ಬಿರುನಾಣಿ: ಬೃಹತ್ ಆರೋಗ್ಯ ತಪಾಸಣಾ ಶಿಬಿರ

| Published : Jan 24 2024, 02:01 AM IST

ಸಾರಾಂಶ

ಶಿಬಿರದಲ್ಲಿ ಸುಮಾರು 160ಕ್ಕಿಂತ ಹೆಚ್ಚು ಹೊರ ರೋಗಿಗಳ ವೈದ್ಯರ ಭೇಟಿ, 5 ಯುಡಿಐಡಿ ಕಾರ್ಡ್‌ಗಳು, 50ಕ್ಕಿಂತ ಹೆಚ್ಚಿನ ಜನರು ಅಸಾಂಕ್ರಾಮಿಕ ರೋಗಗಳ ಪರೀಕ್ಷೆಯನ್ನು ಈ ಶಿಬಿರದಲ್ಲಿ ಸಾರ್ವಜನಿಕರಿಗೆ ಕಲ್ಪಿಸಿಕೊಡಲಾಯಿತು

ಕನ್ನಡಪ್ರಭ ವಾರ್ತೆ ಮಡಿಕೇರಿಕೊಡಗು ವ್ಯೆದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆ, ಬಿರುನಾಣಿ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಬಿರುನಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಈ ಶಿಬಿರದಲ್ಲಿ ಸಾಮಾನ್ಯ ವೈದ್ಯಶಾಸ್ತ್ರ, ಶಸ್ತ್ರಚಿಕಿತ್ಸೆ, ಕಣ್ಣು, ಪ್ರಸೂತಿ ಮತ್ತು ಸ್ತ್ರೀ ರೋಗ, ಮಕ್ಕಳ, ಚರ್ಮ ರೋಗ, ಕಿವಿ, ಮೂಗು, ಗಂಟಲು, ಮೂಳೆ ಮತ್ತು ಕೀಲು, ಸಮುದಾಯ ವೈದ್ಯಕೀಯ, ದಂತ, ಮಾನಸಿಕ ರೋಗ, ಅಸಾಂಕ್ರಾಮಿಕ ರೋಗಗಳ ನುರಿತ ತಜ್ಞ ವೈದ್ಯರು ವೈದ್ಯಕೀಯ ಸೇವೆಯನ್ನು ನೀಡಿದರು.

ಶಿಬಿರದಲ್ಲಿ ಸುಮಾರು 160ಕ್ಕಿಂತ ಹೆಚ್ಚು ಹೊರ ರೋಗಿಗಳ ವೈದ್ಯರ ಭೇಟಿ, 5 ಯುಡಿಐಡಿ ಕಾರ್ಡ್‌ಗಳು, 50ಕ್ಕಿಂತ ಹೆಚ್ಚಿನ ಜನರು ಅಸಾಂಕ್ರಾಮಿಕ ರೋಗಗಳ ಪರೀಕ್ಷೆಯನ್ನು ಈ ಶಿಬಿರದಲ್ಲಿ ಸಾರ್ವಜನಿಕರಿಗೆ ಕಲ್ಪಿಸಿಕೊಡಲಾಯಿತು ಹಾಗೂ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ವ್ಯೆದ್ಯಕೀಯ ಕಾಲೇಜಿಗೆ 25 ರೋಗಿಗಳನ್ನು ಬರಲು ತಿಳಿಸಲಾಗಿದೆ.

ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ರಾಜೇಶ್ ಕಾರ್ಯಕ್ರಮ ಉದ್ಘಾಟಿಸಿ, ಈ ಸ್ಥಳದಲ್ಲಿ ಹೆಚ್ಚಿನ ಆರೋಗ್ಯ ಶಿಬಿರಗಳು ನಡೆದ ಪಕ್ಷದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.

ಜಿಲ್ಲಾ ಶಸತ್ರ ಚಿಕಿತ್ಸಕರಾದ ಡಾ.ನಂಜುಂಡಯ್ಯ ಮಾತನಾಡಿ, ಪ್ರಧಾನ ಮಂತ್ರಿಗಳು ಆಯುಷ್ಮಾನ್ ಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಜಿಲ್ಲೆಯ ವಿವಿಧ ಕಡೆ ಆರೋಗ್ಯ ಕಾರ್ಯಕ್ರಮಗಳು ಹಾಗೂ ಶಿಬಿರಗಳನ್ನು ಆಯೋಜನೆ ಮಾಡಿ ಎಲ್ಲರಿಗೂ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವುದು ನಮ್ಮ ಗುರಿ. ಕೊಡಗು ವೈದ್ಯಕೀಯ ಕಾಲೇಜಿನಲ್ಲಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಈ ರೀತಿಯ ಆರೋಗ್ಯ ಶಿಬಿರಗಳನ್ನು ನಡೆಸುವುದರಿಂದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವುದು ನಮ್ಮ ಸಂಸ್ಥೆಯ ಉದ್ದೇಶ. ಈ ಶಿಬಿರದಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಮಡಿಕೇರಿಯ ಟೋಲ್‌ಗೇಟ್ ಬಳಿ ಇರುವ ವ್ಯೆದ್ಯಕೀಯ ಕಾಲೇಜು ಆಸ್ಪತ್ರೆಗೆ ಬಂದು ಹೆಚ್ಚಿನ ಚಿಕಿತ್ಸೆಯನ್ನು ಪಡೆದುಕೊಳ್ಳಲು ತಿಳಿಸಿದರು.

ಹಾಗೆಯೇ ಬರುವ ಸಂದರ್ಭದಲ್ಲಿ ಆಯುಷ್ಮಾನ್ ಕಾರ್ಡ್/ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್‌ಗಳನ್ನು ತಂದರೆ ಎಲ್ಲ ರೀತಿಯ ಪರೀಕ್ಷೆ ಹಾಗೂ ಚಿಕಿತ್ಸೆಗಳು ಉಚಿತವಾಗಿ ದೊರೆಯುವುದು. ಈ ವಿಷಯವನ್ನು ತಮ್ಮ ವ್ಯಾಪ್ತಿಯ ಸುತ್ತಮುತ್ತಲಿನ ಎಲ್ಲ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ನೋಡಲ್ ಅಧಿಕಾರಿ ಡಾ.ರಾಮಚಂದ್ರ ಕಾಮತ್ ಮಾತನಾಡಿ, ತಾಲೂಕಿನಲ್ಲಿ ಪ್ರತಿ ಮಂಗಳವಾರ ತಜ್ಞ ವೈದ್ಯರು ಹಾಗೂ ಆಸ್ಪತ್ರೆಯಲ್ಲಿ ಲಭ್ಯವಿರುವ ವೈದ್ಯರೊಂದಿಗೆ ತಾಲೂಕಿನ ಎಲ್ಲ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು/ ಪ್ರಾಥಮಿಕ/ ಸಮುದಾಯ/ ತಾಲೂಕು/ ಆಸ್ಪತ್ರೆಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸುತ್ತಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಹಾಗೂ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಜಿಲ್ಲೆಯ ಎಲ್ಲ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಇದ್ದು, ಪಡಿತರ ಚೀಟಿ ಆಧಾರ್ ಕಾರ್ಡ್ ನೀಡಿ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದರು.

ಬಿರುನಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಎಸ್.ಸತೀಶ್ ಮಾತನಾಡಿ, ನಮ್ಮ ಆಸ್ಪತ್ರೆಯ ಸುತ್ತಮುತ್ತ ಹಾಡಿಗಳು ಮತ್ತು ತೋಟದ ಕಾರ್ಮಿಕರು ಹೆಚ್ಚಾಗಿ ಇರುವುದರಿಂದ ಈ ರೀತಿಯ ಆರೋಗ್ಯ ಶಿಬಿರಗಳು ತುಂಬಾ ಪ್ರಯೋಜನಾಕಾರಿಯಾಗಲಿದೆ. ಈ ಶಿಬಿರದ ಸದುಪಯೋಗವನ್ನು ಸರ್ವರು ಪಡೆದುಕೊಳ್ಳಲು ಕೋರಿದರು.

ಈ ಶಿಬಿರದಲ್ಲಿ ಕೊಡಗು ವ್ಯೆದ್ಯಕೀಯ ವಿಜ್ಞಾನಗಳ ಸಂಸ್ಥೆಯ ವತಿಯಿಂದ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ, ಉಚಿತ ಆಯುಷ್ಮಾನ್ ಕಾರ್ಡ್‌ಗಳ ನೋಂದಣಿ, ಉಚಿತ ಯುಡಿಐಡಿ ನೋಂದಣಿ, ದೇಹದಾನ, ನೇತ್ರದಾನ, ಅಂಗಾಂಗ ದಾನ ಕುರಿತು ಹಾಗೂ ಇನ್ನಿತರ ಯೋಜನೆಗಳ ಬಗ್ಗೆ ಆರೋಗ್ಯ ಮಿತ್ರರಾದ ದಿನೇಶ್ ಮಾಹಿತಿ ನೀಡಿದರು.

ಈ ಸಂದರ್ಭ ಶ್ವಾಸಕೋಶ ವಿಭಾಗದ ಡಾ. ಅಮಿತ್, ಮಕ್ಕಳ ವಿಭಾಗದ ಡಾ. ಅಮೀರ್, ಶಸ್ತ್ರಚಿಕಿತ್ಸಾ ವಿಭಾಗದ ಡಾ.ಸಚಿನ್, ಚರ್ಮರೋಗ ವಿಭಾಗದ ಡಾ. ಹೇಮಾವತಿ ಬಿ.ಕೆ., ಸಹಾಯಕ ಪ್ರಾಧ್ಯಾಪಕ ಡಾ. ಶ್ರೀಕಾಂತ, ಕೀಲುಮೂಳೆ ವಿಭಾಗದ ಡಾ. ವಿನಯ್, ಕಣ್ಣಿನ ವಿಭಾಗದ ಡಾ. ಐಶ್ವರ್ಯ, ಸಮುದಾಯ ವೈದ್ಯಶಾಸ್ತ್ರದ ಡಾ. ಶ್ರೀದೇವಿ ಹಾಗೂ ವ್ಯೆದ್ಯಕೀಯ ಕಾಲೇಜಿನ ವ್ಯೆದ್ಯರು, ವ್ಯೆದ್ಯಾಕೀಯ ವಿದ್ಯಾರ್ಥಿಗಳು, ಅರೆ ವ್ಯೆದ್ಯಕೀಯ ವಿದ್ಯಾರ್ಥಿಗಳು, ಸಿಬ್ಬಂದಿ, ಪ್ರಾಥಮಿಕ ಆರೋಗ್ಯ ಕೇಂದ್ರ ಬಿರುನಾಣಿ ವ್ಯೆದ್ಯರು ಹಾಗೂ ಸಿಬ್ಬಂದಿ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಿಬ್ಬಂದಿ, ಬಿರುನಾಣಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಬಿರುನಾಣಿ ವ್ಯಾಪ್ತಿಯ ಸಾರ್ವಜನಿಕರು, ರೋಗಿಗಳು, ಮಾಧ್ಯಮ ಮಿತ್ರರು ಭಾಗವಹಿಸಿದ್ದರು.