ಸಾರಾಂಶ
ಏಡ್ಸ್ ಕುರಿತು ಯುವಕರಲ್ಲಿ ಅರಿವು ಅಗತ್ಯ
ಕನ್ನಡಪ್ರಭ ವಾರ್ತೆ ಬಾಗಲಕೋಟೆ ರೋಗಗಳು ಉಂಟಾಗುವ ಮತ್ತು ಉಲ್ಬಣಗೋಳ್ಳುವ ಕುರಿತು ಯುವ ಸಮುದಾಯದಲ್ಲಿ ಜಾಗೃತಿ ಮೂಡಿ ಶಿಕ್ಷಿತರಾದರೆ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಬಿವಿವಿಎಸ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಡಾ.ಸುನೀಲಕುಮಾರ ಚಬನೂರ ಹೇಳಿದರು. ಅವರು ಬಾಗಲಕೋಟೆಯ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಎನ್ಎಸ್ಎಸ್ ಘಟಕಗಳು, ರೆಡ್ಕ್ರಾಸ್ ಹಾಗೂ ರೆಡ್ರಿಬ್ಬನ್ ಕ್ಲಬ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಏಡ್ಸ್ನಂಥ ಮಾರಕ ಕಾಯಿಲೆ ಸಂಪೂರ್ಣ ಬದುಕನ್ನೇ ಹಾಳು ಮಾಡುತ್ತದೆ. ಹೀಗಾಗಿ, ಅದರ ಅರಿವು ಯುವ ಜನತೆ ಹಾಗೂ ಸಮಾಜಕ್ಕೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಏಡ್ಸ್ನ ಹರಡುವಿಕೆ, ಲಕ್ಷಣಗಳು, ಚಿಕಿತ್ಸೆ ಹಾಗೂ ಅದನ್ನು ತಡೆಗಟ್ಟುವಿಕೆ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಬೇಕು. ಅಲ್ಲದೇ, ಸದೃಢ ಸಮಾಜ ನಿರ್ಮಾಣಕ್ಕೆ ಏಡ್ಸ್ ತೊಲಗಿಸುವುದು ಅಗತ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಚಾರ್ಯ ಎಸ್.ಆರ್.ಮುಗನೂರಮಠ, ಇಂದಿನ ಮಕ್ಕಳಲ್ಲಿ ಅತಿಯಾದ ಫ್ಯಾಷನ್ ಮೋಹದಿಂದ ಜಾಗೃತಿ ಮರೆಯುತ್ತಿದ್ದಾರೆ. ನಾವು ವಹಿಸುವ ಸಣ್ಣ ಸಣ್ಣ ಕಾಳಜಿಗಳಿಂದ ಆರೋಗ್ಯಯುತವಾಗಿ ಬದುಕಬಹುದಾಗಿದೆ. ನಮ್ಮ ಜೀವನಕ್ಕೆ ನಾವು ನೀತಿಸಂಹಿತೆ ಹಾಕಿಕೊಂಡರೆ ಇಂಥ ಹಲವಾರು ರೋಗಗಳಿಗೆ ತುತ್ತಾಗುವುದನ್ನು ತಡೆಯಬಹುದು. ವಿದ್ಯಾರ್ಥಿಗಳು ಜನಸಾಮಾನ್ಯರಲ್ಲಿ ರೋಗದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಡಾ.ಎ.ಯು.ರಾಠೋಡ, ಡಾ.ವಿರೂಪಾಕ್ಷ ಎನ್.ಬಿ., ಆರ್.ಆರ್.ಅರಶಿನಗುಡಿ ಸೇರಿ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.