ಗುರುಗಳು ಜ್ಞಾನ ನೀಡುತ್ತಾರೆ, ಆಸ್ಪತ್ರೆ ಚಿಕಿತ್ಸೆಯ ಅನುಭವ ನೀಡುತ್ತದೆ. ಸಂಸ್ಕೃತಿ ಮೌಲ್ಯಗಳನ್ನು ನೀಡುತ್ತದೆ. ಕಲಿಯುವ ಪ್ರತಿ ವಿಷಯವು ಔಷಧಿ ತಯಾರಿಸುವ ವೈದ್ಯನಾಗುವಷ್ಟೇ ಅಲ್ಲ, ಮಾನವತೆಯನ್ನು ಸ್ಪರ್ಶಿಸುವ ವೈದ್ಯನನ್ನಾಗಿಸುವುದು.

ಧಾರವಾಡ:

ಆಯುರ್ವೇದ ಕೇವಲ ವೈದ್ಯಕೀಯ ವಿಜ್ಞಾನವಲ್ಲ. ಜೀವನದ ಕಲಾ, ಪ್ರಕೃತಿಯ ಜ್ಞಾನ ಮತ್ತು ಮಾನವ ಸೇವೆಗಳನ್ನು ಮಿಳಿತಗೊಳಿಸಿದ ಮಹಾನ್ ಪರಂಪರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಇಲ್ಲಿಯ ಸಿ.ಬಿ. ಗುತ್ತಲ ಆಯುರ್ವೇದಿಕ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಸಮಾರಂಭ ಉದ್ಘಾಟಿಸಿದ ಅವರು, ಅಸ್ವಸ್ವಸ್ಥರಿಗೆ ಆರೋಗ್ಯ ಕಾಪಾಡುವುದು, ರೋಗಿಗಳಿಗೆ ಚಿಕಿತ್ಸೆ ನೀಡುವುದು ಪ್ರತಿಯೊಬ್ಬರ ಧರ್ಮ. ಈ ಪವಿತ್ರ ಮಾರ್ಗವನ್ನೇ ಅಧಿಕೃತವಾಗಿ ಆರಿಸಿಕೊಂಡಿರುವುದು ಹರ್ಷದ ವಿಷಯ. ಐದು ವರ್ಷಗಳ ಗುರುಕುಲಯಾನ ಕೇವಲ ಪುಸ್ತಕ ಓದುವುದಲ್ಲ. ಇದು ಅನುಭವ, ಸಂಶೋಧನೆ, ಪ್ರಯೋಗ, ಸೇವಾ ಮನೋಭಾವ ಇವುಗಳ ಪಯಣವಾಗಿದೆ ಎಂದು ತಿಳಿಸಿದರು.

ಗುರುಗಳು ಜ್ಞಾನ ನೀಡುತ್ತಾರೆ, ಆಸ್ಪತ್ರೆ ಚಿಕಿತ್ಸೆಯ ಅನುಭವ ನೀಡುತ್ತದೆ. ಸಂಸ್ಕೃತಿ ಮೌಲ್ಯಗಳನ್ನು ನೀಡುತ್ತದೆ. ಕಲಿಯುವ ಪ್ರತಿ ವಿಷಯವು ಔಷಧಿ ತಯಾರಿಸುವ ವೈದ್ಯನಾಗುವಷ್ಟೇ ಅಲ್ಲ, ಮಾನವತೆಯನ್ನು ಸ್ಪರ್ಶಿಸುವ ವೈದ್ಯನನ್ನಾಗಿಸುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಮೇಯರ್‌ ಈರೇಶ ಅಂಚಟಗೇರಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆಡಳಿತದ ಚುಕ್ಕಾಣಿ ಹಿಡಿದ ನಂತರ ಆಯುರ್ವೇದ ಮಹತ್ವ ವಿಶ್ವದೆಲ್ಲೆಡೆ ಹರಡಿದೆ‌.‌ 150 ದೇಶಗಳು ಆಯುರ್ವೇದ ಪದ್ದತಿ ಅಳವಡಿಸಿಕೊಂಡಿದ್ದು, ಬಾಂಗ್ಲಾದೇಶ, ಆಸ್ಟ್ರೇಲಿಯಾ ದೇಶಗಳು ಆರ್ಯವೇದ ಅಕಾಡೆಮಿ ಆರಂಭಿಸಲಿವೆ. ಪ್ರಾಚೀನ ಋಷಿಗಳಿಂದ ಬಂದ ಆಯುರ್ವೇದದ ಈ ಮಹಾನ್ ಪರಂಪರೆಯನ್ನು ಅನುಸರಿಸುತ್ತಿದ್ದೇವೆ ಎಂದರು.

ರಾಘವೇಂದ್ರ ತವನಪ್ಪನವರ, ಶ್ರೀಶೈಲ ಯಕ್ಕುಂಡಿಮಠ, ಜಗದೀಶ ಮಳಗಿ, ಬಸವರಾಜ ತಾಳೀಕೋಟಿ, ಜಿ.ಜಿ. ಹಿರೇಮಠ, ಎಸ್‌. ರಾಧಾಕೃಷ್ಣನ್‌, ಬಿ.ಎಚ್‌. ವೆಂಕರೆಡ್ಡಯ್ಯನವರ, ವಿ.ಎ. ಸೊಪ್ಪಿಮಠ ಇದ್ದರು.