ದೊಡ್ಡಬಳ್ಳಾಪುರ: ಸಮಾಜದ ಏಳಿಗೆ ಹಾಗೂ ಆತ್ಮೋದ್ಧಾರಕ್ಕಾಗಿ ಬಳಕೆಯಾಗಬೇಕಿದ್ದ ಭಕ್ತಿ ಕೋಮುವಾದ, ಶ್ರೇಣಿವಾದಕ್ಕೆ ಬಳಕೆಯಾಗುತ್ತಿದೆ. ಇದು ಅಪ್ರಸ್ತುತ ಮತ್ತು ಅವೈಚಾರಿಕ ಎಂದು ಸಂತಕವಿ ಕನಕದಾಸ ಮತ್ತು ತತ್ವ ಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ಹೇಳಿದರು.

ನಗರದ ಕನ್ನಡ ಜಾಗೃತ ಪರಿಷತ್, ಸಂತಕವಿ ಕನಕದಾಸ ಮತ್ತು ತತ್ವ ಪದಕಾರರ ಅಧ್ಯಯನ ಕೇಂದ್ರದಿಂದ ಕನ್ನಡ ಜಾಗೃತ ಭವನದಲ್ಲಿ ನಡೆದ ''''''''ವಚನ ಮತ್ತು ದಾಸ ಸಾಹಿತ್ಯ ಬಹುಶಿಸ್ತೀಯ ನೋಟ'''''''' ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಭಕ್ತಿಯು ಸಮಾಜದ ಉನ್ನತಿಗೆ ಬಳಕೆಯಾಗಬೇಕು. ಆದರೆ ವ್ಯಕ್ತಿಗತ ಪ್ರತಿಷ್ಠೆಗಳ ಅಭಿವ್ಯಕ್ತಿ ಮತ್ತು ಸಂಪ್ರದಾಯವಾದದ ಮೇಲಾಟಗಳಿಗೆ ಭಕ್ತಿ ಎಂಬುದು ಸಾಧನವಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಕನಕದಾಸರ ನಾಲ್ಕು ಕೃತಿಗಳ ಪೈಕಿ ''''''''ರಾಮಧಾನ ಚರಿತೆ'''''''' ಪ್ರಸ್ತುತವಾಗಿದೆ. ಸಮಾಜದಲ್ಲಿ ಅಸಮಾನತೆ, ಮೇಲು ಕೀಳು, ಜಾತಿ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲಿ ಸಮ ಸಮಾಜ ನಿರ್ಮಾಣದ ಅಗತ್ಯ ಒತ್ತಿ ಹೇಳಿತ್ತದೆ ಎಂದು ತಿಳಿಸಿದರು.

ಸಮಾಜದ ದಳ್ಳುರಿಗಳನ್ನು ಎತ್ತಿ ತೋರಿಸುವ ಮೂಲಕ ಮಾನವೀಯ ಅಂತಃಕರಣದ ಮಹತ್ವ ಪ್ರತಿಪಾದಿಸುವ ಕನಕದಾಸರು ಶ್ರೇಷ್ಠ ಕವಿಯಾಗುತ್ತಾರೆ. ಸಮಾಜದ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಲು ಬುದ್ಧ, ಬಸವ, ಕನಕ ಹಾಗೂ ಅಂಬೇಡ್ಕರ್ ಅವರಂತಹ ಮಹನೀಯರ ಮಾರ್ಗದರ್ಶನ ಬೇಕಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಚನ ಮತ್ತು ದಾಸ ಪರಂಪರೆ ಎರಡು ಪ್ರಮುಖ ಘಟ್ಟ. ಬಹುಶಿಸ್ತೀಯ ಅಧ್ಯಯನಕ್ಕೆ ವಿಫುಲ ಅವಕಾಶಗಳಿವೆ. ಅಧ್ಯಯನ-ದಲ್ಲಿ ಎಲ್ಲಾ ಶಾಸ್ತ್ರಗಳು ನಮ್ಮ ಅರಿವಿನ ವಿಸ್ತಾರಕ್ಕೆ ಬುನಾದಿಯಾಗಲಿದೆ ಎಂದರು.

ಶಾಸ್ತ್ರೀಯ ಭಾಷೆಯ ಅಧ್ಯಯನ ಕೇಂದ್ರದ ನಿವೃತ್ತ ಪ್ರಾಧ್ಯಾಪಕ ಡಾ.ಆರ್.ಚಲಪತಿ ಮಾತನಾಡಿ, ಕನಕದಾಸರು ಸೇರಿದಂತೆ ಹಲವಾರು ದಾಸವೇಣ್ಯರು ತಮ್ಮ ಸಾಹಿತ್ಯದಲ್ಲಿ ದೇಸಿ ಪ್ರಜ್ಞೆಯನ್ನು ಬಿಂಬಿಸಿದ್ದಾರೆ. ಇಲ್ಲಿ ದೇಸಿ ಎನ್ನುವುದು ತಮ್ಮತನ ಎನಿಸಿಕೊಳ್ಳುತ್ತದೆಯಾದರೂ ನಮಗೆ ಅರಿವಿಲ್ಲದಂತೆ ನಮ್ಮದಲ್ಲದ್ದು ನುಸುಳುತ್ತದೆ. ನಮಗೆ ಯಾವ ಅರಿವು ಬೇಕು ಎನ್ನುವ ನಮ್ಮ ಆಯ್ಕೆಯೇ ಕಗ್ಗಂಟಾಗಲಿದೆ. ಕನಕದಾಸರು ಕುಲ ಕುಲವೆಂದು ಹೊಡೆದಾಡದಿರಿ ಎಂದು ಅಸ್ಪೃಶ್ಯತೆ, ಅಸಮಾನತೆ, ಮೇಲು ಕೀಳುಗಳ ಭಾವನೆ ತೊಡೆಯಲು ಯತ್ನಿಸಿದರು. ದೇಸಿ ಪ್ರಜ್ಞೆ ಎನ್ನುವುದು ನಮ್ಮ ಬದುಕಿನ ಕಾಲದ ಪ್ರಜ್ಞೆಯಾಗಿದೆ ಎಂದು ಹೇಳಿದರು.

ಪತ್ರಕರ್ತ ಕೆ.ನರಸಿಂಹಮೂರ್ತಿ, ಕೆಳವರ್ಗದ ವಚನಕಾರರು ಮತ್ತು ಕೀರ್ತನಕಾರರ ಬದುಕಿನ ಕಾಲದ ಪ್ರಜ್ಞೆ ಅರಿವಿನ ಹಾದಿಗಳು'''''''' ಕುರಿತು, ಪ್ರಾಧ್ಯಾಪಕಿ ಎ.ಶ್ರೀಲತಾ ''''''''ವಚನಕಾರ್ತಿಯರ ಜೀವನ ನೋಟ'''''''' ಕುರಿತು ಮಾತನಾಡಿದರು.


ಕನ್ನಡ ಜಾಗೃತ ಪರಿಷತ್ ಅಧ್ಯಕ್ಷ ಕೆ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜನೇಯ, ಕಾರ್ಯಕಾರಿ ಸಮಿತಿಯ ವೆಂಕಟರಾಜು, ಜಿ.ಸಿ. ಶಿವಕುಮಾರ್, ಅಧ್ಯಯನ ಕೇಂದ್ರದ ಸದಸ್ಯ ಕಾರ್ಯದರ್ಶಿ ಕರಿಯಪ್ಪ, ನಗರಸಭೆ ಸದಸ್ಯ ಟಿ.ಎನ್.ಪ್ರಭುದೇವ್ ಮತ್ತಿತರರು ಉಪಸ್ಥಿತರಿದ್ದರು.

23ಕೆಡಿಬಿಪಿ2- ದೊಡ್ಡಬಳ್ಳಾಪುರದ ಕನ್ನಡ ಜಾಗೃತ ಭವನದಲ್ಲಿ ಸಂತಕವಿ ಕನಕದಾಸ ಮತ್ತು ತತ್ವ ಪದಕಾರರ ಅಧ್ಯಯನ ಕೇಂದ್ರದಿಂದ ನಡೆದ ವಿಚಾರಸಂಕಿರಣವನ್ನು ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ಉದ್ಘಾಟಿಸಿದರು.