ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಕುತೂಹಲ ಹಾಗೂ ಪರಿಹಾರವನ್ನು ಕಂಡುಕೊಳ್ಳುವ ದೃಷ್ಟಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಭಾರತ ಜ್ಞಾನ ವಿಜ್ಞಾನ ಸಮಿತಿ ಹಲವು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ಜಿಲ್ಲಾ ಬಿಜೆಎಸ್ವಿ ಉಪಾಧ್ಯಕ್ಷೆ ಸಿ ಸೌಭಾಗ್ಯ ಹೇಳಿದರು.ಅವರು ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಜೀವನ್ಮುಖಿ ಮಹಿಳಾ ಸಾಂಸ್ಕೃತಿಕ ಮತ್ತು ಸಮಾಜ ಸೇವಾ ಸಮಿತಿ ಮತ್ತು ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘ ಮತ್ತು ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ಹಾಗೂ ಪ್ರೌಢಶಾಲಾ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋವೃತ್ತಿ ಏಕೆ ಹೇಗೆ ಕುರಿತಂತೆ ವಿಚಾರ ಮಂಡಿಸಿದವರು. ಮಕ್ಕಳೊಂದಿಗೆ ಸಂವಾದ ನಡೆಸಿದರು ಹಾಗೂ ರಸಪ್ರಶ್ನೆಯ ಮೂಲಕ ಮಕ್ಕಳಲ್ಲಿನ ಹಲವು ಪ್ರಶ್ನೆಗಳಿಗೆ ಕುತೂಹಲವನ್ನು ಸಹ ಪರಿಹಾರ ಮಾಡಿದರಲ್ಲದೆ ತಮ್ಮ ವತಿಯಿಂದ ಮಕ್ಕಳಿಗೆ ಕಿರು ಕಾಣಿಕೆ ನೀಡಿ ಪ್ರೋತ್ಸಾಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಲಕಿಯರ ಪ್ರೌಢಶಾಲೆ ಉಪ ಪ್ರಾಂಶುಪಾಲ ಜಗದೀಶ್ ಹಿರೇಮಠ್ ವಿಜ್ಞಾನದಲ್ಲಿ ನಾವು ಸಾಕಷ್ಟು ಮುಂದುವರೆದಿದ್ದೇವೆ. ವೈಜ್ಞಾನಿಕವಾಗಿ ನಮ್ಮ ಚಿಂತನೆಗಳು ಇರಬೇಕು. ಇಂತಹ ಕಾರ್ಯಕ್ರಮಗಳ ಮೂಲಕ ಹಲವು ಶಂಕೆಗಳನ್ನು ಸಹ ನಿವಾರಣೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ವೈಜ್ಞಾನಿಕ ಚಿಂತನೆಗಳನ್ನು ಮಕ್ಕಳಲ್ಲಿ ನಾವು ಮೂಡಿಸಿದಾಗ ಮೂಢನಂಬಿಕೆಗಳ ತಡೆಗೆ ಸಾಧ್ಯವಾಗುತ್ತದೆ. ಸಮಿತಿಯು ನಮ್ಮ ಶಾಲೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಮಕ್ಕಳಿಗೆ ಒಂದು ಉಪಯುಕ್ತ ಕಾರ್ಯಕ್ರಮವಾಗಿದೆ ಎಂದರು. ಬೇಲೂರಿನ ಬಿಜೆವಿಎಸ್ ತಾಲೂಕು ಅಧ್ಯಕ್ಷ ಅಂಥೋನಿ ವಿಜ್ಞಾನಿಗಳು ಸಂಶೋಧನೆ ಸಾಧನೆ ಮತ್ತು ಅವರುಗಳ ಕೊಡುಗೆಯ ಬಗ್ಗೆ ವಿವರಿಸಿದರು.ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಹಾಗೂ ಸರ್ಕಾರಿ ನೌಕರರ ಸಂಘದ ನಿರ್ದೇಶಕಿ ಕಮಲ ಎ.ಪಿ ಮಕ್ಕಳಲ್ಲಿ ವೈಜ್ಞಾನಿಕ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮಗಳು ಬಹಳ ಅಗತ್ಯ ಕೆಲವು ಮೂಢನಂಬಿಕೆಗಳಿಂದ ಹೊರತರಲು ಮಕ್ಕಳಿಗೆ ನಾವು ಜಾಗೃತಿ ಮೂಡಿಸಿದಾಗ ಪೋಷಕರಲ್ಲಿ ಅದು ಸಾಕಷ್ಟು ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಕಾರ್ಯಕರ್ತರಿಗೆ ಹಳೆ ವಿದ್ಯಾರ್ಥಿಗಳ ಸಂಘದ ಸದಸ್ಯೆ ಉಮಾ ಖಜಾಂಚಿ ಹಾಗೂ ಬಿಜಿವಿಎಸ್ ಜಿಲ್ಲಾ ಸಮಿತಿ ಸದಸ್ಯೆ ಮಮತಾರಾಣಿ ಎಸ್. ಎನ್. ಕಾರ್ಯದರ್ಶಿ ವನಿತಾ, ಸದಸ್ಯ ಉಮಾ ಹಾಗೂ ಶಾಲಾ ಶಿಕ್ಷಕ ವರ್ಗ ಉಪಸ್ಥಿತರಿದ್ದರು. ಶಿಕ್ಷಕ ನವೀನ್ ಎಲ್ಲರನ್ನ ಸ್ವಾಗತಿಸಿ ಶಿಕ್ಷಕಿ ವಾಣಿ ವಂದಿಸಿದರು.