ನಿಯಮಬಾಹಿರವಾಗಿ ಇ-ಪ್ಲಾಟ್ಫಾರ್ಮಗಳ ಮೂಲಕ ನಡೆಯುತ್ತಿರುವ ಆನ್ಲೈನ್ ಔಷಧ ಸರಬರಾಜಿಗೆ ಲಂಗು ಲಗಾಮಿಲ್ಲದಂತಾಗಿ, ಔಷಧ ಮಾರಾಟ ಅವಲಂಬಿಸಿದ ಕುಟುಂಬಗಳ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ ಎಂದು ಔಷಧ ವ್ಯಾಪಾರಸ್ಥರು ಬುಧವಾರ ಒಂದು ದಿನ ಅಂಗಡಿ ಬಂದ್ ಮಾಡಿ ಜಿಲ್ಲಾಧಿಕಾರಿ ಹಾಗೂ ಸಹಾಯಕ ಔಷಧ ನಿಯಂತ್ರಕರಿಗೆ ಮನವಿ ಸಲ್ಲಿಸಿದರು.
ಔಷಧ ಮಾರಾಟ ಅವಲಂಬಿಸಿದ ಕುಟುಂಬಗಳ ಅಳಿವು ಉಳಿವಿನ ಪ್ರಶ್ನೆ
ಕನ್ನಡಪ್ರಭ ವಾರ್ತೆ ಕುಮಟಾನಿಯಮಬಾಹಿರವಾಗಿ ಇ-ಪ್ಲಾಟ್ಫಾರ್ಮಗಳ ಮೂಲಕ ನಡೆಯುತ್ತಿರುವ ಆನ್ಲೈನ್ ಔಷಧ ಸರಬರಾಜಿಗೆ ಲಂಗು ಲಗಾಮಿಲ್ಲದಂತಾಗಿ, ಔಷಧ ಮಾರಾಟ ಅವಲಂಬಿಸಿದ ಕುಟುಂಬಗಳ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ ಎಂದು ಔಷಧ ವ್ಯಾಪಾರಸ್ಥರು ಬುಧವಾರ ಒಂದು ದಿನ ಅಂಗಡಿ ಬಂದ್ ಮಾಡಿ ಜಿಲ್ಲಾಧಿಕಾರಿ ಹಾಗೂ ಸಹಾಯಕ ಔಷಧ ನಿಯಂತ್ರಕರಿಗೆ ಮನವಿ ಸಲ್ಲಿಸಿದರು.
ಕೊರೋನಾ ಸಮಯದಲ್ಲಿ ಜಾರಿಗೆ ತಂದ ಜಿ.ಎಸ್.ಆರ್.೨೨೦(ಇ) ನಿಯಮ ಇಂದಿಗೂ ಮುಂದುವರೆದಿದೆ. ಮನೆಮನೆಗೆ ಔಷಧ ತಲುಪಿಸುವ ಇಂಥ ನಿಯಮಗಳ ದುರುಪಯೋಗವಾಗುತ್ತಿದೆ. ಇದರಿಂದ ನಕಲಿ ಔಷಧಗಳು ಮತ್ತು ನಾಲ್ಕನೆಯ ತಲೆಮಾರಿನ ಆಂಟಿಬಯಾಟಿಕ್ಗಳು ಮನಬಂದಂತೆ ಬಳಸುವ ಪ್ರವೃತ್ತಿಗೆ ಕಾರಣವಾಗಿದೆ. ದೊಡ್ಡ ಔಷಧ ಕಂಪನಿಗಳು ಕೂಡಾ ರಿಯಾಯಿತಿ ನೀಡುವಲ್ಲಿ ತಾರತಮ್ಯ ಮಾಡುತ್ತಿವೆ. ಇದರಿಂದ ಸಣ್ಣ ಔಷಧ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ.ಇ-ಪ್ಲಾಟ್ ಫಾರ್ಮಗಳು ಲೂಟಿಗಿಳಿದಿವೆ. ಯುವಜನತೆ ಮಾದಕ ಔಷಧಗಳ ವ್ಯಸನಕ್ಕೀಡಾಗುತ್ತಿದ್ದಾರೆ. ಜನರಲ್ಲಿ ರೋಗನಿರೋಧಕ ಶಕ್ತಿ ಕುಂಠಿತವಾಗುತ್ತಿದೆ. ಹೀಗಾಗಿ ಸಾರ್ವಜನಿಕರ ಆರೋಗ್ಯ ಮತ್ತು ಔಷಧ ವ್ಯಾಪಾರಸ್ಥರ ಅಸ್ತಿತ್ವಕ್ಕಾಗಿ ಅನಿವಾರ್ಯವಾಗಿ ಒಂದು ದಿನದ ಬಂದ್ ಮಾಡಿ ಮುಷ್ಕರ ನಡೆಸಿದ್ದೇವೆ. ಆದ್ದರಿಂದ ಆನ್ಲೈನ್ ಔಷಧ ಮುಕ್ತ ಸರಬರಾಜಿಗೆ ಪೂರಕವಾದ ಜಿ.ಎಸ್.ಆರ್ ೮೧೭ ನಿಯಮವನ್ನು ಸರ್ಕಾರ ಹಿಂಪಡೆಯಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ ಎಂದು ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಅತುಲ ಕಾಮತ ತಿಳಿಸಿದರು.
ಮನವಿ ಸಲ್ಲಿಕೆ ವೇಳೆ ಉ.ಕ. ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ದೇವಿದಾಸ ಪ್ರಭು ಅಂಕೋಲಾ, ಪದಾಧಿಕಾರಿಗಳಾದ ಕಿರಣ ಪ್ರಭು ಹೊನ್ನಾವರ, ಅಶ್ವಿನ್ ದೇಸಾಯಿ ಕಾರವಾರ, ಅತುಲ ಕಾಮತ ಕುಮಟಾ, ಗಣೇಶ ಎಂ.ಕೆ. ಕುಮಟಾ ಇನ್ನಿತರರು ಪಾಲ್ಗೊಂಡಿದ್ದರು.