್ನು ಬಿಟ್ಟು ಸಂಪೂರ್ಣ ಮಲಿನವಾಗಿ ಜಾನುವಾರುಗಳು ಕುಡಿಯಲು ಯೋಗ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆರೆಯಲ್ಲಿ ಜಾನುವಾರುಗಳನ್ನು ತೊಳೆದರೆ ನಮಗೆ ದೇಹದಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಕೆರೆಯನ್ನು ಫುಡ್ ಫ್ಯಾಕ್ಟರಿಯಿಂದ ರಕ್ಷಣೆ ಮಾಡಬೇಕು. ಮುಖ್ಯ ರಸ್ತೆಯಿಂದ ಬಣ್ಣೇನಹಳ್ಳಿಯನ್ನು ಸಂಪರ್ಕಿಸುವ ರಸ್ತೆಯನ್ನು ಫುಡ್ ಫ್ಯಾಕ್ಟರಿಯವರು ಮುಚ್ಚಿ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕೆರೆಯ ಸುತ್ತ 30 ಅಡಿ ರಸ್ತೆ ನಿರ್ಮಾಣ ಮಾಡಲು ಅವಕಾಶ ಮಾಡಿಕೊಡಬೇಕು. ರೈತರ ಸಮಸ್ಯೆ ಬಗೆಹರಿಯದಿದ್ದರೆ ಫುಡ್ ಫ್ಯಾಕ್ಟರಿ ಮುಂಭಾಗ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜೆಡಿಎಸ್ ರೈತ ಮೋರ್ಚಾ ಘಟಕದ ಅಧ್ಯಕ್ಷ ಬೂಕನಕೆರೆ ಹುಲ್ಲೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಬಲದೇವ್, ನಿರ್ದೇಶಕ ಕಿಕ್ಕೇರಿ ಮಧು, ಕಿಕ್ಕೇರಿ ಶೇಖರ್, ಹುಬ್ಬನಹಳ್ಳಿ ಬಲರಾಮು, ದೊಡ್ಡಯಾಚೇನಹಳ್ಳಿ ಸಂದೇಶ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಹದೇವೇಗೌಡ ಸೇರಿದಂತೆ ಸ್ಥಳೀಯ ರೈತರು ಇದ್ದರು.

ಮುಂದಾಗುವ ಘಟನೆಗಳಿಗೆ ಜಿಲ್ಲಾಡಳಿತವೇ ನೇರ ಹೊಣೆ: ಎಚ್.ಟಿ.ಮಂಜು

ಕೆ.ಆರ್.ಪೇಟೆ:

ಮೆಗಾ ಫೇವರಿಚ್ ಫುಡ್ ಕಂಪನಿ ಎದುರು ರೈತರ ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಎಚ್.ಟಿ.ಮಂಜು, ಫುಡ್ ಕಂಪನಿ ರೈತರ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ಖಂಡಿಸಿದರು.

ರೈತರ ಸಮಸ್ಯೆಗೆ ಈ ಜಿಲ್ಲಾಡಳಿತವೇ ನೇರ ಹೊಣೆ. ಗ್ರಾಮೀಣ ರಸ್ತೆಯನ್ನು ಫುಡ್ ಫ್ಯಾಕ್ಟರಿ ಆಡಳಿತ ಕೆರೆ ಸಮೇತ ಒತ್ತುವರಿ ಮಾಡಿ ರೈತರ ಮುಕ್ತ ಸಂಚಾರಕ್ಕೆ ಅಡ್ಡಿ ಮಾಡಿದೆ ಎಂದು ದೂರಿದರು.

ರಸ್ತೆಯನ್ನು ಮುಚ್ಚಿದರೆ ರೈತರು ತಮ್ಮ ಕೃಷಿ ಭೂಮಿಗೆ ಯಾವ ಕಡೆಯಿಂದ ಹೋಗಬೇಕು. ರಸ್ತೆಯೇ ಇಲ್ಲದ ಮೇಲೆ ರೈತರು ಕೃಷಿ ಮಾಡುವುದಾದರೂ ಹೇಗೆ?. ಇಲ್ಲಿನ ಸಮಸ್ಯೆ ಬಗ್ಗೆ ನಾನು ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಮತ್ತು ಸ್ಥಳೀಯ ತಹಸೀಲ್ದಾರರ ಗಮನಕ್ಕೂ ತಂದಿದ್ದೇನೆ ಎಂದರು.

ಕೆರೆ ಪ್ರದೇಶವನ್ನು ಸರ್ವೇ ಮಾಡಿಸಿ ತಾಲೂಕು ಆಡಳಿತ ತನ್ನ ಸುಪರ್ಧಿಗೆ ತೆಗೆದುಕೊಳ್ಳಲು ಮುಂದಾಗಿಲ್ಲ. ರೈತರ ಮೇಲೆ ಕಾನೂನು ಪ್ರಯೋಗಿಸುವ ಪೊಲೀಸರು ಕೆರೆಯನ್ನು ಅತಿಕ್ರಮಿಸಿ ರಸ್ತೆ ಮುಚ್ಚಿರುವ ಉದ್ದಿಮೆದಾರರ ಮೇಲೆ ಕಾನೂನು ಪ್ರಯೋಗಿಸುತ್ತಿಲ್ಲ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಮೇಲೆ ದಬ್ಬಾಳಿಕೆ ನಡೆಸಿದರೆ ಅದರ ಪರಿಣಾಮ ಬೇರೆಯಾಗುತ್ತದೆ. ಸಮಸ್ಯೆ ಬಗೆಹರಿಯುವ ತನಕ ಅಧಿಕಾರಿಗಳು ಸುಮ್ಮನಿದ್ದು, ರೈತರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಇಲ್ಲವಾದರೆ ಮುಂದಾಗುವ ಪರಿಣಾಮಗಳಿಗೆ ಜಿಲ್ಲಾಡಳಿತವೇ ನೇರ ಹೊಣೆ ಎಂದು ಎಚ್ಚರಿಸಿದರು.