ಸಾರಾಂಶ
ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸುರಿದ ಅತಿವೃಷ್ಟಿ ಹಾಗು ಬಿರುಗಾಳಿಯಿಂದ ಹೆಚ್ಚಿನ ಬೆಳೆ ನಷ್ಟವಾಗಿದ್ದು, ಸೂಕ್ತ ಪರಿಹಾರ ನೀಡಲು ಬೆಳೆ ನಷ್ಟದ ಸಮೀಕ್ಷೆ ಕೈಗೊಳ್ಳಲು ಕೊಡಗು ಬೆಳೆಗಾರರ ಒಕ್ಕೂಟ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಪ್ರಸಕ್ತ ವರ್ಷದ ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆ ನಷ್ಟದ ಸಮೀಕ್ಷೆಯನ್ನು ಆದಷ್ಟು ಬೇಗ ಕೈಗೊಳ್ಳುಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೊಡಗು ಜಿಲ್ಲಾಧಿಕಾರಿ ವೆಂಕಟರಾಜ್ ತಿಳಿಸಿದರು.ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸುರಿದ ಅತಿವೃಷ್ಟಿ ಹಾಗು ಬಿರುಗಾಳಿಯಿಂದ ಹೆಚ್ಚಿನ ಬೆಳೆ ನಷ್ಟವಾಗಿದ್ದು, ಸೂಕ್ತ ಪರಿಹಾರ ನೀಡಲು ಬೆಳೆ ನಷ್ಟದ ಸಮೀಕ್ಷೆ ಕೈಗೊಳ್ಳಲು ಕೊಡಗು ಬೆಳೆಗಾರರ ಒಕ್ಕೂಟ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ, ಸಮಾಲೋಚನೆ ನಂತರ ಬೆಳೆ ನಷ್ಟದ ಸಮೀಕ್ಷೆ ಕೈಗೊಳ್ಳುವ ಭರವಸೆಯನ್ನು ಜಿಲ್ಲಾಧಿಕಾರಿ ನೀಡಿದರು.ಒಕ್ಕೂಟದ ಪ್ರಮುಖರು, ಜುಲೈ ತಿಂಗಳಲ್ಲಿ ನಿರಂತರವಾಗಿ ದಾಖಲೆಯ ಪ್ರಮಾಣದಲ್ಲಿ ಮಳೆ ಸುರಿಯುವ ಮೂಲಕ ಅತೀ ತೇವಾಂಶ ಹಾಗೂ ಕೊಳೆ ರೋಗಕ್ಕೆ ತುತ್ತಾಗಿ ಕೊಡಗು ಜಿಲ್ಲೆಯಲ್ಲಿ ಕಾಫಿ, ಕಾಳುಮೆಣಸು, ಅಡಿಕೆ, ಭತ್ತ ಹಾಗೂ ಇತರ ಬೆಳೆಗಳಿಗೆ ದೊಡ್ಡಮಟ್ಟದ ಹಾನಿ ಯಾಗಿರುತ್ತದೆ. ಜಿಲ್ಲೆಯ ಬೆಳೆಗಾರರು ಹಾಗೂ ರೈತರು ತಮ್ಮ ಜೀವನಕ್ಕೆ ತೋಟದ ಹಾಗೂ ಗದ್ದೆಯ ಬೆಳೆಗಳಲ್ಲಿ ಅವಲಂಬಿಸಿದ್ದು, ಅತಿ ಹೆಚ್ಚಿನ ಪ್ರಮಾಣದ ಬೆಳೆ ನಷ್ಟದಿಂದ ಸಂಕಷ್ಟದಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಎಂದು ಗಮನ ಸೆಳೆದರು.
ಈ ಸಂದರ್ಭ ಕೊಡಗು ಜಿಲ್ಲಾ ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕೇಚಂಡ ಕುಶಾಲಪ್ಪ, ಖಜಾಂಚಿ ಮಾಣೀರ ವಿಜಯ ನಂಜಪ್ಪ, ಸಮಿತಿ ಸದಸ್ಯರಾದ ಕಾಳಿಮಾಡ ತಮ್ಮು ಮುತ್ತಣ್ಣ, ಅಜ್ಜಿಕುಟ್ಟಿರ ಬೋಪಣ್ಣ,ತೀತಿರ ವೇಣು ಉಪಸ್ಥಿತರಿದ್ದರು.