ಸಾರಾಂಶ
ಬಾಂಗ್ಲಾ ಯುವತಿಯೊಂದಿಗಿನ ಪ್ರೇಮ ಪ್ರಕರಣವೊಂದು ಅಕ್ರಮವಾಗಿ ಗಡಿದಾಟುವ ಹಂತಕ್ಕೆ ಹೋಗಿ ಪೊಲೀಸರ ಅತಿಥಿಯಾಗಿ ಯುವ ಜೋಡಿಯೊಂದು ಜೈಲು ಪಾಲಾದ ಘಟನೆ ತ್ರಿಪುರಾದ ಸೇಫಾಹಿಜಾಲಾ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ಬೀದರ್ : ಬಾಂಗ್ಲಾ ಯುವತಿಯೊಂದಿಗಿನ ಪ್ರೇಮ ಪ್ರಕರಣವೊಂದು ಅಕ್ರಮವಾಗಿ ಗಡಿದಾಟುವ ಹಂತಕ್ಕೆ ಹೋಗಿ ಪೊಲೀಸರ ಅತಿಥಿಯಾಗಿ ಯುವ ಜೋಡಿಯೊಂದು ಜೈಲು ಪಾಲಾದ ಘಟನೆ ತ್ರಿಪುರಾದ ಸೇಫಾಹಿಜಾಲಾ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ಮೂಲತಃ ಬೀದರ್ ತಾಲೂಕಿನ ಕಮಠಾಣಾ ಗ್ರಾಮ ಮೂಲದ ಎನ್ನಲಾದ ವೃತ್ತಿಯಲ್ಲಿ ಗುತ್ತಿಗೆದಾರನಾದ ದತ್ತಾ ಯಾದವ್ ಎಂಬಾತ ಬಾಂಗ್ಲಾದೇಶದ ಮಹಿಳೆಯೊಂದಿಗಿನ ಪ್ರೇಮ ಪ್ರಕರಣ ಪಾಸ್ಪೋರ್ಟ್ ಇಲ್ಲದೆ ಅಕ್ರಮ ಗಡಿದಾಟಿದ ಕ್ಷಣ ಬಿಎಸ್ಎಫ್ ಯೋಧರು ಬುಧವಾರವೇ ಸಂದಿಗ್ಧ ಜೋಡಿಯ ಮೇಲೆ ಗುಪ್ತ ಮಾಹಿತಿ ಆಧರಿಸಿ ಜಾಲ ಬೀಸಿ ಬಂಧಿಸಿದ್ದಾರೆ. ನಂತರ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರು ಪಾಸ್ಪೋರ್ಟ್ ಕಾಯ್ದೆ, ವಿದೇಶಿಯರ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ದೂರು ದಾಖಲಿಸಿಕೊಂಡು ಸ್ಥಳೀಯ ನ್ಯಾಯಾಲದಲ್ಲಿ ಹಾಜರುಪಡಿಸಿದ್ದು, ನ್ಯಾಯಾಲವು 14 ದಿನದ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ ಎನ್ನಲಾಗಿದೆ.
ಬೀದರ್ ಟು ಬಾಂಗ್ಲಾ ಲವ್ ಸ್ಟೋರಿ:
ಬಾಂಗ್ಲಾದೇಶದ ಬೋಗರಾ ಜಿಲ್ಲೆಯ ನಿವಾಸಿಯಾದ 35 ವಯಸ್ಸಿನ ಈ ಮಹಿಳೆಯು ಮೊದಲು ಮುಂಬೈ ಮಹಾನಗರದ ಬ್ಯೂಟಿ ಪಾರ್ಲರ್ನಲ್ಲಿ ಕೆಲಸ ಮಾಡಿಕೊಂಡಿದ್ದಳು. ನಂತರ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವಾಗ ಬೀದರ್ ಮೂಲದ ದತ್ತಾ ಯಾದವ್ ಪರಿಚಯವಾಗಿ ಇವರಿಬ್ಬರ ನಡುವೆ ಪ್ರೀತಿ ಚಿಗುರಿದೆ. ಕೆಲ ದಿನಗಳ ನಂತರ ಯುವತಿ ತಮ್ಮ ದೇಶಕ್ಕೆ ವಾಪಸ್ಸಾಗಿದ್ದಾಳೆ. ಆದರೆ, ಪ್ರಿಯಕರ ದತ್ತಾ ಯಾದವ್ ಹೇಗಾದ್ರು ಮಾಡಿ ಬಾಂಗ್ಲಾದೇಶದಿಂದ ಯುವತಿಯನ್ನು ವಾಪಸ್ ಕರೆಸಲು ಕುತಂತ್ರ ಹೆಣೆದಿದ್ದಾನೆ. ಗಡಿ ದಾಟಿ ತ್ರಿಪುರಾದ ಸೇಫಾಹಿಜಲಾದಲ್ಲಿ ಇಬ್ಬರೂ ಇರುವುದನ್ನು ಗಡಿ ಭದ್ರತಾ ಪಡೆಯ ಗುಪ್ತ ಮಾಹಿತಿ ಪಡೆದುಕೊಂಡಿದೆ. ಅಗರ್ತಲಾ ನಗರದಿಂದ ಬೆಂಗಳೂರಿಗೆ ಪ್ರವಾಸ ಮಾಡಲು ಯೋಜನೆ ರೂಪಿಸಿ ಬುಧವಾರ ಈ ಜೋಡಿಯನ್ನು ಬಂಧಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಮಾನವ ಸಾಗಾಣಿಕೆ ಹಂತದಲ್ಲೂ ತನಿಖೆ:
ತ್ರಿಪುರಾ ಪೊಲೀಸರ ಪ್ರಕಾರ ಈ ಮಹಿಳೆಯನ್ನು ಭಾರತಕ್ಕೆ ಅಕ್ರಮವಾಗಿ ಸಾಗಿಸಿರುವ ಏಜೆಂಟ್ನ ಪತ್ತೆ ಹಚ್ಚುವದಲ್ಲದೆ ಅಕ್ರಮ ಮಾನವ ಸಾಗಾಟ ಹಂತದಲ್ಲೂ ತನಿಖೆ ನಡೆಸಲು ಯೋಚಿಸಲಾಗಿದ್ದು ಈ ಜೋಡಿಯನ್ನು ಪೊಲೀಸರು ಕಸ್ಟಡಿಗೂ ಕೇಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.