ಸಾರಾಂಶ
ಕನ್ನಡಿಗರ ಸ್ವಾಭಿಮಾನದ ಪ್ರತೀಕವಾದ ಕನ್ನಡದ ಧ್ವಜವನ್ನು ರಾಜ್ಯೋತ್ಸವದ ದಿನದಂದು ಎಲ್ಲ ಕನ್ನಡಿಗರು ಮನೆ ಮನೆಯಲ್ಲೂ ಹಾರಿಸಿ ಸಂಭ್ರಮಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಕರೆ ನೀಡಿದ್ದಾರೆ.
ಬೆಂಗಳೂರು : ಕನ್ನಡಿಗರ ಸ್ವಾಭಿಮಾನದ ಪ್ರತೀಕವಾದ ಕನ್ನಡದ ಧ್ವಜವನ್ನು ರಾಜ್ಯೋತ್ಸವದ ದಿನದಂದು ಎಲ್ಲ ಕನ್ನಡಿಗರು ಮನೆ ಮನೆಯಲ್ಲೂ ಹಾರಿಸಿ ಸಂಭ್ರಮಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಕರೆ ನೀಡಿದ್ದಾರೆ.
69ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಮೈಸೂರು ರಾಜ್ಯವು ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ನ.1ರ ಶುಕ್ರವಾರ ಕರ್ನಾಟಕ ಸುವರ್ಣ ಸಂಭ್ರಮದ ಸಮಾರೋಪ ನಡೆಯಲಿದೆ. ಅಂದು ನಾಡಿನೆಲ್ಲೆಡೆ ಹಳದಿ ಮತ್ತು ಕೆಂಪು ಬಣ್ಣದ ಕನ್ನಡ ಬಾವುಟ ಹಾರಿಸುವ ಮೂಲಕ ಅರ್ಥಪೂರ್ಣವಾಗಿ ಕನ್ನಡಪ್ರೇಮ ಮೆರೆಯುವಂತೆ ಕೋರಿದ್ದಾರೆ.
ಕನ್ನಡ ಸಂವೇದನೆಯ ಭಾಗವಾಗಿರುವ ಕನ್ನಡ ಬಾವುಟ ಕನ್ನಡಿಗರೆಲ್ಲರ ಮನಸ್ಸುಗಳಲ್ಲಿ ಶಾಶ್ವತ ಸ್ಥಾನವನ್ನು ಗಳಿಸಿಕೊಂಡಿದೆ. ಕನ್ನಡ ಧ್ವಜಕ್ಕೆ ಕಾನೂನಿನ ಪರವಾನಗಿ ದೊರೆತಿಲ್ಲ. ಆದರೂ ಕನ್ನಡಿಗರ ಮನೆ, ಮನದಲ್ಲೂ ಹಳದಿ, ಕೆಂಪು ಬಾವುಟ ಗೌರವಕ್ಕೆ ಪಾತ್ರವಾಗಿದೆ. ರಾಜ್ಯೋತ್ಸವದ ದಿನದಂದು ನಾವು ಗಲ್ಲಿಗಲ್ಲಿಗಳಲ್ಲಿ, ಮನೆ ಮನೆಗಳಲ್ಲಿ ಕನ್ನಡ ಧ್ವಜ ಹಾರಿಸುವ ಮೂಲಕ ಗೌರವ ಸಲ್ಲಿಸೋಣ ಎಂದಿದ್ದಾರೆ.
ಗಮನಿಸಬೇಕಾದ ಅಂಶಗಳು:
ಕನ್ನಡ ಬಾವುಟ ಹಳದಿ ಮತ್ತು ಕೆಂಪು ಬಣ್ಣದ್ದಾಗಿರಬೇಕು. ಹಳದಿ ಬಣ್ಣ ಮೇಲೆ ಹಾಗೂ ಕೆಂಪು ಬಣ್ಣ ಕೆಳಗೆ ಬರುವಂತೆ ಬಾವುಟವು ಹಾರಬೇಕು. ಧ್ವಜವು ಕೈಮಗ್ಗ ಅಥವಾ ಖಾದಿ ಉತ್ಪನ್ನದ್ದಾಗಿದ್ದರೆ ಉತ್ತಮ. ರಾಷ್ಟ್ರಧ್ವಜದ ಅಳತೆಗಳ ಆಧಾರದಲ್ಲಿ ಕನ್ನಡ ಧ್ವಜವು ಇರಬೇಕು. ವಿವಿಧ ಅಳತೆಯ ರಾಷ್ಟ್ರಧ್ವಜಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಈ ಪೈಕಿ ಅವಶ್ಯಕತೆಗೆ ಅನುಗುಣವಾದ ಅಳತೆಯ ಧ್ವಜವನ್ನು ಹಾರಿಸಬೇಕು. ನಾಡಧ್ವಜವನ್ನು ರಾಜ್ಯೋತ್ಸವದ ದಿನ ಬೆಳಗ್ಗೆ ಹಾರಿಸಬೇಕು.
ಹಾರಿಸಿದ ನಂತರ ಕಾರ್ಯಕ್ರಮ ಅಂದೇ ಮುಗಿದಲ್ಲಿ ಸೂರ್ಯ ಮುಳುಗುವ ಮುನ್ನ ಎಲ್ಲ ಗೌರವಗಳೊಂದಿಗೆ ಧ್ವಜವನ್ನು ಕೆಳಗಿಳಿಸಿ ಸಂರಕ್ಷಿಸುವ ಕೆಲಸವಾಗಬೇಕು. ಯಾವುದೇ ಕಾರಣಕ್ಕೂ ನಾಡಧ್ವಜವನ್ನು ಅನಿರ್ದಿಷ್ಟ ಅವಧಿಗೆ ಕಂಬಗಳ ಮೇಲೆ ಹಾಗೆಯೇ ಬಿಡಬಾರದು.
ಧ್ವಜದ ಮೇಲೆ ಯಾವುದೇ ಚಿತ್ರಗಳು ಇರಬಾರದು. ಧ್ವಜಸ್ತಂಭವನ್ನು ವರ್ಷಪೂರ್ತಿ ಶುಚಿಯಾಗಿ ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಸ್ಥಳೀಯ ಸಂಘ ಸಂಸ್ಥೆಗಳು, ವ್ಯಕ್ತಿಗಳು ಕಾಳಜಿಯಿಂದ ನಿರ್ವಹಿಸಬೇಕು. ಧ್ವಜವನ್ನು ಯಾವುದೇ ಪ್ರತಿಮೆಗಳನ್ನು ಮುಚ್ಚಲು ಬಳಸಬಾರದು. ಧ್ವಜವನ್ನು ನೆಲದ ಮೇಲೆ ಇಡಬಾರದು. ಯಾವುದೇ ಕಟ್ಟಡವನ್ನು ಮುಚ್ಚಲು ಬಳಸಬಾರದು. ಹರಿದ ಧ್ವಜವನ್ನು ಯಾವುದೇ ಸಂದರ್ಭದಲ್ಲಿಯೂ ಬಳಕೆ ಮಾಡಬಾರದು. ರಾಷ್ಟ್ರಧ್ವಜದೊಂದಿಗೆ ನಾಡಧ್ವಜವನ್ನು ಹಾರಿಸಬಹುದು. ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಕನ್ನಡ ಧ್ವಜವನ್ನು ಹಾರಿಸುವುದು ಸರಿಯಲ್ಲ ಎಂದು ಸಲಹೆ ನೀಡಿದ್ದಾರೆ.
ಯಾವುದೇ ಮೆರವಣಿಗೆಗಳಲ್ಲಿ ಬಾವುಟವನ್ನು ಕೊಂಡೊಯ್ಯುವ ಸಂದರ್ಭದಲ್ಲಿ ಅದನ್ನು ಕೊಂಡೊಯ್ಯುವ ವ್ಯಕ್ತಿಯು ತಂಡದ ಮುಂದೆ ಅಥವಾ ಬಲಗಡೆ ಇರಬೇಕು. ಬಾವುಟವನ್ನು ಕೊಂಡೊಯ್ಯುವ ವ್ಯಕ್ತಿಯು ಬಾವುಟವನ್ನು ಬಗ್ಗಿಸಿ ಬೇರಾವುದೇ ಗಣ್ಯರಿಗೆ ನಮಸ್ಕರಿಸಬಾರದು. ಇವು ನಾಡಧ್ವಜಕ್ಕೆ ನೀಡಬೇಕಾದ ಗೌರವಗಳಾಗಿವೆ. ವಸ್ತುಸ್ಥಿತಿಯ ಆಧಾರದಲ್ಲಿ ಆಯೋಜಕರು ಧ್ವಜಕ್ಕೆ ದೊರಕಬೇಕಾದ ಎಲ್ಲಾ ಗೌರವವಗಳನ್ನು ಸಮರ್ಪಕವಾಗಿ ನೀಡುವ ಮೂಲಕ ಕನ್ನಡದ ಪ್ರಜ್ಞೆಯನ್ನು ಮೆರೆಯಬೇಕು. ಇದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ ಎಂದು ತಿಳಿಸಿದ್ದಾರೆ.