ಕನ್ನಡಪ್ರಭ ವಾರ್ತೆ ಮಳವಳ್ಳಿ

ಜಗತ್ತು ಇರುವವರೆಗೂ ವಿಶ್ವಗುರು ಬಸವಣ್ಣನವರ ತತ್ವಗಳು, ವಚನ ಹಾಗೂ ಚಿಂತನೆಗಳು ಎಂದೆಂದಿಗೂ ಶಾಶ್ವತವಾಗಿ ಉಳಿಯಲಿದೆ ಎಂದು ತಹಸೀಲ್ದಾರ್ ಎಸ್.ವಿ.ಲೋಕೇಶ್ ತಿಳಿಸಿದರು.

ಪಟ್ಟಣದ ತಾಪಂ ಆವರಣದಲ್ಲಿ ವಿಶ್ವಗುರು ಬಸವ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿ, ಸಮಾನತೆಯನ್ನು ಪ್ರತಿಪಾದಿಸಿದ ಬಸವಣ್ಣನವರನ್ನು ಪ್ರತಿಯೊಬ್ಬರು ಅನುಸರಿಸಿದರೇ ಜಾತಿ ವ್ಯವಸ್ಥೆಯೇ ಇಲ್ಲದಂತಾಗುತ್ತದೆ ಎಂದರು.

‘ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ’ ಎನ್ನುವ ಮೂಲಕ ಸಮಾನತೆಯ ಸಂದೇಶ ಸಾರಿದರು. ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳ ಕನ್ನಡದಲ್ಲಿ ವಚನಗಳ ಮೂಲಕ ಜೀವನದ ಮೌಲ್ಯ ತಿಳಿಸಿಕೊಟ್ಟರು. ಅನುಭವ ಮಂಟಪದ ಮೂಲಕ ವಿಶ್ವದ ಮೊದಲ ಸಂಸತ್ತುನ್ನು ನಿರ್ಮಿಸಿ ಜಾತಿ, ಧರ್ಮ, ಲಿಂಗ ಭೇದವಿಲ್ಲದೆ ಎಲ್ಲರಿಗೂ ಸಮಾನವಾಗಿ ಚರ್ಚಿಸುವ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದರು ಎಂದು ಸ್ಮರಿಸಿದರು.

ಮೈಸೂರಿನ ಸಾಹಿತ್ಯ ಸಂಶೋಧಕ ರಾಜಶೇಖರ್ ಜಮದಂಡಿ ಮಾತನಾಡಿ, ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಪ್ರಪಂಚಕ್ಕೆ ಸಲ್ಲುತ್ತದೆ. ಅಧುನಿಕ ಯುಗದಲ್ಲಿಯೂ ಜಾತಿಯನ್ನು ಅನುಸರಿಸುತ್ತಿರುವ ಪ್ರಸ್ತುತ ಸಂದರ್ಭದ ನಡುವೆಯೂ 900 ವರ್ಷಗಳ ಹಿಂದೆಯೇ ಮೂಢನಂಬಿಕೆ, ಕಂದಚಾರ, ಜಾತಿ ಹೋಗಲಾಡಿಸಲು ಹೋರಾಟ ನಡೆಸಿರುವುದು ವಿಶ್ವದಲ್ಲಿಯೇ ಮಾದರಿ ಎನಿಸಿದೆ ಎಂದರು.


ರಾಜರ ಆಳ್ವಿಕೆ ಕಾಲದಲ್ಲಿ ಕವಿಗಳು ರಾಜರನ್ನು ಒಳೈಕೆಯಲ್ಲಿಯೇ ತೊಡಗಿದ್ದರು. ಆದರೆ, ಬಸವಣ್ಣನವರು ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ವಚನ ರಚಿಸುವ ಮೂಲಕ ಅರಿವು ಮೂಡಿಸಲು ಮುಂದಾಗಿದ್ದರು ಎಂದು ಮಾಹಿತಿ ನೀಡಿದರು.

ತಾಪಂ ಇಒ ಶ್ರೀನಿವಾಸ್ ಮಾತನಾಡಿ, ಬಸವಣ್ಣನವರ ವಚನಗಳನ್ನು ಓದಿ ಅರ್ಥೈಸಿಕೊಳ್ಳುವ ಮೂಲಕ ಸಮಾನತೆಯನ್ನು ಅನುಸರಿಸಿ ನಾವೇಲ್ಲಾರು ಒಂದೇ ಎಂಬ ಮನೋಭಾವನೆ ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು.

ಇದೇ ವೇಳೆ ಪಿಯು ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಐವರು ವಿದ್ಯಾರ್ಥಿಗಳು ಹಾಗೂ ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಎಂ.ಎನ್.ನಂದೀಶ್ ಕುಮಾರ್ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ತಾಪಂ ಇಒ ಎಚ್.ಜಿ.ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ.ಉಮಾ, ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ಲೋಕೋಪಯೋಗಿ ಇಲಾಖೆ ಎಇಇ ಎ.ಎಂ.ಸೋಮಶೇಖರ್, ವಿವಿಧ ಇಲಾಖೆ ಅಧಿಕಾರಿಗಳಾದ ನಿತೀಶ್, ರಂಗಸ್ವಾಮಿ, ಅಪ್ಪಣಬೋವಿ, ವಿನೋದ್, ಪಿಎಸ್‌ಐ ಶಿವಲಿಂಗ ದಳವಾಯಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಮೂರ್ತಿ ಸೇರಿದಂತೆ ಇತರರು ಇದ್ದರು.