ಸಾರಾಂಶ
ದೇವದುರ್ಗ ಪಟ್ಟಣದ ಪೊಲೀಸ್ ವಸತಿ ನಿಲಯ ಆವರಣದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಕಾಮಗಾರಿಗೆ ಗಣ್ಯರು ಭೂಮಿ ಪೂಜೆಯನ್ನು ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ದೇವದುರ್ಗ
ಸಮಾಜ ಸೇವೆಯಲ್ಲಿ ನಿರಂತರವಾಗಿ ಶ್ರಮಿಸುವ ಪೊಲೀಸ್ರಿಗೆ ನಾವೂ ಕೂಡ ರಕ್ಷಣೆ ನೀಡಿ ಹಿತ ಬಯಸುವದು ನಮ್ಮೆಲ್ಲರ ಧರ್ಮವಾಗಿದೆ ಎಂದು ಶಾಸಕಿ ಕರೆಮ್ಮ ಜಿ.ನಾಯಕ ತಿಳಿಸಿದರು.ಪಟ್ಟಣದ ಪೊಲೀಸ್ ವಸತಿ ನಿಲಯ ಆವರಣದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಕಾಮಗಾರಿಗೆ ಬುಧವಾರ ಚಾಲನೆ ನೀಡಿದರು. ದೇವದುರ್ಗದಲ್ಲಿ ಪೊಲೀಸರು ಹಾಗೂ ನಮ್ಮ ಕುಟುಂಬಕ್ಕೆ ಅನ್ಯೋನ್ಯ ಸಂಬಂಧವಿದ್ದು, ವಸತಿ ಗೃಹದ ಪಕ್ಕದಲ್ಲಿಯೇ ನಮ್ಮ ಮನೆ ಇದೆ. ನಮ್ಮ ಮನೆಯಲ್ಲಿ ಸದಾ ಜನರು ಇರುವದು ಅವರಿಗೆ ರಕ್ಷಣೆ, ಹಾಗೇ ನನಗೆ ಪೊಲೀಸರೇ ನಮ್ಮ ಪಕ್ಕದ ಮನೆಯಲ್ಲಿರುವದರಿಂದ ನಮಗೂ ರಕ್ಷಣೆ. ಹೀಗಾಗಿ ಬಹಳ ದಿನಗಳಿಂದ ನೂತನ ವಸತಿ ಗೃಹಗಳ ನಿರ್ಮಾಣದ ಕನಸಿತ್ತು. ಇದೀಗ ಅದು ಕಾರ್ಯ ರೂಪಕ್ಕೆ ಬರುತ್ತಿದೆ ಎಂದರು.
ರಾಜ್ಯ ಪೊಲೀಸ್ ವಸತಿ ಮತ್ತು ಸೌಲಭ್ಯ ಅಭಿವೃದ್ಧಿ ನಿಗಮದ ಇಇ ಶ್ರೀದೇವಿ ಪಾಟೀಲ್ ಮಾತನಾಡಿ, 3 ಅಂತಸ್ತಿನ ಕಟ್ಟಡದಲ್ಲಿ 12 ವಸತಿ ಗೃಹಗಳನ್ನು ₹3.55 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಅನುದಾನ ಲಭ್ಯವಿದೆ. ಅತಿ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳಿದೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ, ಡಿವೈಎಸ್ಪಿ ದತ್ತಾತ್ರೇಯ ಕಾರ್ನಡ, ಸಿಪಿಐ ವೈ.ಎನ್.ಗುಂಡೂರಾವ್, ಜೆಡಿಎಸ್ ಮುಖಂಡರಾದ ಸಿದ್ದಣ್ಣ ತಾತಾ ಮುಂಡರಗಿ, ಸಿದ್ದನಗೌಡ ಮೂಡಲಗುಂಡ, ಶರಣಪ್ಪ ಬಳೆ, ದೊಡ್ಡ ರಂಗಣ್ಣ ಗೌಡ, ರಾಮಣ್ಣ ನಾಯಕ ಮದರಕಲ್, ಗುತ್ತಿಗೆದಾರ ವೀರೇಶಗೌಡ ಬಿ.ಗಣೇಕಲ್ ಹಾಗೂ ಇತರರು ಇದ್ದರು. ಭೀಮಣ್ಣ ಗೋಸುಲ್ ನಿರೂಪಿಸಿದರು.