ಸಾರಾಂಶ
ಸಾಣೇಹಳ್ಳಿಯಶ್ರೀಮಠದಲ್ಲಿ ‘ವಿಶ್ವಗುರು ಬಸವಣ್ಣ `ಸಾಂಸ್ಕೃತಿಕ ನಾಯಕ’ ಭಾವಚಿತ್ರ ಬಿಡುಗಡೆ ಸಮಾರಂಭ ಹಾಗೂ ‘ಮಾನವೀಯ ಸಮಾಜ ನಿರ್ಮಾಣದಲ್ಲಿ ವಚನ ಸಾಹಿತ್ಯ’ಕುರಿತ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಹೊಸದುರ್ಗ
ಬಸವಣ್ಣ ಕೇವಲ ಪೂಜೆಯ ವಸ್ತುವಾಗಬಾರದು. ಬಸವಣ್ಣನವರ ಆಶಯಗಳನ್ನು ನಿಮ್ಮ ಮನೆ ಮನಗಳಲ್ಲಿ ಬಿತ್ತಿಕೊಂಡು ಅವುಗಳನ್ನೇ ಬೆಳೆದರೆ ನಿಮ್ಮ ಬದುಕು ಹಸನಾಗುತ್ತದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ತಾಲೂಕಿನ ಶ್ರೀಮಠದಲ್ಲಿ ಶನಿವಾರ ನಡೆದ ‘ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ’ ಭಾವಚಿತ್ರ ಬಿಡುಗಡೆ ಸಮಾರಂಭ ಹಾಗೂ ‘ಮಾನವೀಯ ಸಮಾಜ ನಿರ್ಮಾಣದಲ್ಲಿ ವಚನ ಸಾಹಿತ್ಯ’ ಸಂವಾದ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಬಸವಣ್ಣನವರ ಭಾವಚಿತ್ರವನ್ನು ಸರ್ಕಾರಿ ಶಾಲಾ-ಕಾಲೇಜು, ಕಛೇರಿ, ಮನೆಗಳಲ್ಲಿ ಹಾಕಬೇಕು ಎನ್ನುವ ಆಶಯ ಸರ್ಕಾರದ್ದು, ಇದರ ಮೂಲಕ ಮಕ್ಕಳಿಗೆ ಬಸವಣ್ಣನವರ ಪರಿಚಯ ಆಗಬೇಕು. ವಿಶ್ವದ ಅನೇಕ ಸಂತರಲ್ಲಿ, ಶರಣರಲ್ಲಿ, ಸಾಮಾಜಿಕ ನೇತಾರರಲ್ಲಿ ಪ್ರಥಮ ಸ್ಥಾನ ಲಭ್ಯವಾಗುವಂಥದ್ದು ಬಸವಣ್ಣನವರಿಗೆ. ಕಾರಣ ತಳಮೂಲದ ಸಂಸ್ಕೃತಿಯಿಂದ ಸಮಾಜವನ್ನು ಕಟ್ಟುವ ಕಾರ್ಯ ಮಾಡಿದರು. ಅಜ್ಞಾನ, ಮೂಢನಂಬಿಕೆ, ಮೌಢ್ಯವನ್ನು ಕಿತ್ತುಹಾಕುವ ಕಾರ್ಯದಲ್ಲಿ ಯಶಸ್ವಿಯಾಗಿ ಸಮಸಮಾಜ ಕಟ್ಟುವ ಅವರ ಕನಸು ನನಸಾಯಿತು ಎಂದರು. ಚಿಂತಕ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಲಿಂಗಾಯತ ಧರ್ಮ ನಿಸರ್ಗಕ್ಕೆ ಪೂರಕವಾಗಿರುವ ಧರ್ಮ. ಈಗಲೂ ಎಷ್ಟೋ ಮಠಗಳಲ್ಲಿ ಹೋಮ - ಹವನ ನಡೆಯುತ್ತಿರು ವುದನ್ನು ನಾಚಿಕೆಗೇಡಿನ ಸಂಗತಿ. ಶರಣರು ವೈದಿಕ ಪಠ್ಯಗಳನ್ನು ವಿರೋಧಿಸುವರು. ಕೇಡಿನ ಮೂಲ ಕುರಿತಂತೆ ಅರಿವಿನ ಎಚ್ಚರದೊಳಗೆ ಮಾತನಾಡುವಂಥ, ದಾನದ ವಿರುದ್ಧವಾಗಿ ದಾಸೋಹ ರೂಪ ಕೊಟ್ಟವರು. ಅನೇಕ ವರ್ಗದವರು ನಮ್ಮಲ್ಲಿನ ಅಜ್ಞಾನದಿಂದ ನಮ್ಮನ್ನು ಸಾಂಸ್ಕೃತಿಕ ಗುಲಾಮರನ್ನಾಗಿ ಮಾಡಿಕೊಂಡಿದ್ದಾರೆ. ದಾಸೋಹಕ್ಕೆ ವಿರುದ್ಧವಾದ ಪ್ರಕ್ರಿಯೆ ಬಜೆಟ್. ಮಠಗಳಿಗೆ ಸರ್ಕಾರದಿಂದ ಕೋಟಿ ಕೋಟಿ ಹಣ ಬಜೆಟ್ನಲ್ಲಿ ಘೋಷಣೆ ಮಾಡಿದ್ದರಿಂದ ಮಠವೂ ಕೂಡ ಅಪವೀತ್ರೀಕರಣವಾಗಿದೆ. ಕಾಯಕ ನೀತಿ ಪ್ರತಿಯೊಬ್ಬರಲ್ಲಿ ಬರಬೇಕಾಗಿದೆ ಎಂದರು.ಚಿಂತಕ ನಟರಾಜ್ ಬೂದಾಳು ಮಾತನಾಡಿ, ಬಸವಣ್ಣನವರು ಹಾಕಿಕೊಟ್ಟ ವಿಚಾರಗಳನ್ನು ಜಾರಿಗೆ ತರುವಲ್ಲಿ ನಾವೆಲ್ಲ ಸೋತಿದ್ದೇವೆ. ನಮ್ಮ ನಡುವಿನ ಬುದ್ಧ, ಬಸವ, ಅಂಬೇಡ್ಕರ್ರವರ ಚಿಂತನೆಗಳು ತತ್ವಗಳು ಕೇವಲ ತತ್ವಗಳಾಗಿ ಉಳಿದುಕೊಳ್ಳದೇ ಆಚರಣೆಗೆ ತಂದಾಗ ಮಾತ್ರ ಏನಾದರೂ ಬದಲಾವಣೆ ಮಾಡಲಿಕ್ಕೆ ಸಾಧ್ಯ ಎಂದರು.ಚಿಂತಕ ರಹಮತ್ ತರೀಕೆರೆ ಮಾತನಾಡಿ, ದುಡಿಮೆಯಲ್ಲಿ ಎಲ್ಲರನ್ನೂ ಒಳಗೊಳ್ಳುವಿಕೆಯ ಶಕ್ತಿಯಿದೆ. ಅಂತಹ ಶ್ರಮಿಕ ವರ್ಗದವರನ್ನು ಸೃಷ್ಠಿ ಮಾಡಿದರು. ಬಸವಾದಿ ಶರಣರು. ಬಡತನ, ಜಾತಿ, ಗಂಡು ಹೆಣ್ಣಿನ ನಿಲುವೇನು ಎನ್ನುವುದನ್ನು ಶರಣರು ಅರ್ಥ ಮಾಡಿಕೊಂಡಿದ್ದರು. ಶರಣರನ್ನು ಯಾರು ಕೊಂದರೋ ಅವರೇ ಈಗ ಕೋಮುವಾದಿಗಳಾಗಿ ರೂಪಾಂತರ ಹೊಂದುತ್ತಿರುವುದು ದುರಂತ ಎಂದರು. ಬಸವರಾಜ ಸಾದರ ಮಾತನಾಡಿ, ಬಸವಣ್ಣನ ಹೆಸರನ್ನು ಹೇಳಿಕೊಂಡು ಬದುಕುವ ಸಾವಿರಾರು ಮಠಗಳು ಕರ್ನಾಟಕದಲ್ಲಿವೆ. ಆದರೆ, ಮುಸ್ಲಿಂ ಧರ್ಮದವರು ಬಸವಣ್ಣ ಮತ್ತು ವಚನ ಸಾಹಿತ್ಯವನ್ನು ಎದೆಯೊಳಗಿಟ್ಟುಕೊಟ್ಟುಕೊಂಡು ಆರಾಧಿಸುತ್ತಾರೆ. ಲಿಂಗಾಯತ ಧರ್ಮದವರು ಇತ್ತೀಚಿನ ದಿನಗಳಲ್ಲಿ ಕುಲಗೆಟ್ಟು ಹೋಗಿದ್ದಾರೆ. ಬರೀ ವೇದಿಕೆಯ ಮೇಲೆ, ಮಾತಿನಲ್ಲಿ ಮರುಳು ಮಾಡಿ ಬಸವಣ್ಣನನ್ನು ಎಲ್ಲಿಟ್ಟಿದ್ದಾರೋ ಅಲ್ಲೇ ಇಡುವ ಕೆಲಸ ನಮ್ಮ ಜನಪ್ರತಿನಿಧಿಗಳಿಂದ ಆಗುತ್ತಿದೆ ಎಂದರು. ವೇದಿಕೆಯ ಮೇಲೆ ಚಿಂತಕ ಶಿವನಕೆರೆ ಬಸವಲಿಂಗಪ್ಪ, ಐ.ಜಿ.ಚಂದ್ರಶೇಖರಯ್ಯ ಇದ್ದರು. ಶಿವಸಂಚಾರದ ಕಲಾವಿದ ನಾಗರಾಜ್ ಹೆಚ್.ಎಸ್. ಹಾಗೂ ಶರಣ ವಚನಗೀತೆ ಗಳನ್ನು ಹಾಡಿದರು. ಮುಖ್ಯೋಪಾಧ್ಯಾಯ ಶಿವಕುಮಾರ್ ಬಿ.ಎಸ್. ಸ್ವಾಗತಿಸಿದರೆ ಮಲ್ಲಿಕಾರ್ಜುನ್ ನಿರೂಪಿಸಿ ವಂದಿಸಿದರು. ಉಭಯ ಶಾಲೆಗಳ ಮುಖ್ಯೋಪಾಧ್ಯಾಯರು, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.