ಮುಂಡರಗಿ: ದೇಶದ ಹಸಿವನ್ನು ಅರಿತು ಬೇರೆ ದೇಶಗಳಿಂದ ಆಹಾರ ಸಾಮಗ್ರಿ ತರಿಸಿಕೊಂಡು ನಮ್ಮ ದೇಶದ ಜನರ ಹಸಿವನ್ನು ನೀಗಿಸಿದ ಕೀರ್ತಿ ಡಾ. ಬಾಬು ಜಗಜೀವನ್‌ರಾಂ ಅವರಿಗೆ ಸಲ್ಲುತ್ತದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ತಿಳಿಸಿದರು.

ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಭಾನುವಾರ ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಭವನದಲ್ಲಿ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ್‌ರಾಂ 119ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾವು ಚಿಕ್ಕವರಿದ್ದಾಗ ನಮ್ಮ ಅಜ್ಜನವರ ಕಾಲಕ್ಕೆ ನಮಗೆಲ್ಲ ಶಾಲೆಯಲ್ಲಿ ಮಧ್ಯಾಹ್ನ ಉಪ್ಪಿಟ್ಟು ಕೊಡುತ್ತಿದ್ದರು. ನಾವು ಕಲಿಯಲು ಹೋಗದಿದ್ದರೂ ಶಾಲೆಯಲ್ಲಿ ಕೊಡುವ ಉಪ್ಪಿಟ್ಟಿನಿಂದ ನಮ್ಮ ಹಸಿವನ್ನಾದರೂ ನೀಗಿಸಿಕೊಳ್ಳಬಹುದು ಎಂದು ನಾವು ತಪ್ಪದೇ ಶಾಲೆಗೆ ಹೋಗುತ್ತಿದ್ದೆವು. ನಂತರ ಇಡೀ ದೇಶದ ಅನ್ನದ ಅಭಾವ ಪರಿಹರಿಸಿದ ಕೀರ್ತಿ ಬಾಬು ಜಗಜೀವನ್‌ರಾಂ ಅವರಿಗೆ ಸಲ್ಲುತ್ತದೆ ಎಂದರು.

ಸೋಮಣ್ಣ ಹೈತಾಪೂರ ಮಾತನಾಡಿ, ಬಾಬು ಜಗಜೀವನ್‌ರಾಂ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ದಲಿತರನ್ನು ಮಾತ್ರ ಮೇಲೆತ್ತದೇ ಎಲ್ಲ ವರ್ಗದ ಜನರ ಅಭಿವೃದ್ಧಿಗಾಗಿ ಅನೇಕ ಜನೋಪಯೋಗಿ ಕಾರ್ಯ‌ ಮಾಡಿದ್ದರು. ವಿದ್ಯಾರ್ಥಿ ದೆಸೆಯಲ್ಲಿರುವಾಗಲೇ ಬಡ ಹಾಗೂ ಹಿಂದುಳಿದ ಮತ್ತು ಶೋಷಿತರ ಧ್ವನಿಯಾಗಿದ್ದರು. ಕೃಷಿ ಸಚಿವರಾಗಿ ಅತ್ಯುತ್ತಮ ಕಾರ್ಯ ಮಾಡಿದ್ದರು. ಬೇರೆ ಬೇರೆ ದೇಶಗಳ ನಾಯಕರೊಂದಿಗೆ ಚರ್ಚಿಸಿ ಅಲ್ಲಿನ ಆಹಾರ ಪದಾರ್ಥಗಳನ್ನು ತರಿಸಿಕೊಂಡು ನಮ್ಮ ದೇಶದ ಜನತೆಗೆ ನೀಡಿದರು ಎಂದರು. ಅಧ್ಯಕ್ಷತೆ ವಹಿಸಿ ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಮಾತನಾಡಿ, ಡಾ. ಬಾಬು ಜಗಜೀವನ್‌ರಾಂ ಶಿಕ್ಷಣ, ಪರಿಶ್ರಮ ಇದ್ದರೆ ಏನೆಲ್ಲವನ್ನೂ ಪಡೆದುಕೊಂಡು ಸಾಧಕರಾಗಿ ನಿಲ್ಲಬಹುದು ಎನ್ನುವುದನ್ನು‌ ತಿಳಿಸಿ ಕೊಟ್ಟಿದ್ದರು. ಕಾರ್ಮಿಕ ಇಲಾಖೆ, ರೈಲ್ವೆ ಹಾಗೂ ಸಾರಿಗೆ‌ ಇಲಾಖೆ, ಕೃಷಿ ಸಚಿವರಾಗಿ ಆಹಾರ ಭದ್ರತೆಯ ಕೊರತೆ ನೀಗಿಸಿದರು ಎಂದರು.

ಚಂದ್ರಶೇಖರ್ ಪೂಜಾರ, ರಾಘವೇಂದ್ರ ನರೇಗಲ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸವಿತಾ ಸಾಸ್ವಿಹಳ್ಳಿ, ಸುನಿತಾ ಎಸ್., ಶಿವಯೋಗಿ ಕಲ್ಮಠ, ದುರುಗಪ್ಪ ವಿಠಲಾಪೂರ, ರಾಮಣ್ಣ ಕೋಳಿ, ಸೋಮಣ್ಣ ಹೈತಾಪೂರ, ದ್ಯಾಮಣ್ಣ ವಾಲಿಕಾರ, ಎ.ವೈ. ನವಲಗುಂದ, ವಿ.ಎಸ್. ಗಟ್ಟಿ, ಲಕ್ಷ್ಮಣ ತಗಡಿನಮನಿ, ನಿಂಗಪ್ಪ ಬಂಡಾರಿ, ಸುಶೀಲಾ ಛಲವಾದಿ ಇತರರು ಉಪಸ್ಥಿತರಿದ್ದರು. ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಯಲ್ಲಪ್ಪ ನಾಗಮ್ಮನವರ ನಿರೂಪಿಸಿದರು. ಶ್ರೀಕಾಂತ ಅರಹುಣಸಿ ವಂದಿಸಿದರು.