ಹಾಸನದಲ್ಲಿ ಯಶಸ್ವಿಗೊಂಡ ಎವಿಕೆ ಕಾಲೇಜಿನ ಜಾನಪದ ಕಲಾಮೇಳ

| Published : May 15 2024, 01:37 AM IST

ಸಾರಾಂಶ

ಹಾಸನ ತಾಲೂಕಿನ ತೇಜೂರಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಕಲ್ಪಿತ ಜನ ಜಾಗೃತಿ ಮತ್ತು ಸಾಂಸ್ಕೃತಿಕ ಅಭಿವೃದ್ದಿ ಸಂಸ್ಥೆಯ ಆಶ್ರಯದಲ್ಲಿ ಜಾನಪದ ಕಲಾಮೇಳವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.

ತೇಜೂರಿನಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ

ಕನ್ನಡಪ್ರಭ ವಾರ್ತೆ ಹಾಸನ

ಎವಿಕೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ತಾಲೂಕಿನ ತೇಜೂರಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಕಲ್ಪಿತ ಜನ ಜಾಗೃತಿ ಮತ್ತು ಸಾಂಸ್ಕೃತಿಕ ಅಭಿವೃದ್ದಿ ಸಂಸ್ಥೆಯ ಆಶ್ರಯದಲ್ಲಿ ಜಾನಪದ ಕಲಾಮೇಳವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎವಿಕೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಚ.ಯತೀಶ್ವರ್ ಮಾತನಾಡಿ, ಜನಪದ ಕಲೆಗಳು ಗ್ರಾಮೀಣ ಸಂಸ್ಕೃತಿಯ ಜೀವದ್ರವ್ಯಗಳಾಗಿವೆ. ಜನಪದ ಸಂಸ್ಕೃತಿ ಹುಟ್ಟಿದ್ದೆ ಜನಪದರ ಅಂಗಳದಲ್ಲಿ. ಬದುಕಿನ ಏಕತಾನತೆಯನ್ನು ಕಳೆಯಲು ಜನಪದರು ಅವಲಂಬಿಸಿದ್ದು, ಜನಪದ ಕಲೆಯ ಆರಾಧನೆಯನ್ನು. ಇದರ ಫಲವಾಗಿ ಇಂದಿಗೂ ಸಹ ಜಾನಪದ ಕಲೆಗಳು ಪ್ರಭಾವ ಬೀರುತ್ತ ಜೀವ ಚೈತನ್ಯವನ್ನು ನೀಡುತ್ತಿದೆ ಎಂದು ಹೇಳಿದರು.

ಎಂಸಿಇ ಕಾಲೇಜು ನಿರ್ದೇಶಕ ಚೌಡುವಳ್ಳಿ ಜಗದೀಶ್ ಅವರು ಜಾನಪದ ಕಲಾ ಮೇಳದಲ್ಲಿ ಕರಡಿ ವಾದ್ಯಗಳನ್ನು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.

ಇದೇ ಸಂದರ್ಭದಲ್ಲಿ ಮಹಿಳೆ ಮತ್ತು ಆರೋಗ್ಯವನ್ನು ಕುರಿತಂತೆ ಖ್ಯಾತ ಸ್ತ್ರೀ ರೋಗ ತಜ್ಞರಾದ ಡಾ. ಸಾವಿತ್ರಿ ಮಹಿಳೆಯರ ಆರೋಗ್ಯದ ಮಹತ್ವವನ್ನು ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಮಹಿಳೆ ಸದೃಢವಾಗಿದ್ದರೆ ರಾಷ್ಟ್ರ ಸದೃಢವಾಗಿರುತ್ತದೆ ಎಂದು ಕಿವಿಮಾತು ಹೇಳಿದರು.

ಕುಮಾರ್ ಕಟ್ಟೆ ಬೆಳಗುಳಿ ಮತ್ತು ತಂಡದವರಿಂದ ಜಾನಪದ ಗೀತ ಗಾಯನ, ಜನಕನಾಯಕ್ ಮತ್ತು ತಂಡದವರಿಂದ ತತ್ವಪದ ಗಾಯನ, ಲೋಕೇಶ್ ಮತ್ತು ತಂಡದವರಿಂದ ಸುಗಮ ಸಂಗೀತ, ತರಿಕೆರೆಯ ಸಂಗೀತ ಮತ್ತು ತಂಡದವರಿಂದ ಮಹಿಳಾ ವೀರಗಾಸೆ, ಕಡೂರಿನ ಯದೀಶ ಮತ್ತು ತಂಡದವರಿಂದ ನಂದಿ ಧ್ವಜ ಕುಣಿತ ಹೀಗೆ ಹಲವಾರು ಕಾರ್ಯಕ್ರಮಗಳು ತೇಜೂರಿನ ಗ್ರಾಮಸ್ಥರು ಮತ್ತು ಶಿಬಿರಾರ್ಥಿಗಳ ಮನಸ್ಸನ್ನು ಮುದಗೊಳಿಸುವಲ್ಲಿ ಯಶಸ್ವಿಯಾದವು.

ಸಾಹಿತಿ ಟಿ.ಎಂ.ಶಿವಶಂಕರಪ್ಪ ಶರಣ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ ಎಂಬ ವಿಷಯವನ್ನು ಕುರಿತು ಮಾತನಾಡಿ, ಕೆರೆಕಟ್ಟೆಗಳನ್ನು ಸಂರಕ್ಷಣೆ ಮಾಡುವ, ಗಿಡಗಳನ್ನು ನೆಟ್ಟು ಪರಿಸರವನ್ನು ಸಂರಕ್ಷಿಸುವ ಅಗತ್ಯವನ್ನು ಪ್ರತಿಪಾದಿಸಿದರು. ಈ ಸಂದರ್ಭದಲ್ಲಿ ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ.ಪಿ.ಮಂಜುಳಾ ಮತ್ತು ಪ್ರೊಫೆಸರ್ ಎಚ್.ಎನ್.ಶೈಲಜಾ ಇದ್ದರು.