ಸಾರಾಂಶ
ಏಪ್ರಿಲ್ 4,5ರಂದು ಕಟೀಲು ಕಾಲೇಜಿನಲ್ಲಿ ‘ಭ್ರಾಮರೀ ಯಕ್ಷ ಝೇಂಕಾರ’ ಆಹ್ವಾನಿತ ತಂಡಗಳ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಮೂಲ್ಕಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ಏಪ್ರಿಲ್ 4,5ರಂದು ಕಟೀಲು ಕಾಲೇಜಿನಲ್ಲಿ ‘ಭ್ರಾಮರೀ ಯಕ್ಷ ಝೇಂಕಾರ’ ಆಹ್ವಾನಿತ ತಂಡಗಳ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ನಡೆಯಲಿದೆ.
ಏಪ್ರಿಲ್ 4ರಂದು ಬೆಳಗ್ಗೆ ಕಾಯಕ್ರಮವನ್ನು ಕಟೀಲು ದೇವಳದ ಆಡಳಿತ ಸಮಿತಿ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ ಉದ್ಘಾಟಿಸಲಿದ್ದಾರೆ. 5ರಂದು ಸಂಜೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ. ಮೋಹನ ಆಳ್ವ ಅವರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.ಸ್ಪರ್ಧೆಯಲ್ಲಿ ಎಸ್ಡಿಎಂ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಮಂಗಳೂರು ತಂಡದಿಂದ ಇಂದ್ರಜಿತು ಕಾಳಗ, ಎಜೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕೊಟ್ಟಾರ ತಂಡದಿಂದ ಅಭಿಮನ್ಯು ಕಾಳಗ, ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜು ತಂಡದಿಂದ ವರಾಹಾವತಾರ, ವಾಮದಪದವು ಪದವಿ ಕಾಲೇಜು ತಂಡ ಕೃಷ್ಣಾರ್ಜುನ ಕಾಳಗ, ನಿಟ್ಟೆ ಎನ್. ಎಸ್. ಎ.ಎಂ. ಪ್ರಥಮ ದರ್ಜೆ ಕಾಲೇಜು ಗಿರಿಜಾ ಕಲ್ಯಾಣ, ಐಕಳ ಪೊಂಪೈ ಕಾಲೇಜು ಮತ್ಸ್ಯಾವತಾರ, ಮಂಗಳೂರು ರಥಬೀದಿ ಸರ್ಕಾರಿ ಪದವಿ ಕಾಲೇಜು ಕನಕಾಂಗಿ ಕಲ್ಯಾಣ, ಮೂಡುಬಿದಿರೆ ಆಳ್ವಾಸ್ ಕಾಲೇಜು ಚೂಡಾಮಣಿ, ಕಟೀಲು ಕಾಲೇಜು ರುಕ್ಮಿಣಿ ಕಲ್ಯಾಣ ಪ್ರದರ್ಶಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.
ಏ.೬ರಂದು ಕಟೀಲು ಪದವಿ ಕಾಲೇಜಿನಲ್ಲಿ ಭಕ್ತಿ ಸಿಂಚನ, ರಾಗ ತಾಳಗಳ ಸಮ್ಮಿಲನ ದಕ್ಷಿಣ ಕನ್ನಡ ಉಡುಪಿ ಜಿಲ್ಲಾ ಮಟ್ಟದ ಭ್ರಾಮರೀ ಕುಣಿತ ಭಜನಾ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ೧೨ ಭಜನಾ ತಂಡಗಳು ಭಾಗವಹಿಸಲಿವೆ.