ಎಡ-ಬಲ ನಾಲೆಗಳಲ್ಲಿ ವೇಗವಿಲ್ಲದ ಭದ್ರಾ ಡ್ಯಾಂ ನೀರು : ಬಿಜೆಪಿ ರೈತ ಮೋರ್ಚಾದಿಂದ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ

| Published : Aug 10 2024, 01:44 AM IST / Updated: Aug 10 2024, 11:20 AM IST

ಎಡ-ಬಲ ನಾಲೆಗಳಲ್ಲಿ ವೇಗವಿಲ್ಲದ ಭದ್ರಾ ಡ್ಯಾಂ ನೀರು : ಬಿಜೆಪಿ ರೈತ ಮೋರ್ಚಾದಿಂದ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾ ಅಣೆಕಟ್ಟೆಯಿಂದ ನಾಲೆಗಳಿಗೆ ನೀರುಹರಿಸಿ 11 ದಿನಗಳಾಗಿವೆ. ಆದರೂ, ನಾಲೆಗಳಲ್ಲಿ ನೀರು ನಿಗದಿತ ಪ್ರಮಾಣ ಹಾಗೂ ಹೆಚ್ಚು ರಭಸದಲ್ಲಿ ಹರಿಯುತ್ತಿಲ್ಲ. ಈ ಹಿನ್ನೆಲೆ  ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರೈತ ಮೋರ್ಚಾದಿಂದ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.

 ದಾವಣಗೆರೆ :   ಭದ್ರಾ ಅಣೆಕಟ್ಟೆಯಿಂದ ನಾಲೆಗಳಿಗೆ ನೀರುಹರಿಸಿ 11 ದಿನಗಳಾಗಿವೆ. ಆದರೂ, ನಾಲೆಗಳಲ್ಲಿ ನೀರು ನಿಗದಿತ ಪ್ರಮಾಣ ಹಾಗೂ ಹೆಚ್ಚು ರಭಸದಲ್ಲಿ ಹರಿಯುತ್ತಿಲ್ಲ. ಈ ಹಿನ್ನೆಲೆ ಸಮರ್ಪಕ ನೀರು ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರೈತ ಮೋರ್ಚಾದಿಂದ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.

ನಗರದ ಜಿಲ್ಲಾಡಳಿತ ಭವನದಲ್ಲಿ ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಮುಖಂಡರ ನೇತೃತ್ವದ ನಿಯೋಗವು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರನ್ನು ಭೇಟಿಯಾಗಿ, ಭದ್ರಾ ನಾಲೆಯಿಂದ ಸಮರ್ಪಕ ನೀರು ನಿರ್ವಹಣೆಗೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಹಾಗೂ ನೀರಾವರಿ ಇಲಾಖೆಗೆ ಮನವಿ ಅರ್ಪಿಸಿ, ಒತ್ತಾಯಿಸಲಾಯಿತು.

ರೈತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ.ಎಂ.ಸತೀಶ ಕೊಳೇನಹಳ್ಳಿ ಈ ಸಂದರ್ಭ ಮಾತನಾಡಿ, ಭದ್ರಾ ಅಣೆಕಟ್ಟೆಯಿಂದ ನೀರು ಹರಿಸಲಾಗುತ್ತಿದೆ. 11 ದಿನದಿಂದ ಎಡ ಮತ್ತು ಬಲ ನಾಲೆಗಳಿಗೆ ಒಟ್ಟು 26,308 ಕ್ಯುಸೆಕ್ ನೀರು ಬಿಡಲಾಗಿದೆ. ಆದರೆ, ನದಿಗೆ ಒಟ್ಟು 2,70,777 ಕ್ಯುಸೆಕ್ ನೀರು ಬಿಡಲಾಗಿದೆ. ಇಷ್ಟೊಂದು ಪ್ರಮಾಣದ ನೀರು ಬಲದಂತೆ ನಾಲೆಯ ಅಚ್ಚುಕಟ್ಟು ಪ್ರದೇಶಕ್ಕೆ 102 ದಿನದವರೆಗೂ ಹರಿಸಬಹುದಾದ ಪ್ರಮಾಣವಾಗಿದೆ ಎಂದು ದೂರಿದರು.

ದಾವಣಗೆರೆ ಜಿಲ್ಲೆಯ ಯಾವುದೇ ಕೆರೆಗಳಿಗೂ ಒಂದು ಹನಿ ನೀರು ಸಹ ಬಂದಿಲ್ಲ. ನೀರು ನಿರ್ವಹಣೆಯು ಸಮರ್ಪಕವಾಗಿ ಆಗುತ್ತಿಲ್ಲ. ಮಳೆ ಬಂದು, ಡ್ಯಾಂ ತುಂಬಿತ್ತು, ನೀರು ಬಿಟ್ಟೆವು ಎಂಬಂತೆ ಸಂಬಂಧಿಸಿದ ಅಧಿಕಾರಿಗಳು ಹುಚ್ಚಾಟ ಮಾಡಿದಂತಾಗಿದೆ. ಜು.15ರಿಂದಲೇ ನೀರು ಹರಿಸುವಂತೆ ಜಿಲ್ಲಾಧಿಕಾರಿ ಭೇಟಿ ಮಾಡಿ, ಮನವಿ ಮಾಡಲಾಗಿತ್ತು. ಇದ್ಯಾವುದರ ಪರಿವೆಯೇ ಇಲ್ಲದೇ ಡ್ಯಾಂ ತುಂಬಿಸಿ, ಒಮ್ಮೆಲೇ ನದಿಗೆ ಹರಿಸುವ ಮೂಲಕ ಮಳೆನೀರು ವ್ಯರ್ಥವಾಗಿ ಹರಿಸಲಾಗುತ್ತಿದೆ. ಇದರಿಂದ ನದಿಪಾತ್ರದ ನಗರ, ಪಟ್ಟಣ ಪ್ರದೇಶಗಳ ಜನರಿಗೂ ತೊಂದರೆ ಆಗುತ್ತದೆಂಬ ಕನಿಷ್ಠ ಪರಿಜ್ಞಾನವೂ ಇಲ್ಲದವರು ನೀರು ನಿರ್ವಹಣೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ನೀರು ಇದ್ದಾಗಲೇ ಕೆರೆ-ಕಟ್ಟೆಗಳನ್ನು ತುಂಬಿಸಿಕೊಂಡರೆ ಒಂದು ಸಣ್ಣ ಕೆರೆ ಸಹ ಕನಿಷ್ಠ 300 ಎಕರೆ ಜಮೀನಿಗೆ ನೀರುಣಿಸುತ್ತದೆ. ಕೆರೆ ಸುತ್ತಲಿನ ಏಳೆಂಟು ಕಿಮೀ ವ್ಯಾಪ್ತಿಯಲ್ಲಿ ಅಂತರ್ಜಲಮಟ್ಟ ಕುಸಿಯುವುದಿಲ್ಲ. ಇಂತಹ ಪರೋಕ್ಷ ನೀರಾವರಿ ಬಗ್ಗೆಯೂ ಸಚಿವರು, ಜಿಲ್ಲಾಡಳಿತ ಚಿಂತನೆ ನಡೆಸಲಿ. ಈ ಸರ್ಕಾರಕ್ಕೆ ರೈತರ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲದಂತಿದೆ. ಭದ್ರಾ ಡ್ಯಾಂ ತುಂಬಿದೆಯೆಂಬ ಸಂತಸವಿದ್ದರೂ ನಾಲೆಯಲ್ಲಿ ನೀರಿನ ಕೊರತೆ ಕಾಡುತ್ತಿದೆ. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಅವರು ತಕ್ಷಣ ರೈತರ ನೆರವಿಗೆ ಧಾವಿಸಬೇಕು. ಕಳೆದ ಬೇಸಿಗೆ ಹಂಗಾಮಿನಲ್ಲಿ ತೀವ್ರ ಬರದಿಂದ ರೈತರು ರೋಸಿದ್ದಾರೆ. ರೈತರ ಸಹನೆ ಕಟ್ಟೆ ಒಡೆಯುವ ಮುನ್ನ ಸರ್ಕಾರ ಸಮರ್ಪಕ ನೀರು ನಿರ್ವಹಣೆ ಮಾಡಲಿ ಎಂದು ಬಿ.ಎಂ. ಸತೀಶ್‌ ಒತ್ತಾಯಿಸಿದರು.

ಬಿಜೆಪಿ ಮುಖಂಡರಾದ ದೂಡಾ ಮಾಜಿ ಅಧ್ಯಕ್ಷ, ಹಿರಿಯ ವಕೀಲ ಎ.ವೈ.ಪ್ರಕಾಶ, ಉತ್ತರ ಅಧ್ಯಕ್ಷ ಬೇತೂರು ಸಂಗನಗೌಡ, ಮಾಜಿ ಮೇಯರ್‌ಗಳಾದ ಎಚ್.ಎನ್. ಗುರುನಾಥ, ಕೆ.ಆರ್. ವಸಂತಕುಮಾರ, ಎಪಿಎಂಸಿ ಮಾಜಿ ಅಧ್ಯಕ್ಷ ಕುಂದುವಾಡ ಎಚ್.ಜಿ.ಗಣೇಶಪ್ಪ, ರೈತ ಮುಖಂಡರಾದ ಎಚ್.ಎನ್. ಶಿವಕುಮಾರ, ಕಲ್ಪನಹಳ್ಳಿ ಕೆ.ಜಿ.ಉಜ್ಜಪ್ಪ, ಆನೆಕೊಂಡ ರೇವಣಸಿದ್ದಪ್ಪ, ರಮೇಶ ನಾಯ್ಕ, ಶಿರಮಗೊಂಡನಹಳ್ಳಿ ಮಂಜುನಾಥ, ಈಶ್ವರಪ್ಪ ಇತರರು ಇದ್ದರು.

ಬಿಜೆಪಿ ರೈತ ಮೋರ್ಚಾ ಬೇಡಿಕೆಗಳು 

1. ತಕ್ಷಣ ನೀರು ನಿರ್ವಹಣೆ ಸಮರ್ಪಕವಾಗಿ ಮಾಡಿ, ಅಚ್ಚುಕಟ್ಟು ಕೊನೆ ಭಾಗಕ್ಕೆ ನೀರು ಹರಿಸಬೇಕು

2. ದಾವಣಗೆರೆ ಜಿಲ್ಲೆಯ ಎಲ್ಲಾ ಕೆರೆ ಕಟ್ಟೆಗಳನ್ನು ನಾಲೆ ನೀರಿನಿಂದ ತುಂಬಿಸಿಕೊಳ್ಳುವ ಕೆಲಸ ಆಗಲಿ

3. ರೈತರು ಹೊಲಗಳಲ್ಲಿ ನಿರ್ಮಿಸಿಕೊಂಡಿರುವ ಕೃಷಿ ಹೊಂಡಗಳನ್ನು ತುಂಬಿಸಲು ಅವಕಾಶ ನೀಡಲಿ

4. ಇರುವ ನೀರನ್ನು ಸಮರ್ಪಕವಾಗಿ ಬಳಕೆ ಮಾಡಬೇಕು, ಅಣೆಕಟ್ಟೆ ತುಂಬಿದ್ದಾಗಿ ನಿರ್ಲಕ್ಷ್ಯವೇ ಬೇಡ

5. ಹನಿ ನೀರು ಅಮೂಲ್ಯ ಎಂಬುದಾಗಿ ಭಾವಿಸಿ, ಎಲ್ಲಿಯೂ ನೀರು ಪೋಲಾಗದಂತೆ ಎಚ್ಚರ ವಹಿಸಬೇಕು