ಸಾರಾಂಶ
ಕನ್ನಡಪ್ರಭ ವಾರ್ತೆ. ಕಡೂರು
ತನ್ನ ಜಮೀನು ವಿಚಾರದಲ್ಲಿ ನನಗೆ ನ್ಯಾಯಾಲಯದಲ್ಲಿ ನ್ಯಾಯ ಸಿಗಲಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ಪಟ್ಟಣದ ನ್ಯಾಯಾಲಯದ ಬಳಿ ವಿಡಿಯೋ ರೆಕಾರ್ಡ್ ಮಾಡುತ್ತಾ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ತೀವ್ರ ಅಸ್ವಸ್ಥನಾಗಿರುವ ಘಟನೆ ನಡೆದಿದೆ.ಕಡೂರು ತಾಲೂಕಿನ (ದೇವರ) ಡಿ. ಕಾರೇಹಳ್ಳಿ ಗ್ರಾಮದ ಮಲ್ಲಿಕಾರ್ಜುನ್ ಎಂಬ ಯುವಕ ಶುಕ್ರವಾರ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಲು ಯತ್ನಿಸಿದವನು.
ಜಮೀನು ತಕರಾರು ಸಂಬಂಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯದಲ್ಲಿ ತಮ್ಮ ಪರವಾಗಿ ತೀರ್ಪು ಬಾರದ ಹಿನ್ನಲೆಯಲ್ಲಿ ಮಾನಸಿಕವಾಗಿ ನೊಂದು, ಮಧ್ಯಾಹ್ನದ ವೇಳೆ ಸುಮಾರು 2.36 ನಿಮಿಷದ ವಿಡಿಯೋ ಮಾಡಿರುವ ಆತ ಜಮೀನು ವಿಚಾರದಲ್ಲಿ ಆಗಿರುವ ಅನ್ಯಾಯಕ್ಕೆ ನನಗೆ ಇಂತವರು ಮೋಸ ಮಾಡಿದ್ದಾರೆ ಎಂದು ಹೇಳುತ್ತಾ ಅಸ್ವಸ್ಥ ಗೊಂಡಿದ್ದರು. ಆನಂತರ ಅವರನ್ನು ಸ್ಥಳಿಯರು ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.ವಿಡಿಯೋದಲ್ಲಿ ಏನಿದೆ: ನನ್ನ ತಂದೆಯವರ ನಿಧನದ ಬಳಿಕ ಜಮೀನು ಲಪಟಾಯಿಸಲು ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದು ಇದರಲ್ಲಿ ನಮ್ಮ ವಕೀಲರು ಕೂಡ ಶಾಮೀಲಾಗಿದ್ದಾರೆ. ನನ್ನ ಸಾವಿಗೆ ಷಡಕ್ಷರಪ್ಪ ತಮ್ಮಂದಿರು, ಅವರ ಅಣ್ಣನ ಮಕ್ಕಳು ಮತ್ತು ರಾಜು ಎಂಬುವರು ಕಾರಣ. ಅಮ್ಮ ನನ್ನನ್ನು ಕ್ಷಮಿಸು, ನೀನು ಚೆನ್ನಾಗಿರು, ಕೈ-ಕಾಲು ಹಿಡಿದರೂ ನ್ಯಾಯಾಲಯದಲ್ಲಿ ನನ್ನನ್ನು ಏನು ಕೇಳಲಿಲ್ಲ. ನಾನು ಜಮೀನು ಉಳಿಸಿಕೊಳ್ಳಲು 20 ಲಕ್ಷ ರು. ಸಾಲ ಮಾಡಿದ್ದೇನೆ. ಈ ವಿಚಾರವಾಗಿ ನಾನು ಸಿ.ಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ. ಆದರೆ ನನ್ನ ಪತ್ರಕ್ಕೆ ಸ್ಪಂದನೆ ಸಿಕ್ಕಿಲ್ಲ. ಈ ಮೂಲಕ ಸಿಎಂ ಮತ್ತು ಗೃಹ ಸಚಿವರಲ್ಲಿ ಬೇಡಿಕೊಳ್ಳುವೆ ನನಗೆ ನ್ಯಾಯ ಒದಗಿಸಿಕೊಡಿ. ಈ ಔಷಧಿ ಕುಡಿದು ಸಾಯುತ್ತಿದ್ದೇನೆ ಅಮ್ಮ ಕ್ಷಮಿಸು ಎಂದು ಮಲ್ಲಿಕಾರ್ಜುನ್ ಭಾವುಕನಾಗಿ ನುಡಿದಿರುವುದು ವಿಡಿಯೋದಲ್ಲಿ ರೆಕಾಡ್ ಆಗಿದ್ದು ಇದನ್ನು ಸಂಬಂಧಿಕರಿಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
1ಕೆಕೆಡಿಯು2.ಮಲ್ಲಿಕಾರ್ಜುನ್.