ಕೊರಳೂರು ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಭೂಮಿಪೂಜೆ

| Published : Feb 11 2024, 01:46 AM IST

ಕೊರಳೂರು ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಭೂಮಿಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಕೋಟೆ: ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಸಮೇತನಹಳ್ಳಿ ಗ್ರಾಪಂ ವ್ಯಾಪ್ತಿಯ ಕೊರಳೂರು ಗ್ರಾಮದಲ್ಲಿ 100 ಕೋಟಿ ರು. ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಸಂಸದ ಬಿ.ಎನ್ ಬಚ್ಚೇಗೌಡ ಹಾಗೂ ಶಾಸಕ ಶರತ್ ಬಚ್ಚೇಗೌಡ ಭೂಮಿಪೂಜೆ ನೆರವೇರಿಸಿದರು.

ಹೊಸಕೋಟೆ: ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಸಮೇತನಹಳ್ಳಿ ಗ್ರಾಪಂ ವ್ಯಾಪ್ತಿಯ ಕೊರಳೂರು ಗ್ರಾಮದಲ್ಲಿ 100 ಕೋಟಿ ರು. ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಸಂಸದ ಬಿ.ಎನ್ ಬಚ್ಚೇಗೌಡ ಹಾಗೂ ಶಾಸಕ ಶರತ್ ಬಚ್ಚೇಗೌಡ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಸಂಸದ ಬಿ.ಎನ್. ಬಚ್ಚೇಗೌಡ, ಕೇಂದ್ರ ಸರ್ಕಾರದಿಂದ 43 ಕೋಟಿ, ಲೋಕೋಪಯೋಗಿ ಇಲಾಖೆಯಿಂದ 36 ಕೋಟಿ, ಸಣ್ಣ ನೀರಾವರಿ ಇಲಾಖೆಯಿಂದ 18 ಕೋಟಿ ಅನುದಾನ ಒದಗಿಸಿ ರೈಲ್ವೆ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಹಲವಾರು ದಶಕಗಳಿಂದ ಈ ರಸ್ತೆಯಲ್ಲಿ ಸಂಚಾರ ಮಾಡುವಂತಹ ವಾಹನ ಸವಾರರಿಗೆ ರೈಲ್ವೆ ಗೇಟ್ ಬಂದ್ ಮಾಡುವ ಸಮಯದಲ್ಲಿ ಸಾಕಷ್ಟು ಕಿರಿಕಿರಿ ಉಂಟಾಗುತ್ತಿತ್ತು. ಟ್ರಾಫಿಕ್ ನಲ್ಲಿ ನಿಂತು ಸಮಯ ಕಳೆಯುವಂತಾಗಿತ್ತು. ಮೇಲ್ಸೇತುವೆಯಿಂದ ಟ್ರಾಫಿಕ್‌ ಸಮಸ್ಯೆಗೆ ಮುಕ್ತಿ ಸಿಗಲಿದ್ದು ಈ ಭಾಗದ ಗ್ರಾಮಗಳು ಅಭಿವೃದ್ಧಿಯತ್ತ ಸಾಗಲಿವೆ ಎಂದು ತಿಳಿಸಿದರು.

ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಕೊರಳೂರು ಗ್ರಾಮ ಹೊಸಕೋಟೆಯಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 207 ಜೊತೆಗೆ ಬೆಂಗಳೂರು ಮಹಾನಗರಕ್ಕೆ ಹೊಂದಿಕೊಂಡಿದ್ದು, ವಾಣಿಜ್ಯೇತರವಾಗಿ ಬೆಳೆಯಲಿದೆ. ವಾಹನ ಸಂಚಾರ ಹೆಚ್ಚಾಗಿದ್ದು ಪ್ರತಿದಿನ ಬೆಂಗಳೂರಿಂದ ಬಂಗಾರಪೇಟೆ, ಕೆಜಿಎಫ್, ಮಾರಿಕುಪ್ಪಂ ಹಾಗೂ ತಮಿಳುನಾಡು ಭಾಗಗಳಿಗೆ 175 ಟ್ರಿಪ್ ರೈಲು ಸಂಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ 175 ಬಾರಿ ರೈಲ್ವೆ ಗೇಟ್ ಹಾಕಿದ ಸಮಯದಲ್ಲಿ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿತ್ತು. ಈ ಸಮಸ್ಯೆಗೆ ಶಾಶ್ವತವಾಗಿ ಮುಕ್ತಿ ಕೊಡಿಸುವ ಉದ್ದೇಶದಿಂದ ಕೇಂದ್ರ ಸಚಿವರು ಹಾಗೂ ರಾಜ್ಯ ಸರ್ಕಾರದ ಜೊತೆ ಮನವಿ ಮಾಡಿ 100 ಕೋಟಿ ಅನುದಾನ ತಂದು ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಕೆಪಿಸಿಸಿ ಕಾರ್ಯದರ್ಶಿ ಸಮೇತನಹಳ್ಳಿ ಲಕ್ಷ್ಮಣಸಿಂಗ್, ಬಮೂಲ್ ನಿರ್ದೇಶಕ ಕೆಎಂಎಫ್ ಮಂಜುನಾಥ್, ಎಲ್‌ಎನ್‌ಟಿ ಮಂಜುನಾಥ್, ಗ್ರಾಪಂ ಅಧ್ಯಕ್ಷ ನಡವತ್ತಿ ಕಾಂತರಾಜು, ಟಿಪಿಸಿಎಂಎಸ್ ಅಧ್ಯಕ್ಷ ಬಾಬುರೆಡ್ಡಿ, ನಿರ್ದೇಶಕ ಆನಂದಾಚಾರಿ, ಮುಖಂಡರಾದ ಕೋಡಿಹಳ್ಳಿ ಸೊಣ್ಣಪ್ಪ, ಬೋಧನಹೊಸಹಳ್ಳಿ ಪ್ರಕಾಶ್, ಕೊರಳೂರು ಸುರೇಶ್, ಮಲ್ಲಸಂದ್ರ ಶೇಷಪ್ಪ, ಸಮೇತನಹಳ್ಳಿ ಸೊಣ್ಣಪ್ಪ ಇತರರಿದ್ದರು.ಬಾಕ್ಸ್ .................

ಅನುದಾನ ಸುಮ್ಮನೆ ದಕ್ಕಲ್ಲ

ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ತರೋದು ಸಾಮಾನ್ಯ ವಿಷಯವಲ್ಲ. ಆದರೆ ಶಾಸಕ ಶರತ್ ಬಚ್ಚೇಗೌಡರು ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ನಡುವೆ ನಿರಂತರ ಚರ್ಚಿಸಿ 100 ಕೋಟಿ ಅನುದಾನ ಏಕಕಾಲಕ್ಕೆ ತಂದು ಮೇಲ್ಸೇತುವೆ ನಿರ್ಮಾಣಕ್ಕೆ ಚಾಲನೆ ಕೊಟ್ಟಿರುವುದು. ಅಭಿವೃದ್ಧಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸಂಸದ ಬಿ.ಎನ್. ಬಚ್ಚೇಗೌಡ ತಿಳಿಸಿದರು.ಫೋಟೋ : 9 ಹೆಚ್‌ಎಸ್‌ಕೆ 1

ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಕೊರಳೂರು ಗ್ರಾಮದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಸಂಸದ ಬಚ್ಚೇಗೌಡ, ಶಾಸಕ ಶರತ್ ಬಚ್ಚೇಗೌಡ ಭೂಮಿಪೂಜೆ ನೆರವೇರಿಸಿದರು.