ಗಣತಿಗೆ ಸಚಿವರ ವಿರೋಧ, ಚಕಮಕಿ ಸುಳ್ಳು - ಏರುಧ್ವನಿಯ ಚರ್ಚೆ ಆಗಿಲ್ಲ: ಸಿಎಂ, ಡಿಕೆಶಿ

| N/A | Published : Apr 19 2025, 07:29 AM IST

DKS Siddu

ಸಾರಾಂಶ

‘ಜಾತಿಗಣತಿ ವರದಿ ಬಗ್ಗೆ ಯಾವುದೇ ಸಚಿವರಿಂದ ವಿರೋಧ ವ್ಯಕ್ತವಾಗಿಲ್ಲ, ಯಾರ ನಡುವೆಯೂ ಮಾತಿನ ಚಕಮಕಿಯೂ ನಡೆದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು

ಬೆಂಗಳೂರು : ‘ಜಾತಿಗಣತಿ ವರದಿ ಬಗ್ಗೆ ಯಾವುದೇ ಸಚಿವರಿಂದ ವಿರೋಧ ವ್ಯಕ್ತವಾಗಿಲ್ಲ, ಯಾರ ನಡುವೆಯೂ ಮಾತಿನ ಚಕಮಕಿಯೂ ನಡೆದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು. 

ಜಾತಿಗಣತಿ ವರದಿ ಬಗ್ಗೆ ಪ್ರಬಲ ಸಮುದಾಯದ ಸಚಿವರಿಂದ ವಿರೋಧ ವ್ಯಕ್ತವಾಗಿದೆ, ಕೆಲ ಸಚಿವರ ನಡುವೆ ಚಕಮಕಿ ನಡೆದಿದೆಯಂತಲ್ವಾ ಎಂಬ ಸುದ್ದಿಗಾರರ ಪ್ರಶ್ನೆಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ಯಾವುದೇ ಸಚಿವರಿಂದ ವಿರೋಧವೂ ವ್ಯಕ್ತವಾಗಿಲ್ಲ, ಯಾವ ಸಚಿವರ ನಡುವೆ ಏರುಧ್ವನಿಯ ಮಾತುಗಳೂ ನಡೆದಿಲ್ಲ. ಅದೆಲ್ಲವೂ ಸುಳ್ಳು ಎಂದರು.

ಗುರುವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಬಗ್ಗೆ ವಿಚಾರ ವಿನಿಮಯವಷ್ಟೇ ಮಾಡಿದ್ದೇವೆ. ಸಭೆ ಅಪೂರ್ಣ ಆಗಿದೆ. ಯಾವುದೇ ತೀರ್ಮಾನ ಆಗಿಲ್ಲ. ಮೇ 2ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮತ್ತೆ ಈ ವಿಚಾರ ಚರ್ಚಿಸಿ, ಎಲ್ಲರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಉಭಯ ನಾಯಕರು ಮಾಹಿತಿ ನೀಡಿದರು.