ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

೫೦ ಲಕ್ಷ ರು. ವೆಚ್ಚದಲ್ಲಿ ಪೂರ್ಣಗೊಂಡ ಬಸವನಕಟ್ಟೆ-ಶಾಂತಳ್ಳಿ ಮುಖ್ಯ ರಸ್ತೆಯನ್ನು ತಾಪಂ ಮಾಜಿ ಅಧ್ಯಕ್ಷ ಕೆ.ಎಲ್‌. ಲೋಕೇಶ್ ಉದ್ಘಾಟಿಸಿದರು.ಸೋಮವಾರಪೇಟೆ-ಶಾಂತಳ್ಳಿ ರಾಜ್ಯ ಹೆದ್ದಾರಿಯ ಬಸವನಕಟ್ಟೆ ಗ್ರಾಮದ ಬಳಿ ಪ್ರತಿ ಮಳೆಗಾಲದಲ್ಲಿ ರಸ್ತೆ ಗುಂಡಿ ಬಿದ್ದು, ಡಾಂಬರ್‌ ಕಿತ್ತುಹೋಗುತ್ತಿತ್ತು. ಈ ನಿಟ್ಟಿನಲ್ಲಿ ಕಾಂಕ್ರೀಟ್ ರಸ್ತೆಯ ಅಗತ್ಯದ ಬಗ್ಗೆ ಸ್ಥಳೀಯರು ಶಾಸಕ ಡಾ. ಮಂತರ್ ಗೌಡ ಅವರಿಗೆ ಮನವರಿಕೆ ಮಾಡಿದ್ದರು.ಅದರಂತೆ ೨೭೦ ಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಶಾಸಕರು ೫೦ ಲಕ್ಷ ರು. ಅನುದಾನ ಒದಗಿಸಿ, ಭೂಮಿ ಪೂಜೆ ನೆರವೇರಿಸಿದ್ದರು. ರಸ್ತೆ ನಿರ್ಮಾಣ ಕಾರ್‍ಯ ಪೂರ್ಣಗೊಂಡಿದ್ದು ಸಂಚಾರಕ್ಕೆ ಮುಕ್ತವಾಗಿದೆ. ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದ ತಾಪಂ ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್ ಅವರು, ಶಾಸಕ ಡಾ. ಮಂತರ್ ಗೌಡ ಅವರು ರಸ್ತೆ ನಿರ್ಮಾಣಕ್ಕೆ ಅನುದಾನ ಒದಗಿಸುವ ಮೂಲಕ ಹಲವು ವರ್ಷಗಳ ಬೇಡಿಕೆ ಈಡೇರಿಸಿದ್ದಾರೆ. ಕ್ಷೇತ್ರದಾದ್ಯಂತ ಕೋಟ್ಯಂತರ ರು. ಅನುದಾನದಡಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಶಾಂತಳ್ಳಿ, ಬೆಟ್ಟದಳ್ಳಿ ಭಾಗದಂತಹ ಗ್ರಾಮಗಳಿಗೂ ಲಕ್ಷಾಂತರ ರು. ಅನುದಾನ ಒದಗಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳ ಯಶಸ್ವಿ ಅನುಷ್ಠಾನದೊಂದಿಗೆ ಅಭಿವೃದ್ಧಿಗೂ ಅನುದಾನ ಒದಗಿಸುತ್ತಿದೆ ಎಂದರು. ಗ್ರಾಮಾಧ್ಯಕ್ಷ ಬಸವರಾಜು, ಗ್ರಾಪಂ ಸದಸ್ಯ ಚಂಗಪ್ಪ, ಪ್ರಮುಖರಾದ ಮಧು ಕುಮಾರ್, ಲಿಖಿತ್, ಪ್ರತಾಪ್, ವಿನೋದ್, ಮುತ್ತಣ್ಣ, ಸುಬ್ಬಯ್ಯ, ಪ್ರಕಾಶ್ ಇದ್ದರು.