ಥಲಸ್ಸೆಮಿಯಾ ಮುಕ್ತ ಭವಿಷ್ಯಕ್ಕಾಗಿ ಜಾಗೃತಿ ಅಗತ್ಯ: ಡಾ.ಪಲ್ಲವಿ ಚರಂತಿಮಠ

| Published : May 11 2025, 11:56 PM IST

ಥಲಸ್ಸೆಮಿಯಾ ಮುಕ್ತ ಭವಿಷ್ಯಕ್ಕಾಗಿ ಜಾಗೃತಿ ಅಗತ್ಯ: ಡಾ.ಪಲ್ಲವಿ ಚರಂತಿಮಠ
Share this Article
  • FB
  • TW
  • Linkdin
  • Email

ಸಾರಾಂಶ

ಥಲಸ್ಸೆಮಿಯಾ ಎಂಬುದು ಆನುವಂಶಿಕ ರಕ್ತಕ್ಕೆ ಸಂಬಂಧಿಸಿದ ಅಸ್ವಸ್ಥತೆಯಾಗಿದೆ. ಥಲಸ್ಸೆಮಿಯಾ ಮುಕ್ತ ಭವಿಷ್ಯಕ್ಕಾಗಿ ಜನರಲ್ಲಿ ಜಾಗೃತಿ ಅಗತ್ಯ ಎಂದು ಎಸ್.ಎನ್.ಎಂ.ಸಿ. ಹಾಗೂ ಎಚ್.ಎಸ್.ಕೆ. ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪಲ್ಲವಿ ಚರಂತಿಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಥಲಸ್ಸೆಮಿಯಾ ಎಂಬುದು ಆನುವಂಶಿಕ ರಕ್ತಕ್ಕೆ ಸಂಬಂಧಿಸಿದ ಅಸ್ವಸ್ಥತೆಯಾಗಿದೆ. ಥಲಸ್ಸೆಮಿಯಾ ಮುಕ್ತ ಭವಿಷ್ಯಕ್ಕಾಗಿ ಜನರಲ್ಲಿ ಜಾಗೃತಿ ಅಗತ್ಯ ಎಂದು ಎಸ್.ಎನ್.ಎಂ.ಸಿ. ಹಾಗೂ ಎಚ್.ಎಸ್.ಕೆ. ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪಲ್ಲವಿ ಚರಂತಿಮಠ ಹೇಳಿದರು.

ನಗರದ ಶ್ರೀ ಬ.ವಿ.ವ ಸಂಘದ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಚಿಕ್ಕಮಕ್ಕಳ ಶುಶ್ರೂಷಾ ವಿಭಾಗದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ಥಲಸ್ಸೆಮಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಮಾತನಾಡಿದರು.

ಅನುವಂಶಿಕತೆಯಿಂದ ಬರುವ ರಕ್ತದ ಅಸ್ವಸ್ಥತೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಥಲಸ್ಸೆಮಿಯಾ ದಿನವನ್ನು ಮೇ 8ರಂದು ಆಚರಣೆ ಮಾಡಲಾಗುತ್ತದೆ. ಜಗತ್ತಿನಾದ್ಯಂತ ಕೋಟ್ಯಂತರ ಜನರು ಈ ಖಾಯಿಲೆಯಿಂದ ಬಳಲುತ್ತಿದ್ದು, ಅವರ ಬದುಕಿಗೆ ಬೆಂಬಲವಾಗಿ ನಿಂತು, ನೈತಿಕ ಸ್ಥೈರ್ಯ ತುಂಬುವ ಕೆಲಸದ ಜೊತೆಗೆ ಸೂಕ್ತ ಚಿಕಿತ್ಸೆ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳ ಲಭ್ಯತೆಯ ಬಗ್ಗೆ ಅರಿವು ಮಾಡಿಸಬೇಕಾಗಿದೆ ಎಂದು ಹೇಳಿದರು.

ಹಾನಗಲ್ ಶ್ರೀ ಕುಮಾರೇಶ್ವರ ಆಸ್ಪತ್ರೆ 100 ಹಾಸಿಗೆಗಳ ಥಲಸ್ಸೆಮಿಯಾ ಘಟಕ ಹೊಂದಿದ್ದು, ಡಾ.ಭುವನೇಶ್ವರಿ ಯಳಮೇಲಿ ಈ ಘಟಕದ ಮುಖ್ಯಸ್ಥೆಯಾಗಿದ್ದಾರೆ. ಈ ವಿಭಾಗಕ್ಕೆ ಚಿಕಿತ್ಸೆಗೆ ಬರುವ ಎಲ್ಲ ಮಕ್ಕಳಿಗೆ ಉಚಿತ ಚಿಕಿತ್ಸೆ ಹಾಗೂ ಕಡಿಮೆ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ನೀಡಲಾಗುತ್ತದೆ. ಈ ವಿಭಾಗದ ಸೇವೆಗಾಗಿ 2022ರಲ್ಲಿ ಆಸ್ಪತ್ರೆಗೆ ಹಾಗೂ ವಿಭಾಗದ ಮುಖ್ಯಸ್ಥರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ದಿಲೀಪ್ ನಾಟೇಕಾರ ಮಾತನಾಡಿ, ಆರೋಗ್ಯ ಶುಶ್ರೂಷಕರು ಹಾಗೂ ಆರೋಗ್ಯ ಶುಶ್ರೂಷ ಬೋಧಕ ಸಿಬ್ಬಂದಿ ಸಮುದಾಯಕ್ಕೆ ಭೇಟಿ ನೀಡಿ, ಥಲಸ್ಸೆಮಿಯಾ ರೋಗ ತಡೆಗಟ್ಟುವಿಕೆ, ಗುಣಪಡಿಸುವ ವಿಧಾನಗಳು ಮತ್ತು ಥಲಸ್ಸೆಮಿಯಾ ರೋಗಿಗಳ ಆರೈಕೆಯ ಬಗ್ಗೆ ಹಾಗೂ ಥಲಸ್ಸೆಮಿಯಾ ಬಾಧಿತ ಮಕ್ಕಳಿಗೆ ಸಾಧ್ಯವಾದಷ್ಟು ಉತ್ತಮವಾದ ಆರೈಕೆ ಮತ್ತು ಚಿಕಿತ್ಸೆ ನೀಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಚಿಕ್ಕಮಕ್ಕಳ ಶುಶ್ರೂಷ ವಿಭಾಗದ ಮುಖ್ಯಸ್ಥ ಡಾ. ದಾನೇಶ್ವರಿ ಹಿರೇಮಠ, ಸಂತೋಷ ಸಜ್ಜನ, ಡಾ.ನಿಂಗನಗೌಡ ಪಾಟೀಲ, ಡಾ.ಪ್ರಶಾಂತ ಕುಲಕರ್ಣಿ, ಸಂತೋಷ ಸಜ್ಜನ, ಚಂದ್ರಾ ಜತ್ತ, ರೇಣುಕಾ ಜಾಲಿಹಾಳ, ಶ್ರೀದೇವಿ ತೇಲಿ ಸೇರಿದಂತೆ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಸವರಾಜ ನಿರೂಪಿಸಿದರು. ನೇತ್ರಾವತಿ ಸ್ವಾಗತಿಸಿದರು. ಅಶ್ವಿನಿ ವಂದಿಸಿದರು.