ಸಾರಾಂಶ
ಶಿರಹಟ್ಟಿ: ಸರ್ವಧರ್ಮ ಸಮನ್ವಯ ಹಿಂದು ಮುಸ್ಲಿಂ ಭಾವೈಕ್ಯತೆಯ ಶಿರಹಟ್ಟಿ ಶ್ರೀಜಗದ್ಗುರು ಫಕೀರೇಶ್ವರ ಜಾತ್ರೆ ಗುರುವಾರ ಮೇ ೨೩ರಂದು ಜರುಗಿತು. ಅಲ್ಲಿ ಸಂಭ್ರಮವಿತ್ತು. ಎಲ್ಲರೂ ಸ್ವಾಮೀಜಿಗಳನ್ನು ನೋಡಲು ಕಾತರರಾಗಿದ್ದರು.
ಎಲ್ಲರ ಬಾಯಲ್ಲೂ ಒಂದೇ ಹರ ಹರ ಮಹಾದೇವ, ಫಕೀರೇಶ್ವರ ಮಹಾರಾಜಕೀ ಜೈ ಎಂಬ ಮಂತ್ರ ಘೋಷ. ಕೋಮು ಸೌಹಾರ್ದತೆಯ ಪ್ರತೀಕವಾಗಿರುವ ಶಿರಹಟ್ಟಿ ಸಂಸ್ಥಾನ ಮಠದ ೧೩ನೇ ಪಟ್ಟಾಧ್ಯಕ್ಷ ಜ.ಗು. ಫಕೀರ ಸಿದ್ದರಾಮ ಶ್ರೀಗಳು ಶ್ರೀಮಠದ ಸಂಪ್ರದಾಯದಂತೆ ಜಾತ್ರಾಮಹೋತ್ಸವದ ಪೂರ್ವದಲ್ಲಿ ಭಿಕ್ಷಾಟನೆಗಾಗಿ ಮಠದಿಂದ ಮೇ ೧೨ರಂದು ಬೆಳಗ್ಗೆ ೧೦-೩೦ಗಂಟೆಗೆ ಉತ್ಸವದೊಂದಿಗೆ ಶ್ರೀಗಳು ತೆರಳಿದ್ದರು.ಗುರುವಾರ ಬೆಳಗ್ಗೆ ೮-೩೦ಕ್ಕೆ ಹರಿಪೂರ ಗ್ರಾಮವನ್ನು ಬಿಟ್ಟು ಶಿರಹಟ್ಟಿ ಪಟ್ಟಣದ ಮೇಗೇರಿ ಓಣಿಯಲ್ಲಿರುವ ಫಕ್ಕೀರೇಶ್ವರ ಗದ್ದುಗೆ (ಪಾದಗಟ್ಟಿ) ತಲುಪಿ ಅಲ್ಲಿ ಪೂಜೆ ಸಲ್ಲಿಸಿದರು. ನಂತರ ಅಲ್ಲಿಂದ ಪಲ್ಲಕ್ಕಿ ಉತ್ಸವ ೯-೩೦ಕ್ಕೆ ಪ್ರಾರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವೈಭವದ ಮೆರವಣಿಗೆಯೊಂದಿಗೆ ಮಠಕ್ಕೆ ಕರೆದುಕೊಂಡು ಹೋಗಲಾಯಿತು.
ಶ್ರೀಗಳು ಹರಿಪುರ ಗ್ರಾಮವನ್ನು ಬಿಡುತ್ತಿದ್ದಂತೆ ಮಠದ ಹಿಂದು ಮುಸ್ಲಿಂ ಭಾವೈಕ್ಯತೆಗಳ ಸಂಕೇತವಾದ ಆನೆ,ಒಂಟೆ ಮತ್ತು ಕುದುರೆ ಹಾಗೂ ಭಜನೆ, ಡೊಳ್ಳು, ಜಾಂಜ್ ಮೇಳ ಸಕಲ ವಾದ್ಯಗಳೊಂದಿಗೆ ಬಹು ವಿಜೃಂಭಣೆಯಿಂದ ಮೆರವಣಿಗೆ ಮೂಲಕ ಶ್ರೀಗಳನ್ನು ಪಟ್ಟಣಕ್ಕೆ ಕರೆತರಲಾಯಿತು. ಆಗ ಶ್ರೀಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಹರ್ಷೋದ್ಗಾರಗಳ ಮಧ್ಯೆ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಭಕ್ತರಿಗೆ ಶ್ರೀಗಳು ದರ್ಶನಾಶಿರ್ವಾದ ಮಾಡಿದರು.ಗುರುವಾರ ನಡೆದ ಶ್ರೀಗಳ ಭವ್ಯ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಶ್ರೀಗಳ ದರ್ಶನ ಪಡೆದು ಪುನೀತರಾದರು. ಈ ಭಾಗದ ದೊಡ್ಡ ಜಾತ್ರೆಯಾಗಿದ್ದರಿಂದ ಸುತ್ತಮುತ್ತಲಿನ ಹಳ್ಳಿಗಳು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಭಕ್ತರು ಸಂಜೆ ವರೆಗೂ ಆಗಮಿಸುತ್ತಿರುವುದು ಕಂಡುಬರುತ್ತಿತ್ತು.ಈ ಮೆರವಣಿಗೆಯಲ್ಲಿ ಹಲವಾರು ಕಲಾ ತಂಡಗಳು ಭಾಗವಹಿಸುವ ಮೂಲಕ ಮೂಲ ಜಾನಪದ ಕಲೆಗಳು ಅನಾವರಣಗೊಂಡವು.
ಇಂದಿನ ಹಾಳು ಜಾತಿ ವ್ಯವಸ್ಥೆಯಲ್ಲಿ ಬಾಯಿಗೆ ಬಂದದ್ದನ್ನು ಕೇಳಿ ಸಮಾಜದ ದಾರಿ ತಪ್ಪಿಸುತ್ತಿರುವ ವಾತಾವರಣದಲ್ಲಿ ಸಮಾಜದ ಸೇವೆಗೈದು ದ್ವೇಷ ಬಿಡು ಪ್ರೀತಿ ಮಾಡು ಎಂಬ ತತ್ವ ಸಂದೇಶ ಹೊತ್ತು ನಾಡಿನ ಹಿಂದೂ ಮುಸ್ಲಿಂರ ಮನಸ್ಸನ್ನು ಕಟ್ಟುವ ಕೆಲಸ ಮಾಡುತ್ತಿರುವ ಶ್ರೀ ಜ.ಫಕೀರ ಸಿದ್ದರಾಮ ಸ್ವಾಮಿಗಳು ಹಸಿದು ಬಂದವರಿಗೆ ದಾಸೋಹ ನೀಡುತ್ತಿರುವ ಈ ಸ್ವಾಮಿಗಳ ಕಾರ್ಯ ಶ್ಲಾಘನೀಯ.