ಸಾರಾಂಶ
ಭೀಮಾನದಿ ತೀರದಿಂದ 15-20 ಟ್ರ್ಯಾಕ್ಟರ್ ಭರ್ತಿ ಸುಮಾರು 30 ಟನ್ಗೂ ಅಧಿಕದಷ್ಟು ತ್ಯಾಜ್ಯವನ್ನು ಜೀವಜಲ ಭೀಮೆಯಿಂದ ಹೊರತೆಗೆಯಲಾಯಿತು.
ಕನ್ನಡಪ್ರಭ ವಾರ್ತೆ ಅಫಜಲ್ಪುರ
ಯುವಾಬ್ರಿಗೇಡ್ ಕಲಬುರಗಿ ವತಿಯಿಂದ ತಾಲೂಕಿನ ಘತ್ತರಗಿ ಭೀಮಾನದಿ ಸ್ವಚ್ಛತಾ ಕಾರ್ಯ ಮಾಡಲಾಯಿತು. ಭೀಮಾನದಿ ತೀರದಿಂದ 15-20 ಟ್ರ್ಯಾಕ್ಟರ್ ಭರ್ತಿ ಸುಮಾರು 30 ಟನ್ಗೂ ಅಧಿಕದಷ್ಟು ತ್ಯಾಜ್ಯವನ್ನು ಜೀವಜಲ ಭೀಮೆಯಿಂದ ಹೊರತೆಗೆಯಲಾಯಿತು. ಸುಮಾರು 50ಕ್ಕೂ ಹೆಚ್ಚು ಯುವಾ ಕಾರ್ಯಕರ್ತರು ಸೇರಿ ಭೀಮಾನದಿ ಸ್ವಚ್ಛತೆಗೆ ಇಳಿದರು. ಕಳೆದ ಬಾರಿ 500ಕ್ಕಿಂತ ಹೆಚ್ಚು ಕಾರ್ಯಕರ್ತರೊಂದಿಗೆ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಸ್ವಚ್ಛತೆ ಮಾಡಲಾಗಿತ್ತು. ಸ್ವಚ್ಛತೆ ಮಾಡಿ ಐದೇ ವರ್ಷದಲ್ಲಿ ಮತ್ತೆ ಅದೇ ಸ್ಥಿತಿಗೆ ತಲುಪಿರುವದು ಶೋಚನೀಯವಾಗಿತ್ತು.ನದಿಯಿಂದ ತ್ಯಾಜ್ಯ ವಸ್ತು ತೆಗೆಯುವದು ಅಷ್ಟು ಸುಲಭವೂ ಆಗಿರಲಿಲ್ಲ. 5 ವರ್ಷದಿಂದ ಕೂಡಿದ್ದ ಬಟ್ಟೆ-ಬರೆ ದೇವರ ಪೋಟೋ, ಜೊತೆಗೆ ಅದರ ಪುಡಿಯಾದ ಗಾಜಿನ ಚೂರು ಕಸಕಡ್ಡಿ ಮತ್ತು ತೆಂಗಿನಕಾಯಿಗಳ ರಾಶಿಯೇ ನದಿಯಲ್ಲಿ ತುಂಬಿತ್ತು. ಒಂದಷ್ಟು ಕಾರ್ಯಕರ್ತರಿಗೆ ಗಾಜಿನ ಚೂರು ಚುಚ್ಚಿದರೂ ಎದೆಗುಂದದೆ ಅವರು ಮುಂದುವರಿಸಿದ ಕೆಲಸವನ್ನು ನೋಡಿದರೆ ಎಂತವರಿಗಾದರೂ ಹುರುಪು ಮೂಡುತ್ತಿತ್ತು. ಇನ್ನು ಕೆಲಸ ಬಾಕಿ ಉಳಿದಿದೆ, ಮುಂದಿನ ದಿನಗಳಲ್ಲಿ ಮುಗಿಸುವ ಗುರಿಧ್ಯೇಯ ಹೊಂದಲಾಗಿದೆ ಎಂದು ಕಾರ್ಯಕರ್ತರು ತಿಳಿಸಿದರು.
ಸ್ವಚ್ಛತಾ ಕಾರ್ಯದಲ್ಲಿ ಕಲಬುರಗಿ, ವಿಜಯಪುರ, ಬೀದರ ಜಿಲ್ಲೆ ಕಾರ್ಯಕರ್ತರು ಭಾಗವಹಿಸಿದ್ದರು. ನಾವು ನದಿ ಕೇವಲ ಜಲಮೂಲಗಳನ್ನಾಗಿ ನೋಡಲಿಲ್ಲ, ಬದಲಾಗಿ ಜೀವ ನೀಡುವ ದೇವರು ಎಂದೇ ಭಾವಿಸುತ್ತೇವೆ. ಇಂತಹ ಜೀವನದಿ ಒಡಲು ಇಂದು ಖಾಲಿಯಾಗಿದೆ. ಮತ್ತು ಮಲಿನವಾಗಿದೆ ಭೀಮೆ ಒಡಲನ್ನು ಸ್ವಚ್ಛಗೊಳಿಸಿ ಅದಕ್ಕೆ ಕೃತಜ್ಞತೆ ಸಲ್ಲಿಸುವ ಅವಕಾಶ ಇಂದು ನಮ್ಮೆಲ್ಲರದ್ದಾಗಿತ್ತು ಎಂದು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದರು.