ಸಾರಾಂಶ
‘ನಾನು ದೇಶಕ್ಕೋಸ್ಕರ ಸೂಸೈಡ್ ಬಾಂಬರ್ ಆಗಿ ಪಾಕಿಸ್ತಾನದ ಮೇಲೆ ಯುದ್ಧ ಮಾಡಲು ಹೋಗುತ್ತೇನೆ -ಜಮೀರ್
ಹೊಸಪೇಟೆ: ‘ನಾನು ದೇಶಕ್ಕೋಸ್ಕರ ಸೂಸೈಡ್ ಬಾಂಬರ್ ಆಗಿ ಪಾಕಿಸ್ತಾನದ ಮೇಲೆ ಯುದ್ಧ ಮಾಡಲು ಹೋಗುತ್ತೇನೆ. ಪ್ರತಾಪ್ ಸಿಂಹ ಬರ್ತಾರಾ ಕೇಳಿ’ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಸವಾಲು ಹಾಕಿದ್ದಾರೆ. ಶುಕ್ರವಾರ ಜಮೀರ್ ಹೇಳಿಕೆ ಬಗ್ಗೆ ಪ್ರತಾಪ್ ಸಿಂಹ, ಸಾಮಾಜಿಕ ತಾಣಗಳಲ್ಲಿ ವ್ಯಂಗ್ಯವಾಡಿದ್ದರು. ಅದಕ್ಕೆ ಜಮೀರ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಶನಿವಾರ ಕೆಡಿಪಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ನಾನೋರ್ವ ಮಂತ್ರಿಯಾಗಿ ದೇಶದ ಬಗ್ಗೆ ಅಭಿಮಾನದಿಂದ ಹೇಳುತ್ತಿದ್ದೇನೆ. ದೇಶಕ್ಕಾಗಿ ತ್ಯಾಗ ಮಾಡುತ್ತೇನೆ ಅಂತ ಹೇಳಿದ್ದೇನೆ. ಪಾಕಿಸ್ತಾನ ಸತ್ತೋಗಿದೆ ಬಿಡಿ, ಅಲ್ಲಿ ಏನೂ ಇಲ್ಲ. ಯುದ್ಧಕ್ಕೆ ಹೋಗಲು ನಾನು ಸಿದ್ಧನಿದ್ದೇನೆ’ ಎಂದು ಪುನರುಚ್ಚರಿಸಿದರು. ‘ನಾನು ನಿಜವಾಗಲು ಹೇಳುತ್ತಿದ್ದೇನೆ. ತಮಾಷೆಗೆ ಹೇಳಿದ್ದಲ್ಲ. ದೇಶಕ್ಕೋಸ್ಕರ ಅಷ್ಟು ತ್ಯಾಗ ಮಾಡದಿದ್ದರೆ ಮತ್ತೇನು?’ ಎಂದು ಪ್ರಶ್ನಿಸಿದರು.
ಈ ಹಿಂದೆ, ಬಿಜೆಪಿಗೆ ಬಹುಮತ ಬಂದು ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಅವರ ಮನೆ ವಾಚ್ಮನ್ ಆಗುತ್ತೇನೆ ಎಂದಿದ್ದೆ. ಆದರೆ, ಅವರಿಗೆ ಸಂಪೂರ್ಣ ಬಹುಮತ ಬಂತಾ?. ಜನ ಅವರಿಗೆ ಆಶೀರ್ವಾದ ಮಾಡಿದರಾ?. ಈವರೆಗೆ ಬಿಜೆಪಿಗೆ ಜನ ಬಹುಮತ ಕೊಟ್ಟಿಲ್ಲ. ‘ಆಪರೇಷನ್ ಕಮಲ’ ಮಾಡಿಯೇ ಸರ್ಕಾರ ರಚಿಸಿದ್ದರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ದೇಶದ ಬಗ್ಗೆ ಅಭಿಮಾನ ಇಟ್ಕೊಂಡು ಹೇಳುತ್ತಿದ್ದೇನೆ. ದೇಶಕ್ಕೋಸ್ಕರ ನಾನು ತ್ಯಾಗ ಮಾಡೋಕೆ ಸಿದ್ಧ. ನನಗೆ ಅವಕಾಶ ಮಾಡಿಕೊಡೋಕೆ ಪ್ರತಾಪ ಸಿಂಹಗೆ, ಪ್ರಧಾನಿ ನರೇಂದ್ರ ಮೋದಿಗೆ ಹೇಳಿ. ಅವರು ಬರೀ ಮಾತಾಡುತ್ತಾರೆ. ಆದರೆ, ನಾನು ಹೋಗೋಕೆ ಸಿದ್ಧನಿದ್ದೇನೆ’ ಎಂದರು.