ಸರ್ಕಾರಿ ನೌಕರ ಕ್ರಿಮಿನಲ್‌ ಕೇಸಲ್ಲಿ ದೋಷಿಯಾದ್ರೆ ಮತ್ತೆ ಸೇವೆಗಿಲ್ಲ : ಕೋರ್ಟ್‌

| N/A | Published : Apr 26 2025, 12:12 PM IST

karnataka highcourt
ಸರ್ಕಾರಿ ನೌಕರ ಕ್ರಿಮಿನಲ್‌ ಕೇಸಲ್ಲಿ ದೋಷಿಯಾದ್ರೆ ಮತ್ತೆ ಸೇವೆಗಿಲ್ಲ : ಕೋರ್ಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಕ್ರಿಮಿನಲ್‌ ಪ್ರಕರಣಗಳಲ್ಲಿ ದೋಷಿಯಾಗಿ ನಿರ್ಧಾರಗೊಂಡು ಜೈಲು ಶಿಕ್ಷೆಗೆ ಒಳಗಾದ ಸರ್ಕಾರಿ ನೌಕರ ಪುನಃ ಸೇವೆಯಲ್ಲಿ ಮುಂದುವರಿಯಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿ ಹೈಕೋರ್ಟ್‌ ಆದೇಶಿಸಿದೆ.

ಬೆಂಗಳೂರು: ಕ್ರಿಮಿನಲ್‌ ಪ್ರಕರಣಗಳಲ್ಲಿ ದೋಷಿಯಾಗಿ ನಿರ್ಧಾರಗೊಂಡು ಜೈಲು ಶಿಕ್ಷೆಗೆ ಒಳಗಾದ ಸರ್ಕಾರಿ ನೌಕರ ಪುನಃ ಸೇವೆಯಲ್ಲಿ ಮುಂದುವರಿಯಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿ ಹೈಕೋರ್ಟ್‌ ಆದೇಶಿಸಿದೆ. 

ಕ್ರಿಮಿನಲ್‌ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಹಿನ್ನೆಲೆಯಲ್ಲಿ ತನ್ನನ್ನು ಬೆಂಗಳೂರು ನಗರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಉದ್ಯೋಗದಿಂದ ವಜಾಗೊಳಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ನಂಜೇಗೌಡ ಎಂಬಾತ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ನಂಜೇಗೌಡಗೆ 2001ರ ನಡೆದಿದ್ದ ಹಲ್ಲೆ ಪ್ರಕರಣವೊಂದರಲ್ಲಿ 2011ರಲ್ಲಿ 2 ವರ್ಷ ಜೈಲಾಗಿತ್ತು. ಶಿಕ್ಷೆ ಪೂರೈಸಿದ ಬಳಿಕ ತಮ್ಮನ್ನು ಮತ್ತೆ ಸೇವೆಗೆ ಸೇರ್ಪಡೆಗೊಳಿಸುವಂತೆ ನಂಜೇಗೌಡ ಹೈಕೋರ್ಟ್‌ ಮೊರೆ ಹೋಗಿದ್ದರು.

ಭಾಗಿಯಾಗಿದ್ದ ಸಂಬಂಧ 2011ರಲ್ಲಿ ಮಾಗಡಿಯ ವಿಚಾರಣಾ ನ್ಯಾಯಾಲಯ 2 ವರ್ಷ ಕಾಲ ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಈ ಆದೇಶದ ಅನ್ವಯ ನಂಜೇಗೌಡ ಅವರನ್ನು ಸೇವೆಯಿಂದ ವಜಾಗೊಳಿಸಿ 2023ರ ನ.18ರಂದು ಸರ್ಕಾರ ವಜಾಗೊಳಿಸಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿದ್ದ ಅರ್ಜಿಯನ್ನು ಕೆಎಟಿ ವಜಾಗೊಳಿಸಿತ್ತು.

ಇದರಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ನಂಜೇಗೌಡ, ಕರ್ನಾಟಕ ನಾಗರಿಕ ಸೇವೆಗಳ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ಅಧಿನಿಯಮಗಳ ಅನ್ವಯ ಕ್ರಿಮಿನಲ್‌ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಸರ್ಕಾರಿ ನೌಕರರನ್ನು ಸೇವೆಯಿಂದ ಸ್ವಯಂಚಾಲಿತವಾಗಿ ವಜಾಗೊಳಿಸಲು ಅವಕಾಶವಿಲ್ಲ ಎಂದು ವಾದಿಸಿದ್ದರು.

ಈ ವಾದ ತಿರಸ್ಕರಿಸಿದ ಹೈಕೋರ್ಟ್‌, ಗಂಭೀರ ಅಪರಾಧದ ಆರೋಪ ಹೊತ್ತವರನ್ನು ಸರ್ಕಾರಿ ನೌಕರರನ್ನಾಗಿ ಸೇವೆಯಲ್ಲಿ ಮುಂದುವರೆಸಬೇಕು ಹಾಗೂ ಶಿಕ್ಷೆಯ ಹೊರತಾಗಿಯೂ ಅರ್ಜಿದಾರರಿಗೆ ಸೇವೆಯಿಂದ ವಜಾಗೊಳಿಸಲು ಕಾರಣ ನೀಡಬೇಕಿತ್ತು ಎಂಬ ಅರ್ಜಿದಾರರ ವಾದ ಒಪ್ಪುವಂತದ್ದಲ್ಲ. ಕ್ರಿಮಿನಲ್‌ ಪ್ರಕರಣಗಳಲ್ಲಿ ಸರ್ಕಾರಿ ನೌಕರರನ್ನು ಖುಲಾಸೆಗೊಳಿಸಿದ್ದರೆ ಅವರ ವಿರುದ್ಧ ಶಿಸ್ತು ಕ್ರಮಕ್ಕಾಗಿ ವಿಚಾರಣೆಗೆ ಒಳಪಡಿಸಬಹುದಾಗಿದೆ. ಆದರೆ, ಅಪರಾಧ ಕೃತ್ಯದಲ್ಲಿ ವಿಚಾರಣೆ ನಡೆದು ಶಿಕ್ಷೆಯನ್ನು ವಿಧಿಸಿರುವ ಸಂದರ್ಭದಲ್ಲಿ ನೈತಿಕತೆ ಅಸ್ಥಿತರತೆ ಉಂಟಾದ ಸಂದರ್ಭದಲ್ಲಿ ಶಿಸ್ತು ಕ್ರಮಕ್ಕಾಗಿ ವಿಚಾರಣೆ ನಡೆಸುವ ಅಗತ್ಯತೆ ಉದ್ಭವಾಗುವುದಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದೆ.