ಹುಬ್ಬಳ್ಳಿ:

ಭಾರತೀಯ ವೈದ್ಯಕೀಯ ಪರಂಪರೆಯಲ್ಲಿ ಆಯುರ್ವೇದ ಗಿಡಮೂಲಿಕೆಗಳಿಗೆ ಬಹಳಷ್ಟು ಮಹತ್ವವಿದೆ. ಪೂರ್ವಕಾಲದ ಋಷಿ, ಮುನಿಗಳು ಗಿಡಮೂಲಿಕೆಗಳಲ್ಲಿರುವ ರೋಗ ನಿರೋಧಕ ಶಕ್ತಿ ಗುರುತಿಸಿ ಅಪೂರ್ವ ಕೊಡುಗೆ ಕೊಟ್ಟಿದ್ದಾರೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಶ್ರೀ ಅಭಿಪ್ರಾಯಪಟ್ಟರು.

ಅವರು ವಿದ್ಯಾನಗರದ ಶ್ರೀ ರಂಭಾಪುರಿ ಜ. ವೀರಗಂಗಾಧರ ಸಮುದಾಯ ಭವನದಲ್ಲಿ ಅಸ್ತಮಾ, ಕೆಮ್ಮು, ಅಲರ್ಜಿ ರೋಗಗಳಿಗೆ ಉಚಿತ ಔಷಧ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಎಲ್ಲ ಸಂಪತ್ತುಗಳಿಗಿಂತ ಆರೋಗ್ಯ ಸಂಪತ್ತು ದೊಡ್ಡದು. ಆರೋಗ್ಯ ಬಯಸುವ ಮನುಷ್ಯ ಆರೋಗ್ಯ ಸೂತ್ರಗಳನ್ನು ಪರಿಪಾಲಿಸಬೇಕಾಗಿದೆ. ಹಣ ಸಂಪಾದಿಸುವ ಮನುಷ್ಯ ಆರೋಗ್ಯ ನಿರ್ಲಕ್ಷಿಸುತ್ತಾನೆ. ಆರೋಗ್ಯ ಹದಗೆಟ್ಟಾಗ ಸಂಪಾದಿಸಿದ ಹಣ ಖರ್ಚು ಮಾಡಿದರೂ ಆರೋಗ್ಯ ಮರಳಿ ಬರಲಾರದು. ಮಾತು ಬಲ್ಲವನಿಗೆ ಜಗಳವಿಲ್ಲ. ಊಟ ಬಲ್ಲವನಿಗೆ ರೋಗ ಇಲ್ಲವೆಂಬ ಗಾದೆ ಮಾತು ಜನಜನಿತವಾಗಿದೆ ಎಂದ ಶ್ರೀಗಳು, ಡಾ. ಸುರೇಶ ಮೆಣಸಗಿ ಅವರು ಪರಂಪರೆಯಿಂದ ಬಂದ ಆಯುರ್ವೇದ ಗಿಡಮೂಲಿಕೆ ಔಷಧಗಳ ಮೂಲಕ ಅಸ್ತಮಾ, ಕೆಮ್ಮು, ಅಲರ್ಜಿ ರೋಗಗಳಿಗೆ ಉಚಿತ ಔಷಧ ವಿತರಿಸುತ್ತಿರುವುದು ಅವರಲ್ಲಿರುವ ಸಾಮಾಜಿಕ ಕಾಳಜಿ ತೋರಿಸುತ್ತದೆ ಎಂದರು.

ಸಮಾರಂಭ ಉದ್ಘಾಟಿಸಿದ ಬೆಂಗಳೂರು ಅಪೋಲೋ ಆಸ್ಪತ್ರೆಯ ಡಾ. ದಯಾನಂದ ಯಲಿಗಾರ, ಹಿತ ಮಿತವಾದ ಸಾತ್ವಿಕ ಆಹಾರ, ವ್ಯಾಯಾಮಗಳ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.


ಧನ್ವಂತರಿ ಸೇವಾ ಸಂಸ್ಥೆಯ ಡಾ. ಸುರೇಶ ಮೆಣಸಗಿ ಮಾತನಾಡಿದರು. ಡಾ. ಸುರೇಶ ಮೆಣಸಗಿ ಅವರು 350 ಜನರಿಗೆ ಉಚಿತವಾಗಿ ಕೆಮ್ಮು, ಅಸ್ತಮಾ ಔಷಧ ವಿತರಿಸಿದರು. ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಶ್ರೀ ನೇತೃತ್ವ ವಹಿಸಿದ್ದರು. ಹೆಸ್ಕಾಂ ತಾಂತ್ರಿಕ ನಿವೃತ್ತ ನಿರ್ದೇಶಕ ಎಸ್. ಜಗದೀಶ, ಮಹಾನಗರ ಪಾಲಿಕೆ ಎಂಜನಿಯರ್ ಗವಿಸಿದ್ಧಯ್ಯ ಹಿರೇಮಠ, ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳದ ಅಧ್ಯಕ್ಷೆ ಇಂಧುಮತಿ ಮಾನ್ವಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ ಸ್ವಾಗತಿಸಿದರು. ಜ. ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಶಿವು ಹಿರೇಮಠರಿಂದ ಪ್ರಾರ್ಥನೆ ಜರುಗಿತು. ಬೆಳವಡಿಯ ಜಿ.ವಿ. ಹಿರೇಮಠ ನಿರೂಪಿಸಿದರು.