ನಕಲಿ ಪತ್ರಕರ್ತರ ಕಡಿವಾಣ ಹಾಕುವಂತೆ ಮನವಿ

| Published : Jun 05 2025, 01:21 AM IST

ಸಾರಾಂಶ

ಕೊಟ್ಟೂರು ತಾಲೂಕಿನಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ಕೂಡಲೇ ನಿಯಂತ್ರಣಕ್ಕೆ ತಂದು ನೈಜ ಪತ್ರಕರ್ತರಿಗೆ ರಕ್ಷಣೆ ಮತ್ತು ನ್ಯಾಯ ಒದಗಿಸಿಕೊಡಬೇಕಲ್ಲದೆ ನಕಲಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕೊಟ್ಟೂರು

ಕೊಟ್ಟೂರು ತಾಲೂಕಿನಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ಕೂಡಲೇ ನಿಯಂತ್ರಣಕ್ಕೆ ತಂದು ನೈಜ ಪತ್ರಕರ್ತರಿಗೆ ರಕ್ಷಣೆ ಮತ್ತು ನ್ಯಾಯ ಒದಗಿಸಿಕೊಡಬೇಕಲ್ಲದೆ ನಕಲಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಾಲೂಕು ಕಾರ್ಯ ನಿರತ ಪತ್ರಕರ್ತ ಸಂಘದವರು ತಹಶೀಲ್ದಾರ್‌ಗೆ ಬುಧವಾರ ಮನವಿ ಸಲ್ಲಿಸಿದರು.

ಇಲ್ಲಿನ ತಾಲೂಕು ಕಾರ್ಯಾಲಯದಲ್ಲಿ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಸುರೇಶ ದೇವರಮನೆ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.

ನೈಜ ಮತ್ತು ಕರ್ತವ್ಯ ನಿಷ್ಠ ಪತ್ರಕರ್ತರಿಗೆ ನಕಲಿಗಳಿಂದ ಮುಜಗರ ಉಂಟಾಗುತ್ತಿದೆ. ಅಲ್ಲದೆ ಪತ್ರಕರ್ತರ ಹೆಸರಿನಲ್ಲಿ ಅಧಿಕಾರಿಗಳು ಮತ್ತಿತರರ ಮೇಲೆ ದೌರ್ಜನ್ಯ ಎಸಗುವುದಲ್ಲದೆ ಹಣ ವಸೂಲಿ ಮಾಡುವ ಕುರಿತು ಸಾಕಷ್ಟು ಸಾರ್ವಜನಿಕರು ದೂರು ಸಲ್ಲಿಸುತ್ತಿದ್ದು, ಈ ಕುರಿತು ತಾಲೂಕು ಆಡಳಿತ ಗಮನ ಹರಿಸಿ ನೈಜ ಪತ್ರಕರ್ತರ ಕಾರ್ಯಕ್ಕೆ ಸಹಕರಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ.

ಈ ವೇಳೆ ಸಂಘದ ಜಿಲ್ಲಾ ಉಪಾಧ್ಯಕ್ಷ ಉಜ್ಜಿನಿ ರುದ್ರಪ್ಪ, ಜಿಲ್ಲಾ ಕಾರ್ಯದರ್ಶಿ ಎಂ. ರವಿಕುಮಾರ್, ತಾಲೂಕು ಕಾರ್ಯದರ್ಶಿ ಬದ್ದಿ ಮಂಜುನಾಥ, ಸದಸ್ಯರಾದ ಎಸ್.ಎಂ. ಗುರುಪ್ರಸಾದ, ಬಂಧತರ ಪ್ರಕಾಶ್, ಹಳ್ಳಿ ಕೊಟ್ರೇಶ್, ಚಿಗಟೇರಿ ಕೊಟ್ರೇಶ್, ಎನ್. ನಾಗರಾಜ್ ಇದ್ದರು.

ಶಾಸಕ ಜೆ.ಎನ್. ಗಣೇಶ್ ಜನ್ಮದಿನಾಚರಣೆ:

ಕಂಪ್ಲಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮೆಟ್ರಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸಕೋಟೆ ಜಗದೀಶ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಶಾಸಕ ಜೆ.ಎನ್. ಗಣೇಶ್ ಅವರ 46ನೇ ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸಿದರು.ಈ ವೇಳೆ ಹೊಸಕೋಟೆ ಜಗದೀಶ್ ಮಾತನಾಡಿ, ಶಾಸಕ ಜೆ.ಎನ್. ಗಣೇಶ್ ಕಂಪ್ಲಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಹಾಗೂ ಶಿಕ್ಷಣ, ಆರೋಗ್ಯ ಸೇರಿ ನಾನಾ ಸೌಲಭ್ಯಗಳನ್ನು ಜನತೆಗೆ ಒದಗಿಸುವಲ್ಲಿ ಗಣೇಶ್ ಅವಿರತ ಶ್ರಮಿಸುತ್ತಿದ್ದಾರೆ ಎಂದರು.ಹುಟ್ಟುಹಬ್ಬದ ನಿಮಿತ್ತ ಮಕ್ಕಳಿಗೆ ಸಿಹಿಯೊಂದಿಗೆ ನೋಟ್‌ಪುಸ್ತಕ, ಲೇಖನಿ ವಿತರಿಸಲಾಯಿತು. ಈ ಸಂದರ್ಭ ಪುರಸಭಾಧ್ಯಕ್ಷ ಭಟ್ಟ ಪ್ರಸಾದ್, ಸ್ಥಾಯಿಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ, ಪ್ರಮುಖರಾದ ಸಿ.ಆರ್. ಹನುಮಂತ, ಹೊನ್ನಳ್ಳಿ ಗಂಗಾಧರ, ಬಿ.ನಾರಾಯಣಪ್ಪ, ಬಿ.ನಾರಾಯಣಪ್ಪ, ಜಿ.ಮರೇಗೌಡ, ಜಿ.ಅಂಜಿನಪ್ಪ, ಕರಿಬಸವನಗೌಡ್ರು, ಕೆ.ರಾಜಪ್ಪ, ಕೆ.ರೇಣುಕಪ್ಪ, ಮೆಟ್ರಿ ಜಗದೀಶ್, ಬಳೆ ಮಲ್ಲಿಕಾರ್ಜುನ, ಹಾದಿಮನಿ ಕಾಳಿಂಗವರ್ಧನ, ಬಿ.ಜಾಫರ್ ಇತರರಿದ್ದರು.