ಸಾರಾಂಶ
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಪಕ್ಷದ ಮುಖಂಡರ ವಿರುದ್ಧ ಹರಿಬಿಟ್ಟಿದ್ದ ಆಡಿಯೋಕ್ಕೆ ತಿರುಗೇಟು ನೀಡಿರುವ ಮಹಿಳಾ ಪದಾಧಿಕಾರಿಯೊಬ್ಬರು, ನಿಮ್ಮ ಸೋಲಿಗೆ ಪಕ್ಷದ ಕಾರ್ಯಕರ್ತರು, ಮುಖಂಡರನ್ನು ಯಾಕೆ ದೂರುತ್ತೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೊಪ್ಪಳ:
ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಉಚಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ ಕಾಂಗ್ರೆಸ್ ಪಕ್ಷದಲ್ಲಿ ಆಡಿಯೋ ಫೈಟ್ ಶುರುವಾಗಿದೆ.ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಹರಿಬಿಟ್ಟಿದ್ದ ಆಡಿಯೋಗೆ ಪ್ರತಿಯಾಗಿ ಕಾಂಗ್ರೆಸ್ ಮಹಿಳಾ ಪದಾಧಿಕಾರಿಯೊಬ್ಬರು ತಮ್ಮ ಹೆಸರು ಹೇಳಿಕೊಳ್ಳದೆ ಆಡಿಯೋ ಬಿಡುಗಡೆ ಮಾಡಿದ್ದಾರೆ.
ಪಕ್ಷ ಮೂರು ಬಾರಿ ಟಿಕೆಟ್ ನೀಡಿದೆ. ಆದರೂ ಸಹ ನೀವು ಗೆಲುವು ಸಾಧಿಸಿಲ್ಲ. ನಿಮ್ಮ ಸೋಲಿಗೆ ನಾಯಕರು ಮತ್ತು ಕಾರ್ಯಕರ್ತರ ಮೇಲೆ ದೂರುತ್ತೀರಿ, ಇದು ಸರಿಯಲ್ಲ ಎಂದಿದ್ದಾರೆ.ಅಷ್ಟಕ್ಕೂ ನೀವು ಶಾಸಕರು, ಸಚಿವರಾಗಿದ್ದ ವೇಳೆ ನಿಮ್ಮ ಮನೆ ಬಾಗಲಿಗೆ ಯಾರಾದರು ಬಂದರೆ ಗಂಟೆಗಟ್ಟಲೇ ಕಾಯಬೇಕಾಗುತ್ತಿತ್ತು. ಪಕ್ಷದ ನಾಯಕರ ವಿರುದ್ಧ ದೂರುವ ಬದಲು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ತೋರಿಸಿ ಎಂದು ಸವಾಲು ಹಾಕಿದ್ದಾರೆ.
ಇದಕ್ಕೆ ಪ್ರತಿಯಾಗಿ ಮಾತನಾಡಿದಿರುವ ಇಕ್ಬಾಲ್ ಅನ್ಸಾರಿ, ಆಡಿಯೋದಲ್ಲಿ ಹೇಳಿದ್ದು ಯಾರು ಎನ್ನುವುದು ಎಲ್ಲರಿಗೂ ಗೊತ್ತಾಗುತ್ತದೆ. ಈಕೆ ನಾನು ಸಚಿವನಾಗಿದ್ದ ವೇಳೆ ಸಹಾಯ ಕೇಳಿಕೊಂಡು ಬಂದಾಗ ಒಂದು ನಿಮಿಷವೂ ತಡಮಾಡದೆ ಕೆಲಸ ಮಾಡಿಸಿಕೊಟ್ಟಿದ್ದೇನೆ. ಸ್ವ-ಸಹಾಯ ಗುಂಪುಗಳ ವಿಷಯದಲ್ಲಿ ಈಕೆಯ ಮೇಲೆ ಆರೋಪ ಬಂದಾಗ ನಾನೇ ಸರಿಪಡಿಸಿದ್ದೇನೆ. ಈ ಯಮ್ಮ ಯಾರು ದುಡ್ಡು ಕೊಡುತ್ತಾರೊ ಅವರ ಪರವಾಗಿ ಮಾತನಾಡುತ್ತಾಳೆ. ನನ್ನ ವಿರುದ್ಧ ಬರೆದುಕೊಟ್ಟು ಮಾತನಾಡಿಸಿದ್ದಾರೆ. ನಾನು ಅಧಿಕಾರದಲ್ಲಿದ್ದಾಗ ಏನು ಕೆಲಸ ಮಾಡಿದ್ದೇನೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದು ತಿರುಗೇಟು ನೀಡಿದ್ದಾರೆ.