ಸಾಂಚಿ ವಿವಿ ಕುಲಾಧಿಪತಿಯಾಗಿ ಪ್ರೊ. ಯಜ್ಞೇಶ್ವರ ಶಾಸ್ತ್ರಿ ನೇಮಕ

| Published : Jan 11 2025, 12:49 AM IST

ಸಾಂಚಿ ವಿವಿ ಕುಲಾಧಿಪತಿಯಾಗಿ ಪ್ರೊ. ಯಜ್ಞೇಶ್ವರ ಶಾಸ್ತ್ರಿ ನೇಮಕ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರೊ. ಶಾಸ್ತ್ರಿಗಳು ಮುಂದಿನ ೩ ವರ್ಷ ಭೋಪಾಲ ಸಮೀಪದ ಸಾಂಚಿ ವಿಶ್ವವಿದ್ಯಾಲಯದ ಕುಲಾಧಿಪತಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಯಲ್ಲಾಪುರ: ಮೂಲತಃ ತಾಲೂಕಿನ ಮಂಚಿಕೇರಿಯ ಗೋರ್ಸಗದ್ದೆ ಸಮೀಪದ ಕೋಸಗುಳಿಯ ಆಚಾರ್ಯ ಪ್ರೊ. ಯಜ್ಞೇಶ್ವರ ಶಾಸ್ತ್ರಿ ಅವರನ್ನು ಮಧ್ಯಪ್ರದೇಶ ಸರ್ಕಾರವು ಮುಂದಿನ ಮೂರು ವರ್ಷಗಳ ಅವಧಿಗೆ ಸಾಂಚಿ ಯುನಿವರ್ಸಿಟಿ ಆಫ್ ಬುದ್ಧಿಸ್ಟ್, ಇಂಡಿಕ್ ಸ್ಟಡೀಸ್ ಇದರ ಕುಲಾಧಿಪತಿಗಳನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಇದು ಅತ್ಯಂತ ಗೌರವಾನ್ವಿತ ಹುದ್ದೆಯಾಗಿದ್ದು, ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ. ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸ, ಶಿಕ್ಷಣ ತಜ್ಞರೂ ಆಗಿರುವ ಪ್ರೊ. ಯಜ್ಞೇಶ್ವರ ಅವರು ಈ ಹಿಂದೆ ಇದೇ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದರು.ಪ್ರೊ. ಶಾಸ್ತ್ರಿಗಳು ಮುಂದಿನ ೩ ವರ್ಷ ಭೋಪಾಲ ಸಮೀಪದ ಸಾಂಚಿ ವಿಶ್ವವಿದ್ಯಾಲಯದ ಕುಲಾಧಿಪತಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳನ್ನು ಅಲಂಕರಿಸಿದ ಇವರು ಲಾಸ್ ಎಂಜಲೀಸ್, ಯುಎಸ್‌ಎ ಲೋಯಲಾ ವಿಶ್ವವಿದ್ಯಾನಿಲಯಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದರು. ಹಲವು ರಾಷ್ಟ್ರೀಯ ಗೌರವ ಪುರಸ್ಕಾರ, ಬಂಗಾರದ ಪದಕ ಸಂಮಾನಗಳಿಗೆ ಭಾಜನರಾಗಿದ್ದಾರೆ.

ಅವರಿಗೆ ೨೦೧೩ರಲ್ಲಿ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ದರ್ಶನ ವಿಶಾರದ ಪುರಸ್ಕಾರ ನೀಡಿದೆ. ಪುಣೆಯ ಟ್ರಸ್ಟೊಂದು ಅಧ್ಯಾತ್ಮ ಮತ್ತು ಧರ್ಮ ಪುರಸ್ಕಾರ ನೀಡಿ ಗೌರವಿಸಿದೆ. ೨೦೨೩ರಲ್ಲಿ ಅಹಮದಾಬಾದ್ ಕನ್ನಡ ಸಂಘ ಕರ್ನಾಟಕ ಚೇತನ ಪುರಸ್ಕಾರ ನೀಡಿದೆ. ಹಿಂದುತ್ವದ ತಳಪಾಯ ಕುರಿತು ೧೮ ಪುಸ್ತಕಗಳನ್ನು ಬರೆದಿದ್ದಾರೆ. ಸುಮಾರು ೮೫ ವಿದ್ಯಾರ್ಥಿಗಳಿಗೆ ಮಾಸ್ಟರ್ ಆಫ್ ಫಿಲಾಸಫಿ ಬಗೆಗೂ, ೧೮ ಪಿಎಚ್‌ಡಿ ವಿದ್ಯಾರ್ಥಿಗಳಿಗೂ ಮಾರ್ಗದರ್ಶನ ಮಾಡಿದ್ದಾರೆ.ತಾಲೂಕಿನ ಮಂಚಿಕೇರಿ ಸಮೀಪದ ಕೋಸಗುಳಿ ಶಾಸ್ತ್ರಿ ಮನೆತನದ ಪ್ರೊ. ಯಜ್ಞೇಶ್ವರ ಶಾಸ್ತ್ರಿಗಳು ಅವಿಭಕ್ತ ಕುಟುಂಬದ ಸದಸ್ಯರು. ವಿ. ಕೇಸರಿ ಸದಾಶಿವ ಶಾಸ್ತ್ರಿ ಮತ್ತು ತುಂಗಭದ್ರಾ ದಂಪತಿಗಳ ಪುತ್ರರಾಗಿ ಜನಿಸಿದರು. ತಮ್ಮ ಬಾಲ್ಯದ ಶಿಕ್ಷಣವನ್ನು ಉಮ್ಮಚಗಿಯ ಸಂಸ್ಕೃತ ಪಾಠಶಾಲೆ, ನಂತರದ ಶಿಕ್ಷಣವನ್ನು(ವೇದ) ಧಾರವಾಡದಲ್ಲಿ ವಿ. ಬಾಲಚಂದ್ರ ಶಾಸ್ತ್ರಿ ಅವರಲ್ಲಿ ಕಲಿತರು. ಅಂದಿನ ಕಾಲದಲ್ಲಿ ಸಂಸ್ಕೃತ ವ್ಯಾಸಂಗ ಮಾಡಿದ ಪ್ರಮುಖರ ಸಾಲಿನಲ್ಲಿ ಇವರೂ ಒಬ್ಬರಾಗಿದ್ದಾರೆ.ಹಳಿಯಾಳದ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷರಾಗಿ ಪರಶುರಾಮ ರಾಠೋಳಿ ಆಯ್ಕೆ

ಹಳಿಯಾಳ: ಪಟ್ಟಣದ ಪ್ರಾಥಮಿಕ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಸಹಕಾರಿ ನಿಯಮಿತ(ಪಿಎಲ್‌ಡಿ) ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪರಶುರಾಮ ರಾಠೋಳಿ ಹಾಗೂ ಉಪಾಧ್ಯಕ್ಷರಾಗಿ ನಾಮದೇವ ಮಿರಾಶಿ ಅವರು ಆಯ್ಕೆಯಾದರು.ಬಿಜೆಪಿ ಬೆಂಬಲಿತರು ಹಿಡಿತದಲ್ಲಿರುವ ಈ ಬ್ಯಾಂಕ್ ಆಡಳಿತ ಮಂಡಳಿಗೆ ಹಲವಾರು ವರ್ಷಗಳಿಂದ ಬಿಜೆಪಿ ಬೆಂಬಲಿತರೇ ಆಯ್ಕೆಯಾಗುತ್ತ ಬಂದಿದ್ದಾರೆ. ಶುಕ್ರವಾರ ಬ್ಯಾಂಕ್‌ನಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರನ್ನು ಬಿಜೆಪಿ ಮಂಡಲದ ವತಿಯಂದ ಸನ್ಮಾನಿಸಿ ಶುಭ ಹಾರೈಸಲಾಯಿತು.ಬಿಜೆಪಿ ಮಂಡಲ ಅಧ್ಯಕ್ಷ ವಿಠ್ಠಲ ಸಿದ್ಧನ್ನವರ, ಪ್ರಮುಖರಾದ ಉದಯ ಹೂಲಿ, ಶಿವಾಜಿ ಪಾಟೀಲ, ಮೋಹನ ಗೌಡ, ಮಂಜುನಾಥ ಪಂಡಿತ, ಡೊಂಗ್ರು ಕೆಸರೇಕರ, ಸಂಜು ಮೊರೆ, ವಿರುಪಾಕ್ಷ ಕುರುಬಗಟ್ಟಿ, ಬಾಬುಣಿ ಗೌಡ, ರಾಜು ಸಡೇಕರ, ಜ್ಞಾನೇಶ ಮಾನಗೆ, ಈಶ್ವರ ವಾಟ್ಲೇಕರ, ನಾರಾಯಣ ಕೆಸರೇಕರ, ಸುಭಾಸ ಪಾಟೀಲ, ಸುರೇಶ ಧಾರವಾಡಕರ, ಜಯಲಕ್ಷ್ಮಿ ಚವ್ಹಾಣ, ಶೋಭಾ ಸಾಣಿಕೊಪ್ಪ ಉಪಸ್ಥಿತರಿದ್ದರು. ಸನ್ಮಾನ ಸಮಾರಂಭದ ನಂತರ ನೂತನ ಆಡಳಿತ ಮಂಡಳಿಯ ನಿರ್ದೇಶಕರು ವಿಧಾನಪರಿಷತ್‌ ಮಾಜಿ ಸದಸ್ಯ ವಿ.ಡಿ. ಹೆಗಡೆ ಅವರ ಮನೆಗೆ ತೆರಳಿ ಆಶೀರ್ವಾದವನ್ನು ಪಡೆದರು.