ಸಾರಾಂಶ
ಹಿರಿಯೂರು ನಗರದ ಗುರುಭವನದಲ್ಲಿ ನಡೆದ ಬೀಟ್ ಸದಸ್ಯರ ಹಾಗೂ ಸಾರ್ವಜನಿಕ ಸಂಪರ್ಕ ಸಭೆಯನ್ನು ಉದ್ದೇಶಿಸಿ ಎಸ್ಪಿ ರಂಜಿತ್ ಕುಮಾರ್ ಬಂಡಾರು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಹಿರಿಯೂರು
ಅಪರಾಧ ಚಟುವಟಿಕೆಗಳನ್ನು ಬೀಟ್ ವ್ಯವಸ್ಥೆ ಮೂಲಕ ಕಡಿಮೆ ಮಾಡಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅಭಿಪ್ರಾಯಪಟ್ಟರು.ನಗರದ ಗುರುಭವನದಲ್ಲಿ ನಡೆದ ಬೀಟ್ ಸದಸ್ಯರ ಹಾಗೂ ಸಾರ್ವಜನಿಕ ಸಂಪರ್ಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿಯೊಂದು ಗ್ರಾಮ ಹಾಗೂ ವಾರ್ಡ್ಗಳ ಮಟ್ಟದಲ್ಲಿ ಹೊಸ ಬೀಟ್ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಸ್ಥಳೀಯ ಚಟುವಟಿಕೆಗಳ ಮಾಹಿತಿ ಸಂಗ್ರಹ ಸುಲಭವಾಗಿದೆ. ಬೀಟ್ ಸದಸ್ಯರು ಹಾಗೂ ಸಾರ್ವಜನಿಕರು ಬೀಟ್ ಪೊಲೀಸರಿಗೆ ಮಾಹಿತಿ ನೀಡಬೇಕು. ಸಂಚಾರ ವ್ಯವಸ್ಥೆ, ಗಾಂಜಾ, ಆಫೀಮು, ಮಾದಕ ದ್ರವ್ಯಗಳ ಮಾರಾಟದ ಸ್ಥಿತಿಗತಿಗಳ ಬಗ್ಗೆ ಸಮಗ್ರ ಮಾಹಿತಿ ಸಿಗಲಿದೆ. ಠಾಣೆಗಳು ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು. ನಾಗರೀಕರು ಸಮವಸ್ತ್ರವಿಲ್ಲದ ಪೊಲೀಸರಾಗಬೇಕು. ಸಾರ್ವಜನಿಕ ಸಭೆಗಳಲ್ಲಿ ವ್ಯಕ್ತವಾಗುವ ಸಮಸ್ಯೆಗಳ ಪರಿಹಾರಕ್ಕೆ ಇಲಾಖೆ ಪರಿಹಾರ ಒದಗಿಸಲಿದೆ ಎಂದರು.ಸಿಇಎನ್ ಡಿವೈಎಸ್ಪಿ ಈಶ್ವರನಾಯಕ್ ಮಾತನಾಡಿ, ನಾಗರೀಕ ಸಮಾಜ ಶಾಂತಿ ಸುವ್ಯವಸ್ಥೆಯಿಂದ ಇರಲು ಪೊಲೀಸ್ ಇಲಾಖೆ ಆಗಾಗ ಹೊಸ ವ್ಯವಸ್ಥೆಗಳನ್ನು ಜಾರಿ ಮಾಡಲಿದೆ. ಪೊಲೀಸ್ ಇಲಾಖೆಯನ್ನು ಆದಷ್ಟು ಜನರ ಬಳಿ ಕೊಂಡೊಯ್ಯುವ ಪ್ರಯತ್ನ ಮಾಡಲಾಗುತ್ತಿದೆ. ಬೀಟ್ ವ್ಯವಸ್ಥೆಯಿಂದಾಗಿ ಸಿಬ್ಬಂದಿ ಕಾರ್ಯಾಚರಣೆಯ ಬಗ್ಗೆ ಇಲಾಖಾಧಿಕಾರಿಗಳಿಗೆ ಮಾಹಿತಿ ಸಿಗಲಿದೆ ಎಂದರು.
ಡಿವೈಎಸ್ಪಿ ಶಿವಕುಮಾರ್ ಮಾತನಾಡಿ, ಸಾರ್ವಜನಿಕರಿಗೆ ಅರಿವು ಮೂಡಿಸುವುದರಿಂದ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯ. ಯಾವುದೇ ಕೆಲಸವಾಗಲಿ ಜಾಗೃತಿ ಮೂಡಿಸಿದರೆ ಯಶಸ್ಸು ಸಾಧ್ಯ ಎಂದರು. ಈ ಸಂದರ್ಭದಲ್ಲಿ ಸಿಪಿಐ ಗಳಾದ ಗುಡ್ಡಪ್ಪ, ರಾಘವೇಂದ್ರ ಕಾಂಡಿಕೆ, ಆನಂದ್,ಸಿಇಎನ್ ಇನ್ಸ್ಪೆಕ್ಟರ್ ವೆಂಕಟೇಶ್ ಹಾಗೂ ಪೊಲೀಸ್ ಇಲಾಖೆಗಳ ಸಿಬ್ಬಂದಿಗಳು, ಸಾರ್ವಜನಿಕರು ಹಾಜರಿದ್ದರು.