ಸಾರಾಂಶ
ಕನ್ನಡಪ್ರಭ ವಾರ್ತೆ ಮಾಗಡಿ
ಇತ್ತೀಚಿಗಷ್ಟೇ ತಾಲೂಕಿನ ತಿಪ್ಪಸಂದ್ರ ಗ್ರಾಮದಲ್ಲಿ ಸಂಸದ ಡಿ.ಕೆ. ಸುರೇಶ್ ರ ಪ್ರಚಾರದ ವೇಳೆ ನಮ್ಮ ಕಾರ್ಯಕರ್ತ ‘ಪಾಕಿಸ್ತಾನ್ ಕೀ ಜೈ’ ಎಂದು ಘೋಷಣೆ ಕೂಗಿದ್ದಾರೆಂದು ವಿರೋಧ ಪಕ್ಷದ ಕಿಡಿಗೇಡಿಗಳು ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತಿದ್ದು, ಈಗ ಎಫ್ಎಸ್ಎಲ್ ವರದಿಯಲ್ಲಿ ಯಾವುದೇ ರೀತಿ ದೇಶ ವಿರೋಧಿ ಘೋಷಣೆ ಕೂಗಿಲ್ಲ ಎಂದು ಸಾಬೀತಾಗಿದೆ. ಈ ರೀತಿ ಅಪಪ್ರಚಾರ ಮಾಡಿದವರನ್ನು ಕೂಡಲೇ ಬಂಧಿಸಬೇಕು ಎಂದು ಶಾಸಕ ಬಾಲಕೃಷ್ಣ ಒತ್ತಾಯಿಸಿದರು.ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷಗಳು ಅಭಿವೃದ್ಧಿ ವಿಚಾರದಲ್ಲಿ ತಮ್ಮ ಚುನಾವಣಾ ಪ್ರಚಾರ ಮಾಡಲಿ. ನಮ್ಮ ಕಾರ್ಯಕರ್ತ ದೇಶ ವಿರೋಧಿ ಘೋಷಣೆ ಕೂಗಿರುವುದಿಲ್ಲ, ಅದನ್ನೇ ದೊಡ್ಡದಾಗಿ ಬಿಂಬಿಸಿ ದೇಶ ವಿರೋಧಿ ಘೋಷಣೆ ಕೂಗಿದ್ದಾರೆ ಎಂದು ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿದ್ದು, ಇದರಿಂದ ಧರ್ಮಗಳ ಮಧ್ಯೆ ದ್ವೇಷದ ವಿಷ ಬೀಜ ಕೆಲಸ ಆಗುತ್ತಿದೆ. ನಾವು ಈ ಬಗ್ಗೆ ಕುದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವು, ಈಗ ಪೊಲೀಸ್ ಇಲಾಖೆಯ ಎಫ್ಎಸ್ಎಲ್ ತಂಡದಿಂದ ವಿಡಿಯೋ ತುಣುಕನ್ನು ಪರಿಶೀಲಿಸಲಾಗಿದ್ದು, ಯಾವುದೇ ದೇಶವಿರೋಧಿ ಘೋಷಣೆ ಕೂಗಿಲ್ಲ ಎಂಬುದು ಸಾಬೀತಾಗಿದೆ.ಆದ್ದರಿಂದ ಅಪಪ್ರಚಾರ ಮಾಡಿದವರನ್ನು ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು, ಇಲ್ಲವಾದರೆ ಗುರುವಾರ ರಾಮನಗರ ಜಿಲ್ಲಾ ಎಸ್ಪಿ ಕಚೇರಿ ಎದುರು ಕಾಂಗ್ರೆಸ್ ಪಕ್ಷದ ವತಿಯಿಂದ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಮುಖಂಡರಾದ ತೇಜು, ಗಿರೀಶ್, ರಾಮಣ್ಣ, ರೇಣುಕಣ್ಣ, ಮಂಜುನಾಥ್ ಸೇರಿ ಇತರರು ಭಾಗವಹಿಸಿದ್ದರು.