ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಒಂದಿಷ್ಟು ಹಣ ಸಂಪಾದಿಸುತ್ತಿದ್ದ ಯುವಕನೊಬ್ಬನ ಮೇಲೆ ಯುವಕರ ಗುಂಪೊಂದು ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಕಲಬುರಗಿ:

ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಒಂದಿಷ್ಟು ಹಣ ಸಂಪಾದಿಸುತ್ತಿದ್ದ ಯುವಕನೊಬ್ಬನ ಮೇಲೆ ಯುವಕರ ಗುಂಪೊಂದು ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಮದಿನಾ ಕಾಲೋನಿಯ ಸೈಯದ್ ಮಹಿಬೂಬ್ (24) ಎಂಬ ಯುವಕನ ಮೇಲೆಯೇ ಹಲ್ಲೆ ನಡೆಸಲಾಗಿದ್ದು, ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೈಯದ್ ಮಹಿಬೂಬ್ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದ. ಇದರಿಂದ ಅವನು ಒಂದಿಷ್ಟು ಹಣ ಸಂಪಾದಿಸುತ್ತಿದ್ದ. ಇದರಿಂದ ಆತನಿಗೆ ಪರಿಚಯವಿರುವ ಜಿಲಾನ್ ಎಂಬಾತ ಆರು ತಿಂಗಳ ಹಿಂದೆ ರೀಲ್ಸ್ ಮಾಡಬೇಡ ಎಂದಿದ್ದ. ನಾನು ರೀಲ್ಸ್ ಮಾಡಿದರೆ ನಿನಗೇನು ತೊಂದರೆ ಎಂದು ಸೈಯದ್ ಮಹಿಬೂಬ್ ಜಿಲಾನ್‍ನನ್ನು ಕೇಳಿದ್ದ. ಇದರಿಂದ ಜಿಲಾನ್ ದ್ವೇಷ ಬೆಳೆಸಿಕೊಂಡು ಜು.11ರಂದು ಸೈಯದ್ ಮಹಿಬೂಬ್ ಎಂಎಸ್‍ಕೆ ಮಿಲ್ ಜಿಡಿಎ ಲೇಔಟ್‍ನಲ್ಲಿರುವ ಚಹಾ ಅಂಗಡಿಯಲ್ಲಿ ಪರಿಚಿತರೊಂದಿಗೆ ಚಹಾ ಕುಡಿಯುತ್ತಿದ್ದಾಗ ಕಾರು ಮತ್ತು ಬೈಕ್ ಮೇಲೆ ಬಂದ ಜಿಲಾನ್, ಹೈದರ್, ಖಾಜಾ ಪಾಷಾ ಮತ್ತು ಹೈದರ್ ಸಹೋದರ ಸೈಯದ್ ಮಹಿಬೂಬ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿ ಪರಾರಿಯಾಗಿದ್ದಾರೆ. ಈ ಸಂಬಂಧ ಸೈಯದ್ ಮಹಿಬೂಬ್ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.