ಸಾರಾಂಶ
ಖಾಸಗಿ ಲೇಔಟ್ಗೆ ರಸ್ತೆ ನಿರ್ಮಿಸಲು ಮತ್ತು ಅಕ್ರಮ ಕಲ್ಲು ಗಣಿಗಾರಿಕೆ ನಡೆಸಲು ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಗೋಮಾಳ ಜಮೀನು ಸೇರಿದಂತೆ ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ 74.98 ಕೋಟಿ ರು. ಮೌಲ್ಯದ 19.3 ಎಕರೆ ಜಮೀನನನ್ನು ನಗರ ಜಿಲ್ಲಾಡಳಿತ ವಶಕ್ಕೆ ಪಡೆದಿದೆ.
ಬೆಂಗಳೂರು : ಖಾಸಗಿ ಲೇಔಟ್ಗೆ ರಸ್ತೆ ನಿರ್ಮಿಸಲು ಮತ್ತು ಅಕ್ರಮ ಕಲ್ಲು ಗಣಿಗಾರಿಕೆ ನಡೆಸಲು ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಗೋಮಾಳ ಜಮೀನು ಸೇರಿದಂತೆ ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ 74.98 ಕೋಟಿ ರು. ಮೌಲ್ಯದ 19.3 ಎಕರೆ ಜಮೀನನನ್ನು ನಗರ ಜಿಲ್ಲಾಡಳಿತ ವಶಕ್ಕೆ ಪಡೆದಿದೆ.
ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಕೆಂಗನಹಳ್ಳಿ ಗ್ರಾಮದಲ್ಲಿ ಖಾಸಗಿ ಲೇಔಟ್ ನಿರ್ಮಿಸಿದ್ದ ಬಿಲ್ಡರ್, 7.50 ಕೋಟಿ ರು. ಮೌಲ್ಯದ ನಾಲ್ಕು ಎಕರೆ ಗೋಮಾಳ ಒತ್ತುವರಿ ಮಾಡಿಕೊಂಡು ರಸ್ತೆಯನ್ನು ನಿರ್ಮಿಸಿದ್ದರು. ಕಾರ್ಯಾಚರಣೆ ನಡೆಸಿ ಒತ್ತುವರಿ ಜಾಗದಲ್ಲಿ ನಿರ್ಮಿಸಿದ್ದ ರಸ್ತೆಗಳನ್ನು ಬಂದ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಕಡಬಗೆರೆ ಗ್ರಾಮದಲ್ಲಿ 30 ಕೋಟಿ ರು. ಮೌಲ್ಯದ 6.10 ಎಕರೆ ಜಮೀನು ಒತ್ತುವರಿ ಮಾಡಿಕೊಂಡು ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿತ್ತು. ಸ್ಥಳಕ್ಕೆ ಭೇಟಿ ನೀಡಿ ಗಣಿಗಾರಿಕೆ ನಡೆಸುತ್ತಿದ್ದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ಗಣಿಗಾರಿಕೆ ಬಂದ್ ಮಾಡಿಸಲಾಗಿದೆ. ಒತ್ತುವರಿಯಾಗಿದ್ದ ಜಮೀನನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು ಪೂರ್ವ ತಾಲೂಕಿನ ಪಣತ್ತೂರು ಗ್ರಾಮದಲ್ಲಿ 4.20 ಕೋಟಿ ರು. ಮೌಲ್ಯದ 21 ಗುಂಟೆ ಸರ್ಕಾರಿ ಹಳ್ಳ, ದೊಡ್ಡಕನ್ನಲ್ಲಿ ಗ್ರಾಮದಲ್ಲಿ 6 ಕೋಟಿ ರು. ಮೌಲ್ಯದ 30 ಗುಂಟೆ ಖರಾಬು ಜಮೀನು ಹಾಗೂ 1.20 ಕೋಟಿ ರು. ಮೌಲ್ಯದ 6 ಗುಂಟೆ ಸರ್ಕಾರಿ ತೋಪು, ಯರಪ್ಪನಹಳ್ಳಿ ಗ್ರಾಮದಲ್ಲಿ 3 ಕೋಟಿ ರು. ಮೌಲ್ಯದ 1.20 ಗುಂಟೆ ಗೋಮಾಳ ವಶಕ್ಕೆ ಪಡೆಯಲಾಗಿದೆ.
ಆನೇಕಲ್ ತಾಲೂಕಿನ ಬನ್ನೇರುಘಟ್ಟ ಗ್ರಾಮದಲ್ಲಿ 1.20 ಕೋಟಿ ರು. ಮೌಲ್ಯದ 15 ಗುಂಟೆ ಗುಂಡುತೋಪು, ಬೆಂಗಳೂರು ಉತ್ತರ ತಾಲೂಕಿನ ವಡ್ಡೇರಹಳ್ಳಿಯಲ್ಲಿ 2 ಕೋಟಿ ರು. ಮೌಲ್ಯದ 20 ಗುಂಟೆ ಗೋಮಾಳ, ತೋಟದಗುಟ್ಟದಹಳ್ಳಿಯಲ್ಲಿ 13.50 ಕೋಟಿ ರು. ಮೌಲ್ಯದ 1.44 ಎಕರೆ ಖರಾಬು ಜಮೀನು, ಯಲಹಂಕ ತಾಲೂಕಿನ ಶ್ಯಾನುಭೋಗನಹಳ್ಳಿಯಲ್ಲಿ 1.36 ಕೋಟಿ ರು. ಮೌಲ್ಯದ ಗುಂಡುತೋಪು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.