ಸಾರಾಂಶ
ಬೆಂಗಳೂರು : ದರ್ಶನ್ ವಿಶೇಷ ಸೌಲಭ್ಯ ಪ್ರಕರಣದ ಬೆನ್ನಲ್ಲೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲಿನ ದಾಳಿ ಮಾಹಿತಿ ಸೋರಿಕೆ ಬಗ್ಗೆ ಆಂತರಿಕ ಮಟ್ಟದ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಸಿಸಿಬಿಗೆ ಸೂಚಿಸಿದ್ದಾರೆ.
ಅಕ್ರಮ ಚಟುವಟಿಕೆಗಳ ಮಾಹಿತಿ ಹಿನ್ನಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ಶನಿವಾರ ನಸುಕಿನಲ್ಲಿ ದಿಢೀರ್ ದಾಳಿ ನಡೆಸಿದ್ದರು. ಆದರೆ ದಾಳಿ ವೇಳೆ ಮೊಬೈಲ್ ಹಾಗೂ ಡ್ರಗ್ಸ್ ಸೇರಿದಂತೆ ಯಾವುದೇ ಕಾನೂನುಬಾಹಿರ ಕೃತ್ಯಗಳ ಕುರುಹುಗಳು ಪತ್ತೆಯಾಗಿರಲಿಲ್ಲ. ಇದಾದ ಮರುದಿನವೇ ಜೈಲಿನಲ್ಲಿ ದರ್ಶನ್ ರವರಿಗೆ ಲಭಿಸಿದ್ದ ಮೊಬೈಲ್, ಸಿಗರೇಟ್, ಕುರ್ಚಿ ಹಾಗೂ ಕಾಫಿ ಮಗ್ಗಳು ಕುರಿತು ಪೋಟೋಗಳು ಹಾಗೂ ವಿಡಿಯೋಗಳು ಬಹಿರಂಗವಾಗಿ ಸಿಸಿಬಿಗೆ ಮುಜುಗರ ಉಂಟು ಮಾಡಿತ್ತು. ಅಲ್ಲದೆ ಜೈಲಿನ ಮೇಲೆ ಸಿಸಿಬಿ ದಾಳಿ ವಿಚಾರ ತಿಳಿದು ಕೆಲ ಅಧಿಕಾರಿಗಳು ಹಾಗೂ ಕೈದಿಗಳು ಮುಂಜಾಗ್ರತೆವಹಿಸಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತರು, ಜೈಲಿನ ಮೇಲೆ ದಾಳಿ ಮಾಹಿತಿ ಸೋರಿಕೆ ಬಗ್ಗೆ ಆಂತರಿಕ ಮಟ್ಟದ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಹೆಚ್ಚುವರಿ ಆಯುಕ್ತರಿಗೆ (ಅಪರಾಧ) ಸೂಚಿಸಿದ್ದಾರೆ. ಈ ವರದಿ ಬಳಿಕ ಮುಂದಿನ ಕ್ರಮ ಜರುಗಿಸುವಾಗಿ ಆಯುಕ್ತರು ಹೇಳಿದ್ದಾರೆ.