ಸಂಗೀತ, ಚಿತ್ರಕಲಾ, ರಂಗಕಲಾವಿದ ಶಿಕ್ಷಕರ ನೇಮಿಸಿ

| Published : Dec 13 2023, 01:00 AM IST

ಸಾರಾಂಶ

ಮಕ್ಕಳ ಬೌದ್ಧಿಕ, ಮಾನಸಿಕ, ಭಾವನಾತ್ಮಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಇವುಗಳು ತುಂಬಾ ಅವಶ್ಯಕ. ಇದನ್ನು ಗಂಭೀರವಾಗಿ ಪರಿಗಣಿಸಿಯೇ ಶಿಕ್ಷಣ ತಜ್ಞರು ಪ್ರೌಢಶಾಲಾ ಹಂತದಲ್ಲಿಯೇ ಮಕ್ಕಳಿಗೆ ಈ ಲಲಿತಕಲೆಗಳ ಅರಿವು ಮತ್ತು ತರಬೇತಿ ಸಿಗಲೆಂದು ಪರಿಣಿತಿ ಹೊಂದಿದ ಶಿಕ್ಷಕರ ನೇಮಕಾತಿಗೆ ಶಿಫಾರಸು ಮಾಡಿದ್ದಾರೆ. ಈ ಹಿಂದಿನ ಅನೇಕ ಶಿಕ್ಷಣ ಆಯೋಗಗಳೂ ಈ ಅಂಶವನ್ನು ಎತ್ತಿಹಿಡಿದಿವೆ ಎಂದರಲ್ಲದೆ, ರಾಜ್ಯ ಸರ್ಕಾರ ಸಂಗೀತ, ಚಿತ್ರಕಲಾ, ರಂಗಕಲಾ ಮತ್ತು ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಬೇಕು

ಕನ್ನಡಪ್ರಭ ವಾರ್ತೆ ಬಳ್ಳಾರಿ

ಸಂಗೀತ, ಚಿತ್ರಕಲಾ, ರಂಗ ಕಲಾ ಮತ್ತು ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವಂತೆ ಒತ್ತಾಯಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಒಕ್ಕೂಟ(ಎಐಡಿವೈಒ) ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಶರಣಪ್ಪ ಉದ್ಬಾಳ್, ರಾಜ್ಯದಲ್ಲಿ ಒಟ್ಟು 5240 ಸರ್ಕಾರಿ ಪ್ರೌಢಶಾಲೆಗಳಿವೆ. ಅವುಗಳಲ್ಲಿ ಕೆಲಸ ಮಾಡುತ್ತಿರುವ ಈ ಎಲ್ಲ ಸಹಪಠ್ಯ ವಿಷಯಗಳ ಬೋಧಕರ ಸಂಖ್ಯೆ 1500 ದಾಟುವುದಿಲ್ಲ. ಅದರಲ್ಲಿ ಅನೇಕರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಇನ್ನೂ ಕೆಲವರನ್ನು ಕಡಿಮೆ ದಾಖಲಾತಿಯ ಕಾರಣಕ್ಕೆ ಬೇರೆ ಶಾಲೆಗಳಿಗೆ ವರ್ಗಾಯಿಸಲಾಗುತ್ತಿದೆ. ಪ್ರತಿ ಮಗುವಿಗೂ ಈ ವಿಷಯಗಳಲ್ಲಿ ಅರಿವು ತರಬೇತಿ ಬೇಕೆಂದ ಮೇಲೆ ಕಡಿಮೆ ದಾಖಲಾತಿಯ ಕಾರಣಕ್ಕೆ ಅಲ್ಲಿಂದ ಶಿಕ್ಷಕರನ್ನು ವರ್ಗಾಯಿಸುವ ಕ್ರಮವೇ ಅವೈಜ್ಞಾನಿಕವಾಗಿದೆ. ಇದರಿಂದಾಗಿ ರಾಜ್ಯದ ಬಹುತೇಕ ಶಾಲೆಗಳಲ್ಲಿಂದು ಸಹಪಠ್ಯ ವಿಷಯಗಳ ಬೋಧನೆಗೆ ಶಿಕ್ಷಕರೇ ಇಲ್ಲದಂತಾಗಿದೆ ಎಂದರು.

ಅಪಾರ ಸಂಖ್ಯೆಯ ಅಭ್ಯರ್ಥಿಗಳು ಪ್ರತಿವರ್ಷ ಈ ವಿಷಯಗಳಲ್ಲಿ ಪದವಿ ಗಳಿಸಿ ಉದ್ಯೋಗಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ, ಈ ವಿಷಯಗಳಿಗೆ 2008- 09ನೇ ಸಾಲಿನಲ್ಲಿ ಸುಮಾರು 600 ಶಿಕ್ಷಕರನ್ನು ನೇಮಕಾತಿ ಮಾಡಿದ್ದು ಬಿಟ್ಟರೆ ಇದೂವರೆಗೆ ಈ ಶಿಕ್ಷಕರ ನೇಮಕಾತಿಗಳೇ ಆಗಿಲ್ಲ. ವಸತಿ ಶಾಲೆಗಳಿಗೆ 2022- 23 ರಲ್ಲಿ ಸುಮಾರು 1200 ಶಿಕ್ಷಕರ ನೇಮಕವಾಗಿದೆ. ಆದರೆ, ಇನ್ನೂ ಬಹುತೇಕ ಶಾಲೆಗಳಿಗೆ ಈ ಶಿಕ್ಷಕರ ನೇಮಕಾತಿ ಆಗಬೇಕಿದ್ದು, ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕಾರ್ಯದರ್ಶಿ ಜಗದೀಶ್ ನೇಮಕಲ್ ಮಾತನಾಡಿ, ಮಕ್ಕಳಿಗೆ ಕನ್ನಡ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನಗಳು ಮಾತ್ರವಲ್ಲದೇ ಸಂಗೀತ, ಚಿತ್ರಕಲೆ, ರಂಗ ಕಲೆಗಳು ಸಹ ಅವಶ್ಯಕವಾಗಿವೆ. ಆ ಮೂಲಕ ಮಾತ್ರವೇ ಪರಿಪೂರ್ಣ ವ್ಯಕ್ತಿತ್ವ ವಿಕಸನ ಸಾಧ್ಯ. ಮಕ್ಕಳ ಬೌದ್ಧಿಕ, ಮಾನಸಿಕ, ಭಾವನಾತ್ಮಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಇವುಗಳು ತುಂಬಾ ಅವಶ್ಯಕ. ಇದನ್ನು ಗಂಭೀರವಾಗಿ ಪರಿಗಣಿಸಿಯೇ ಶಿಕ್ಷಣ ತಜ್ಞರು ಪ್ರೌಢಶಾಲಾ ಹಂತದಲ್ಲಿಯೇ ಮಕ್ಕಳಿಗೆ ಈ ಲಲಿತಕಲೆಗಳ ಅರಿವು ಮತ್ತು ತರಬೇತಿ ಸಿಗಲೆಂದು ಪರಿಣಿತಿ ಹೊಂದಿದ ಶಿಕ್ಷಕರ ನೇಮಕಾತಿಗೆ ಶಿಫಾರಸು ಮಾಡಿದ್ದಾರೆ. ಈ ಹಿಂದಿನ ಅನೇಕ ಶಿಕ್ಷಣ ಆಯೋಗಗಳೂ ಈ ಅಂಶವನ್ನು ಎತ್ತಿಹಿಡಿದಿವೆ ಎಂದರಲ್ಲದೆ, ರಾಜ್ಯ ಸರ್ಕಾರ ಸಂಗೀತ, ಚಿತ್ರಕಲಾ, ರಂಗಕಲಾ ಮತ್ತು ದೈಹಿಕ ಶಿಕ್ಷಣ ಶಿಕ್ಷಕರನ್ನುನೇಮಕ ಮಾಡಿಕೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಎ. ಪಂಪಾಪತಿ ಕೋಳೂರು, ಸದಸ್ಯರಾದ ನಿಂಗರಾಜು, ಚಿತ್ರಕಲಾ, ಸಂಗೀತ ಮತ್ತು ರಂಗಕಲಾ ಶಿಕ್ಷಕರಾದ ಡಿ.ಜಿ. ತಿರುಮಲ, ಗೋವಿಂದಪ್ಪ, ಆರ್.ಪಿ. ಮಂಜುನಾಥ್, ಬಿ.ಜಿ. ದಿನ್ನೆ, ಅಂಬಣ್ಣ ನಾಯಕ್, ಚಂದ್ರು ಬಸಾಪುರ, ಮಲ್ಲಿಕಾರ್ಜುನ, ಹೇಮೇಶ್ವರ್, ಹುಲಿಯಪ್ಪ, ವಿಷ್ಣು ಹಡಪದ್, ಎಂ. ನರೇಂದ್ರ, ಶಿವರಾಜ, ಬಸವರಾಜ ಭಾಗವಹಿಸಿದ್ದರು.