ಸಾರಾಂಶ
ನನ್ನ ಜೀವಕ್ಕೆ ಏನಾದರೂ ಅಪಾಯವಾದರೆ ಸಚಿವರು ಮತ್ತು ಸರ್ಕಾರವೇ ಹೊಣೆ ಎಂದು ಶ್ರೀ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದ ಪೂರ್ಣಾನಂದಪುರಿ ಸ್ವಾಮೀಜಿ ಸ್ಪಷ್ಟಪಡಿಸಿದರು.
ಬೆಂಗಳೂರು : ಮಠಕ್ಕೆ ಅನುದಾನ ಬಿಡುಗಡೆ ಮಾಡಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ಉದ್ದೇಶಪೂರ್ವಕವಾಗಿ ಅಡ್ಡಿ ಉಂಟು ಮಾಡುತ್ತಿದ್ದು, ನನ್ನ ಜೀವಕ್ಕೆ ಏನಾದರೂ ಅಪಾಯವಾದರೆ ಸಚಿವರು ಮತ್ತು ಸರ್ಕಾರವೇ ಹೊಣೆ ಎಂದು ಶ್ರೀ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದ ಪೂರ್ಣಾನಂದಪುರಿ ಸ್ವಾಮೀಜಿ ಸ್ಪಷ್ಟಪಡಿಸಿದರು.
ಕಣ್ಣೀರು ಹಾಕುತ್ತಲೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠದ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಸರ್ಕಾರದಿಂದ 1.50 ಕೊಟಿ ರು. ಬಾಕಿ ಇದೆ. ಈ ಹಣ ಬಿಡುಗಡೆಗೆ ಶಿವರಾಜ ತಂಗಡಗಿ ಅವರು ಅಡ್ಡಗಾಲು ಹಾಕುತ್ತಿದ್ದಾರೆ. ಗುತ್ತಿಗೆದಾರರು ಹಣಕ್ಕಾಗಿ ಒತ್ತಾಯಿಸುತ್ತಿದ್ದು, ಜೀವನವೇ ಸಾಕಾಗಿ ಹೋಗಿದೆ. ನನ್ನ ಜೀವಕ್ಕೆ ಏನಾದರೂ ಆಪತ್ತು ಉಂಟಾದರೆ ತಂಗಡಗಿ ಮತ್ತು ಸರ್ಕಾರವೇ ನೇರ ಹೊಣೆ ಎಂದು ತಿಳಿಸಿದರು.
ಸಚಿವರು ರಾಜೀನಾಮೆ ನೀಡಲಿ:
ಸುಮಾರು 20 ಬಾರಿ ತಂಗಡಗಿ ಅವರನ್ನು ಭೇಟಿಯಾಗಿ, ‘ನಿನಗೆ ಕೈಮುಗಿಯುತ್ತೇನೆ, ಕಾಲು ಹಿಡಿಯುತ್ತೇನೆ. ಇದು ಸ್ವಂತ ಕೆಲಸವಲ್ಲ. ಸಮುದಾಯದ ಕಾರ್ಯ. ಅನುದಾನ ಬಿಡುಗಡೆ ಮಾಡಿ’ ಎಂದು ಕೇಳಿಕೊಂಡರೂ ಹಣ ಬಿಡುಗಡೆ ಮಾಡಿಲ್ಲ. ‘ಡೀಲ್’ ಮಾಡಲಿಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ಹಿಂದುಳಿದ ವರ್ಗಗಳ ರಕ್ತ ಹೀರುತ್ತಿದ್ದಾರೆ. ಆದ್ದರಿಂದ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಠದ ಟ್ರಸ್ಟಿ ಟಿ.ರಂಗರಾಜು, ಅಖಿಲ ಕರ್ನಾಟಕ ಗಾಣಿಗರ ಸಂಘದ ಸಂಘಟನಾ ಕಾರ್ಯದರ್ಶಿ ಟಿ.ಡಿ.ಪ್ರಕಾಶ್ ಉಪಸ್ಥಿತರಿದ್ದರು.