ಸಾರಾಂಶ
- ಡಿಸಿಎಂ ಹೇಳಿಕೆಗೂ, ಬಿಗ್ ಬಾಸ್ ಮನೆ ಬಂದ್ಗೂ ಸಂಬಂಧವಿಲ್ಲ: ರಾಮಲಿಂಗಾರೆಡ್ಡಿ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಕಿರುತೆರೆಯ ಬಿಗ್ ಬಾಸ್ ಮನೆಯಲ್ಲಿ ಅನೇಕ ನ್ಯೂನತೆಗಳಿವೆ. ಅವುಗಳನ್ನು ಸರಿಪಡಿಸಿಕೊಳ್ಳಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿದ್ದರೂ, ಸರಿಪಡಿಸಿಕೊಂಡಿಲ್ಲ. ಆದ್ದರಿಂದ ಬಿಗ್ ಬಾಸ್ ಮನೆಗೆ ಬೀಗ ಹಾಕಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.ಚನ್ನಗಿರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟ್ಟು ಬೋಲ್ಟ್ ಟೈಟ್ ಮಾಡುವುವುದಾಗಿ ಈ ಹಿಂದೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿಕೆ ನೀಡಿದ್ದು ಚಿತ್ರರಂಗಕ್ಕೆ ಸಂಬಂಧಿಸಿದಂತೆ. ಬಿಗ್ ಬಾಸ್ ಮನೆಗೆ ಬೀಗ ಹಾಕಿಸಿದ್ದಕ್ಕೂ, ಈ ಹಿಂದೆ ಡಿ.ಕೆ.ಶಿವಕುಮಾರ ಆಡಿದ್ದ ಹೇಳಿಕೆಗೂ ಯಾವುದೇ ಸಂಬಂಧವೂ ಇಲ್ಲ. ಬಿಗ್ ಬಾಸ್ ಮನೆಯಲ್ಲಿ ಕೇವಲ ಇಬ್ಬರು ಅಥವಾ ಮೂವರು ನಟರು ಇರಬಹುದಷ್ಟೇ. ಅದಕ್ಕೆ ಬಂದ್ ಮಾಡಿದ್ದಾರೆಂದು ಹೇಳುವುದು ತಪ್ಪಾಗುತ್ತದೆ ಎಂದು ತಿಳಿಸಿದರು.
ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ವಿಚಾರದಲ್ಲಿ ಯಾವುದೇ ಸಮುದಾಯದ ಮೀಸಲಾತಿ ಕಿತ್ತುಕೊಂಡು, ಕುರುಬ ಜನಾಂಗಕ್ಕೆ ನೀಡುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೀಸಲಾತಿ ಹೆಚ್ಚು ಮಾಡಿ, ಆ ಸಮುದಾಯಕ್ಕೆ ಮೀಸಲಾತಿ ನೀಡುತ್ತಾರೆಯೇ ಹೊರತು, ಯಾವುದೇ ಸಮುದಾಯದ ಮೀಸಲಾತಿ ಕಡಿಮೆ ಮಾಡಿ, ಕಿತ್ತುಕೊಂಡು, ನೀಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.ಪರಿಶಿಷ್ಟ ಪಂಗಡದ ನಾಯಕ ಸಮುದಾಯಕ್ಕೆ ಶೇ.7.5 ಮೀಲಾತಿ ಇದ್ದೇ ಇರುತ್ತದೆ. ಕುರುಬ ಸಮುದಾಯಕ್ಕೆ ನೀಡುವ ಮೀಸಲಾತಿ ಹೆಚ್ಚಿಸಿ, ಕುರುಬ ಸಮುದಾಯದವರಿಗೆ ನೀಡುತ್ತಾರೆ. ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡದಂತೆ ನಮ್ಮ ಪಕ್ಷದ ಹೈಕಮಾಂಡ್ ಹೇಳಿದೆ. ಹಾಗಾಗಿ ಅಂತಹ ವಿಚಾರದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು.
- - -(ಬಾಕ್ಸ್)
* ಶೂ ಎಸೆತ ಬೆಂಬಲಿಸೋರು ಇರುವುದು ವಿಪರ್ಯಾಸ: ಸಾರಿಗೆ ಸಚಿವದಾವಣಗೆರೆ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆತ ಪ್ರಕರಣ ಖಂಡಿಸಲು ಪ್ರಧಾನಿ ನರೇಂದ್ರ ಮೋದಿಗೆ 9 ಗಂಟೆ ಕಾಯಬೇಕಾಯಿತು. ಇದೊಂದು ದುರಂತ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕಿಡಿಕಾರಿದರು.
ಮುಖ್ಯ ನ್ಯಾಯಮೂರ್ತಿಗಳೇ ದೊಡ್ಡ ಮನುಷ್ಯರು ಹೋಗಲಿ ಬಿಡಿ ಅಂದಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿಯನ್ನು ಹೊರತುಪಡಿಸಿ, ಬಿಜೆಪಿಯವರಾಗಲೀ, ಕೇಂದ್ರದ ಸಚಿವರಾಗಲೀ ಯಾರೊಬ್ಬರೂ ವಿರೋಧ ವ್ಯಕ್ತಪಡಿಸಿಲ್ಲ ಎಂದು ಟೀಕಿಸಿದರು.
ಶೂ ಎಸೆದ ಪ್ರಕರಣ ಬೆಂಬಲಿಸುವ ಜನರು ಈ ದೇಶದಲ್ಲಿದ್ದಾರೆಂದರೆ ಎಂತಹ ವಿಪರ್ಯಾಸ ಅಲ್ಲವೇ? ನಿಜವಾಗಲೂ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳ ಮೇಲೆ ಈ ರೀತಿ ಶೂ ಎಸೆದಿದ್ದು ಖಂಡನೀಯ ಎಂದು ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.- - -
(ಸಾಂದರ್ಭಿಕ ಚಿತ್ರ)