ಕೆಂಪೇಗೌಡ ಏರ್‌ಫೋರ್ಟ್‌ನಿಂದ ಕೆಲ ವಿಮಾನ ಹಾರಾಟ ವ್ಯತ್ಯಯ

| N/A | Published : May 08 2025, 05:38 AM IST

 flights to jodhpur bikaner

ಸಾರಾಂಶ

‘ಆಪರೇಷನ್‌ ಸಿಂದೂರ’ ಹಿನ್ನೆಲೆಯಲ್ಲಿ ದೇಶದ ವಿವಿಧ ನಗರಗಳಲ್ಲಿ ವಾಯುಯಾನ ನಿಷೇಧಿಸಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಲವು ವಿಮಾನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ

  ಬೆಂಗಳೂರು: ಪಹಲ್ಗಾಂನಲ್ಲಿ ನಡೆದ ಉಗ್ರ ದಾಳಿಗೆ ಪ್ರತೀಕಾರವಾಗಿ ಪಾಕ್‌ ಉಗ್ರರ ವಿರುದ್ಧ ನಡೆಸಲಾದ ‘ಆಪರೇಷನ್‌ ಸಿಂದೂರ’ ಹಿನ್ನೆಲೆಯಲ್ಲಿ ದೇಶದ ವಿವಿಧ ನಗರಗಳಲ್ಲಿ ವಾಯುಯಾನ ನಿಷೇಧಿಸಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಲವು ವಿಮಾನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಿದೆ.

‘ಆಪರೇಷನ್‌ ಸಿಂದೂರ’ ಹಿನ್ನೆಲೆಯಲ್ಲಿ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರವಹಿಸಲಾಗಿದ್ದು, ಕೆಲ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ. ಕೆಲ ವಿಮಾನ ನಿಲ್ದಾಣಗಳ ಬಳಿ ವಾಯುಯಾನಕ್ಕೆ ನಿಷೇಧ ಹೇರಲಾಗಿದೆ. ಪ್ರಮುಖವಾಗಿ ಜಮ್ಮು, ಶ್ರೀನಗರ, ಪಂಜಾಬ್‌ನ ಅಮೃತಸರ, ಮಧ್ಯಪ್ರದೇಶದ ಗ್ವಾಲಿಯರ್‌, ಉತ್ತರಪ್ರದೇಶದ ಗಾಜಿಯಾಬಾದ್‌ನ ಹಿಂಡನ್‌ ವಿಮಾನ ನಿಲ್ದಾಣಕ್ಕೆ ಸೇವೆ ನಿಷೇಧಿಸಲಾಗಿದೆ.

ಈ ಬಗ್ಗೆ ವಿಮಾನಯಾನ ಸಂಸ್ಥೆಗಳು ತಮ್ಮ ಪ್ರಯಾಣಿಕರಿಗೆ ಸೂಚನೆ ನೀಡಿದ್ದು, ನಿಗದಿತ ವಿಮಾನ ನಿಲ್ದಾಣಗಳಿಗೆ ಮೇ 10ರ ಬೆಳಗ್ಗೆ 5.30ರವರೆಗೆ ಸೇವೆ ಇರುವುದಿಲ್ಲ ಎಂದು ಪ್ರಕಟಿಸಿವೆ. ಹಾಗೆಯೇ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಸಂಸ್ಥೆಯು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೇ 7ರಂದು ಅನೇಕ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಲಿದ್ದು, ಪ್ರಯಾಣಿಕರು ಈ ಬಗ್ಗೆ ಗಮನಿಸುವಂತೆ ಸೂಚನೆ ನೀಡಿದೆ. ಇದರಿಂದ 20ಕ್ಕೂ ಹೆಚ್ಚಿನ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ.