ಕೊಪ್ಪಳ: ಸಮಾಜದಲ್ಲಿ ಮೇಲು, ಕೀಳು ಮತ್ತು ಬಡವ, ಶ್ರೀಮಂತ ಎಂಬ ತಾರತಮ್ಯ ಮನೋಭಾವ ನಾಗರಿಕರೆಲ್ಲರಲ್ಲಿಯೂ ಅಳಿಯಬೇಕು ಎನ್ನುವ ಬಾಬಾ ಸಾಹೇಬರ ಚಿಂತನೆ ಸರ್ವಕಾಲಿಕ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿ.ಡಾಣಿ ಹೇಳಿದರು.
ಜಿಲ್ಲೆಯ ತಳಕಲ್ ಬಳಿ ಇರುವ ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಸಮಾನತೆ, ಶಿಕ್ಷಣ, ಮಹಿಳಾ ಹಕ್ಕು ಹಾಗೂ ಕಾರ್ಮಿಕರ ಕಲ್ಯಾಣ ಅಂಬೇಡ್ಕರ್ ಕನಸುಗಳಾಗಿದ್ದವು.ಸ್ವಾತಂತ್ರ್ಯ ಪೂರ್ವದಲ್ಲಿದ್ದ ಅನಿಷ್ಟ ಪದ್ಧತಿ ನಡುವೆ ಕಠಿಣ ಶ್ರಮ ವಹಿಸಿ ಓದಿ ಶಿಕ್ಷಣ ಪಡೆದು ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡುವ ಮೂಲಕ ಜನ ಸಾಮಾನ್ಯರಲ್ಲಿ ಸ್ವಾಭಿಮಾನ,ಶಿಕ್ಷಣ,ಹೋರಾಟದ ಪ್ರಜ್ಞೆ ಮೂಡಿಸುವಲ್ಲಿ ಬಾಬಾ ಸಾಹೇಬರು ಅಗ್ರಗಣ್ಯರು ಎಂದರು.ಕುಲಸಚಿವ ಪ್ರೊ.ಕೆ.ರಮೇಶ ಮಾತನಾಡಿ, ದೇಶಭಕ್ತಿ, ಪ್ರಜಾಪ್ರಭುತ್ವ ಎರಡು ಕಣ್ಣು ಇದ್ದ ಹಾಗೇ, ಹೋರಾಟ,ಕ್ರಾಂತಿ ಹಾಗೂ ಶಿಕ್ಷಣ ಪ್ರಜಾಪ್ರಭುತ್ವವ ರಕ್ಷಿಸುತ್ತವೆ ಎನ್ನುವ ಚಿಂತನೆ ನೀಡಿದ ಬಾಬಾ ಸಾಹೇಬ್ ಅಂಬೇಡ್ಕರ್ ತಳ ಸಮುದಾಯದವರಿಗಷ್ಟೆ ಅಲ್ಲ ಎಲ್ಲ ಮಾನವರಿಗೂ ಬೇಕಾಗುವ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕ ವೀರೇಶ ಉತ್ತಂಗಿ,ಪಾರ್ವತಿ ಕನಕಗಿರಿ, ಪ್ರವೀಣ ಪಾಟೀಲ್, ಪ್ರದರ್ಶನ ಕಲಾ ವಿಭಾಗದ ಅನಂತ ಕುಮಾರ ದೊರೆ,ರಾಜ್ಯಶಾಸ್ತ್ರದ ಮೌಲಾಸಾಬ್, ಮಂಜುನಾಥ ಪೂಜಾರ, ಪತ್ರಿಕೋದ್ಯಮ ವಿಭಾಗದ ಸೃಷ್ಠಿ ಕಾವಳ್ಕರ್,ವಾಣಿಜ್ಯ ವಿಭಾಗದ ಅಲ್ತಾಫ್ ಹುಸೇನ್, ಅರ್ಥಶಾಸ್ತ್ರ ವಿಭಾಗದ ನಾಗರಾಜ್ ಹಾಗೂ ಎಲ್ಲ ವಿಭಾಗಗಳ ಬೋಧಕ,ಬೋಧಕೇತರ ಸಿಬ್ಬಂದಿ ಸೇರಿದಂತೆ ಇತರರು ಇದ್ದರು.