ದಲಿತರ ಜಮೀನು ಕಬಳಿಸುವ ಯತ್ನ: ಪ್ರತಿಭಟನೆ

| Published : Jan 05 2025, 01:30 AM IST

ಸಾರಾಂಶ

ದಾಬಸ್‍ಪೇಟೆ: ಐವತ್ತು ವರ್ಷಗಳಿಂದ ಉಳುಮೆ ಮಾಡುತ್ತಿರುವ ಭೂಮಿಯನ್ನು ಪ್ರಭಾವಿಗಳು ನಮ್ಮಿಂದ ಕಬಳಿಸುವ ಯತ್ನಕ್ಕೆ ರಕ್ಷಣೆ ನೀಡಬೇಕಾದ ಪೊಲೀಸರೇ ದೌರ್ಜನ್ಯ ನಡೆಸುತ್ತಿದ್ದಾರೆಂದು ಆರೋಪಿಸಿ ಪ್ರಜಾ ವಿಮೋಚನಾ ಚಳವಳಿ ಸಂಘಟನೆ ಜತೆ ಜಮೀನಿನ ಮಾಲೀಕ ಉಮಾಶಂಕರ್(ಮಹದೇವಯ್ಯ) ಪ್ರತಿಭಟನೆ ನಡೆಸಿದರು.

ದಾಬಸ್‍ಪೇಟೆ: ಐವತ್ತು ವರ್ಷಗಳಿಂದ ಉಳುಮೆ ಮಾಡುತ್ತಿರುವ ಭೂಮಿಯನ್ನು ಪ್ರಭಾವಿಗಳು ನಮ್ಮಿಂದ ಕಬಳಿಸುವ ಯತ್ನಕ್ಕೆ ರಕ್ಷಣೆ ನೀಡಬೇಕಾದ ಪೊಲೀಸರೇ ದೌರ್ಜನ್ಯ ನಡೆಸುತ್ತಿದ್ದಾರೆಂದು ಆರೋಪಿಸಿ ಪ್ರಜಾ ವಿಮೋಚನಾ ಚಳವಳಿ ಸಂಘಟನೆ ಜತೆ ಜಮೀನಿನ ಮಾಲೀಕ ಉಮಾಶಂಕರ್(ಮಹದೇವಯ್ಯ) ಪ್ರತಿಭಟನೆ ನಡೆಸಿದರು.

ತ್ಯಾಮಗೊಂಡ್ಲು ಹೋಬಳಿಯ ವಾದಕುಂಟೆ ಗ್ರಾಮದ ಸರ್ವೆ ನಂಬರ್ 42/2ರಲ್ಲಿರುವ 2 ಎಕರೆ 8 ಗುಂಟೆ ಕಬಲಿಸಲು ಯತ್ನಿಸುತ್ತಿರುವ ಸ್ಥಳದಲ್ಲಿ ಪ್ರತಿಭಟನಾ ವೇಳೆ ಮಾತನಾಡಿದ ಅವರು, ಗ್ರಾಪಂ ಮಾಜಿ ಸದಸ್ಯ ಅಶ್ವತ್ಥ, ಜಯರಾಮು, ಗೋವಿಂದರಾಜು ನಮ್ಮ ಮೇಲೆ ದೌರ್ಜನ್ಯವೆಸಗಿ ನಮ್ಮಿಂದ ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಧಿಕಾರಿಗಳು ನಮಗೆ ನ್ಯಾಯ ಒದಗಿಸಬೇಕು ಇಲ್ಲವೇ ನಾವು ಇಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿ. ಈಗಾಗಲೇ ತ್ಯಾಮಗೊಂಡ್ಲು ಪೊಲೀಸ್ ಅಧಿಕಾರಿಗಳು ನಮಗೇ ಹೊಡೆದು, ಅವಾಚ್ಯ ಶಬ್ದಗಳಿಂದ ಬೈದು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದರು.

ಪ್ರಜಾ ವಿಮೋಚನಾ ಚಳವಳಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ದೊಡ್ಡರಾಜು ಮಾತನಾಡಿ, ದಲಿತರ ಜಮೀನನ್ನು ಕಬಳಿಸಲು ಕೆಲವರು ಯತ್ನಿಸುತ್ತಿದ್ದು, ಜೊತೆಗೆ ಪೊಲೀಸರು ದಲಿತರ ಮೇಲೆಯೇ ದೌರ್ಜನ್ಯ ಎಸಗುತ್ತಿದ್ದು ಕೋಟಿಗಟ್ಟಲೆ ಬೆಲೆ ಬಾಳುವ ಈ ಜಮೀನು ದಲಿತ ಉಮಾಶಂಕರ್ ಕುಟುಂಬಕ್ಕೆ ಸೇರಬೇಕಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ನ್ಯಾಯ ಒದಗಿಸಬೇಕು. ಇಲ್ಲವೇ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕುಟುಂಬಸ್ಥರಾದ ಗಂಗಮ್ಮ, ಮಹದೇವಯ್ಯ, ರತ್ನಮ್ಮ, ಲಕ್ಷ್ಮಮ್ಮ, ಬೆಂಗಳೂರು ನಗರ ಅಧ್ಯಕ್ಷ ಅಯೂಬ್ ಖಾನ್, ಗಂಗರಾಜು, ಕಾಂತರಾಜು, ಛಲವಾದಿ ವೇದಿಕೆಯ ಶಿವಲಿಂಗಯ್ಯ, ಗರುಡಪ್ಪ, ಆನಂದ್ ಕುಮಾರ್, ಗೋವಿಂದರಾಜು, ಮಹಿಳಾ ಮುಖಂಡರಾದ ಮಂಜಮ್ಮ ಸೇರಿದಂತೆ ಹಲವರಿದ್ದರು.

ಪೋಟೋ 5 : ತ್ಯಾಮಗೊಂಡ್ಲು ಹೋಬಳಿಯ ವಾದಕುಂಟೆ ಗ್ರಾಮದಲ್ಲಿ ಜಮೀನು ಕಬಳಿಸಲು ಯತ್ನಿಸುತ್ತಿದ್ದವರ ವಿರುದ್ಧ ಪ್ರಜಾ ವಿಮೋಚನಾ ಚಳವಳಿ ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.