ಸಾರಾಂಶ
ಭ್ರಷ್ಟಾಚಾರ, ಸರ್ವಾಧಿಕಾರಿ, ದುರಹಂಕಾರದಿಂದ ಮೆರೆಯುತ್ತಿರುವ ಬಿಜೆಪಿ ಸೋಲಿಸುವುದೇ ನಮ್ಮ ಪಕ್ಷದ ಮುಖ್ಯ ಉದ್ದೇಶವಾಗಿದೆ. ಬಿಜೆಪಿಯು ಅಭಿವೃದ್ಧಿ ವಿಚಾರದಲ್ಲಿ ಮತ ಕೇಳದೆ ಬರೀ ಸುಳ್ಳು ಹೇಳುತ್ತಾ ಜನರ ಮನಸ್ಸನ್ನು ಬೇರೆಡೆ ಸೆಳೆದು ಧರ್ಮದ ಆಧಾರದ ಮೇಲೆ ಮತ ಕೇಳುತ್ತಿದ್ದಾರೆ.
ಹುಬ್ಬಳ್ಳಿ:
ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಸರ್ಕಾರವು ದೇಶವನ್ನು ರಾಮರಾಜ್ಯ ಮಾಡುವ ಕನಸು ಮೂಡಿಸಿ ಈಗ ರಾವಣ ರಾಜ್ಯವನ್ನಾಗಿಸಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆರೋಪಿಸಿದರು.ಅವರು ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವೇ ರಾಮಮಂದಿರ ಕಟ್ಟಿರುವುದಾಗಿ ಹೇಳಿಕೊಳ್ಳುತ್ತ ಜನರಲ್ಲಿ ರಾವಣನ ಗುಣಗಳನ್ನು ತುಂಬಲು ಯತ್ನಿಸುತ್ತಿದ್ದಾರೆ ಎಂದು ಹರಿಹಾಯ್ದರು.
ಭ್ರಷ್ಟಾಚಾರ, ಸರ್ವಾಧಿಕಾರಿ, ದುರಹಂಕಾರದಿಂದ ಮೆರೆಯುತ್ತಿರುವ ಬಿಜೆಪಿ ಸೋಲಿಸುವುದೇ ನಮ್ಮ ಪಕ್ಷದ ಮುಖ್ಯ ಉದ್ದೇಶವಾಗಿದೆ. ಬಿಜೆಪಿಯು ಅಭಿವೃದ್ಧಿ ವಿಚಾರದಲ್ಲಿ ಮತ ಕೇಳದೆ ಬರೀ ಸುಳ್ಳು ಹೇಳುತ್ತಾ ಜನರ ಮನಸ್ಸನ್ನು ಬೇರೆಡೆ ಸೆಳೆದು ಧರ್ಮದ ಆಧಾರದ ಮೇಲೆ ಮತ ಕೇಳುತ್ತಿದ್ದಾರೆ ಎಂದರು.ಪ್ರಜ್ವಲ್ಗೆ ಕಠಿಣ ಶಿಕ್ಷೆಯಾಗಲಿ:
ಪ್ರಜ್ವಲ್ ರೇವಣ್ಣರ ಅಶ್ಲೀಲ ವಿಡಿಯೋ ಪ್ರಕರಣಗಳ ಕುರಿತು ಮಾತನಾಡಿದ ಚಂದ್ರು, ಇದೊಂದು ಹ್ಯೇಯ ಕೃತ್ಯ, ಓರ್ವ ಸಂಸದನಾಗಿ ಇಂತಹ ಕ್ರೌರ್ಯ ಮೆರೆದಿರುವುದು ಖಂಡನಾರ್ಹ. ಇದೇ ರೀತಿಯ ಆರೋಪ ಪ್ರಜ್ವಲ್ ಅವರ ತಂದೆ ರೇವಣ್ಣ ಮೇಲೆಯೂ ಬಂದಿವೆ. ಹಿಂದೆ ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ಅವರ ರಾಜಕಾರಣವನ್ನು ನಾವು ಗಮನಿಸಿದ್ದೇವೆ. ಉತ್ತಮ ಆಡಳಿತಗಾರರಾಗಿದ್ದರು. ಎಂದಿಗೂ ಇಂತಹ ಕೀಳುಮಟ್ಟದ ಹೊಲಸು ರಾಜಕಾರಣ ಮಾಡಿರಲಿಲ್ಲ. ಆದರೆ, ಈಗ ತಮ್ಮ ಮಗನ ಹಾಗೂ ಮೊಮ್ಮಗನ ಹಗರಣ ಬೆಳಕಿಗೆ ಬಂದರೂ ಅವರಿಗೆ ಶಿಕ್ಷೆ ವಿಧಿಸಲಿ ಎಂದು ಒಂದೇ ಒಂದು ಮಾತು ಹೇಳದಿರುವುದು ಖಂಡನಾರ್ಹ ಎಂದರು.ಈ ವೇಳೆ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರನ್ನು ಜಿಲ್ಲಾ ಕಾಂಗ್ರೆಸ್ ವತಿಯಿಂದ ಸನ್ಮಾನಿಸಲಾಯಿತು. ಮಹಾನಗರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ ಸೇರಿದಂತೆ ಹಾಗೂ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.