ಹಗರಿಬೊಮ್ಮನಹಳ್ಳಿ: ಡಾ.ಬಾಬು ಜಗಜೀವನರಾಮ್ ತಮ್ಮ ಅಧಿಕಾರಾವಧಿಯುದ್ದಕ್ಕೂ ಸಮಾಜದಲ್ಲಿನ ಅಸ್ಪೃಷ್ಯತೆ, ಬಡತನ, ನಿರುದ್ಯೋಗ ಮತ್ತು ಆಹಾರದ ಕೊರತೆಯಂತಹ ಗಂಭೀರ ಸಮಸ್ಯೆಗಳ ನಿವಾರಣೆಗೆ ಶ್ರಮಿಸಿ ಯಶಸ್ವಿಯಾದರು ಎಂದು ಡಾ.ಬಿ.ಆರ್.ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಗದ್ದಿಕೆರೆ ಎಚ್.ದೊಡ್ಡಬಸಪ್ಪ ತಿಳಿಸಿದರು.
ಪಟ್ಟಣದ ತಾಲೂಕು ಸೌಧದಲ್ಲಿ ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಮ್ ಜಯಂತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಸಿಕ್ಕ ಕೆಲವೇ ವರ್ಷಗಳ ಅಧಿಕಾರದ ಸದ್ಬಳಕೆ ಮಾಡಿಕೊಂಡು ದೇಶದ ಪರಿಸ್ಥಿತಿ ಸುಧಾರಿಸಲು ಆಹಾರ ಧಾನ್ಯದಲ್ಲಿ ಇಳುವರಿ ಹೆಚ್ಚಿಸಲು ಬಿತ್ತನೆ ಬೀಜ, ಗೊಬ್ಬರ ಆಧುನಿಕ ಕೃಷಿ ಸಲಕರಣೆಗಳು ಜೊತೆಗೆ ರೈತರಿಗೆ ನೀರಾವರಿ ಪದ್ಧತಿ ಪರಿಚಯಿಸಿ ಕೃಷಿ ಕ್ಷೇತ್ರದಲ್ಲಿ ಬದಲಾವಣೆ ತಂದು ಕೃಷಿ ಕ್ರಾಂತಿಯ ಹರಿಕಾರರೆನಿಸಿದರು ಎಂದು ಅಭಿಪ್ರಾಯಪಟ್ಟರು.ತಹಸೀಲ್ದಾರ್ ಆರ್.ಕವಿತಾ ಮಾತನಾಡಿ, ದೈತ್ಯ ಪ್ರತಿಭೆಯಾಗಿದ್ದ ಬಾಬೂಜಿ ನಾನಾ ಖಾತೆಗಳನ್ನು ನಿರ್ವಹಿಸಿದರು. ದೇಶದ ಹಸಿವೆಗೆ ಅನ್ನದ ದಾರಿ ಹುಡುಕಿದವರು. ಕೃಷಿ ಖಾತೆಯಲ್ಲಿ ಉತ್ತಮ ಯೋಜನೆಗಳನ್ನು ಜಾರಿಗೆ ತರುವ ಜೊತೆಗೆ ರಕ್ಷಣಾ ಖಾತೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಅವರ ಮಾರ್ಗದರ್ಶನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಸಂತಸ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಜಗದೀಶ ದಿಡುಗೂರು, ಶೋಭಾ, ಸುಧಾ ಕರ್ಣಂ, ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಸಿ.ಬಸವರಾಜ, ಅಲೆಮಾರಿ ಸಂಘದ ತಾಲೂಕು ಅಧ್ಯಕ್ಷ ಮಲ್ಲೇಶಪ್ಪ, ಅಂಬೇಡ್ಕರ್ ಸ್ವಾಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ, ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಕೋಗಳಿ ಉಮೇಶ, ಪ್ರಮುಖರಾದ ಮೈಲಪ್ಪ, ಅಲಬೂರು ಗಣೇಶ, ಕೆಚ್ಚಿನಬಂಡಿ ದುರುಗಪ್ಪ, ಎಚ್.ಲೋಕಪ್ಪ, ಕೆ.ನಾಗರಾಜ, ಪರಶುರಾಮ್, ಎಚ್.ಮಹೇಶ, ಎಚ್.ರಮೇಶ್, ಒಂಟಿ ಮೇಘರಾಜ, ಬಿ.ಬಸವರಾಜ, ನೀಲಗಿರಿಯಪ್ಪ, ಮದ್ಧಾನಪ್ಪ, ಚಿಲುಗೋಡು ಮೈಲಪ್ಪ, ಭರಮಪ್ಪ, ದಶಮಾಪುರ ಮರಿಯಪ್ಪ, ನಿಲಯಗಳ ಪಾಲಕರಾದ ಜಯಮ್ಮ, ಗೀತಾ, ಆಶಾ, ನಾಗರಾಜ್, ಜ್ಯೋತಿ ಹಾಗೂ ಚಂದ್ರನಾಯ್ಕ ಮತ್ತಿತರರು ಪಾಲ್ಗೊಂಡಿದ್ದರು .