ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಲೋಕಸಭಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಚ್.ಡಿ.ಕುಮಾರಸ್ವಾಮಿ ಅಭೂತಪೂರ್ವ ಗೆಲುವಿಗೆ ಬಿಜೆಪಿ ಮುಖಂಡರು-ಕಾರ್ಯಕರ್ತರ ಪ್ರಾಮಾಣಿಕ ಶ್ರಮ ಕಾರಣ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಮತ್ತು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ತಿಳಿಸಿದ್ದಾರೆ.ಬಿಜೆಪಿ ಹೈಕಮಾಂಡ್ ರಾಜ್ಯ ಮಟ್ಟದಲ್ಲಿ ಜೆಡಿಎಸ್ ಜೊತೆ ಮಾಡಿಕೊಂಡ ಮೈತ್ರಿಯನ್ನು ಒಪ್ಪಿಕೊಂಡು ಅಭ್ಯರ್ಥಿ ಪರವಾಗಿ ಸಂಘಟನಾತ್ಮಕವಾಗಿ ಕೆಲಸ ಮಾಡಿದೆವು. ಮೈತ್ರಿ ಪಕ್ಷದ ನಾಯಕರೊಂದಿಗೆ ಉತ್ತಮ ವಿಶ್ವಾಸದೊಂದಿಗೆ ಪ್ರಚಾರದಲ್ಲಿ ತೊಡಗಿದ್ದೆವು. ಎಲ್ಲಿಯೂ ಸಣ್ಣ ಗೊಂದಲ, ಮನಸ್ತಾಪಗಳು ಎದುರಾಗದಂತೆ ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಿದ ಪರಿಣಾಮ ಪಕ್ಷದ ಮತಗಳು ಕುಮಾರಸ್ವಾಮಿಗೆ ಸೇರುವಂತಾಯಿತು ಎಂದು ಹೇಳಿದ್ದಾರೆ.
ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನಿಷ್ಪಕ್ಷಪಾತವಾಗಿ ಶ್ರಮವಹಿಸಿ ಕೆಲಸ ಮಾಡಿದ್ದರಿಂದ ಬಿಜೆಪಿ ಮತಗಳು ಕಾಂಗ್ರೆಸ್ ಕಡೆಗೆ ಹರಿದುಹೋಗಲು ಸಾಧ್ಯವಾಗಲಿಲ್ಲ. ಮೋದಿ ಮೇಲಿನ ಅಭಿಮಾನ, ಪ್ರೀತಿ ಯುವ ಮತದಾರರು ಎಚ್.ಡಿ.ಕುಮಾರಸ್ವಾಮಿ ಪರವಾಗಿ ನಿಲ್ಲುವುದಕ್ಕೆ ಪ್ರೇರಣೆ ನೀಡಿತು. ಬಿಜೆಪಿ ಪಕ್ಷದ ಮತಗಳೆಲ್ಲವೂ ಎಚ್.ಡಿ.ಕುಮಾರಸ್ವಾಮಿ ಪರವಾಗಿ ಹರಿದುಬರುವುದಕ್ಕೆ ಕಾರಣವಾಯಿತು ಎಂದಿದ್ದಾರೆ.ಕಳೆದ ಚುನಾವಣಾ ಸಮಯದಲ್ಲಿ ಬಿಜೆಪಿ ಸುಮಲತಾ ಅವರಿಗೆ ಬೆಂಬಲವಾಗಿ ನಿಲ್ಲುವಂತೆ ಸೂಚಿಸಿದಾಗಲೂ ನಾವು ಅವರ ಪರವಾಗಿ ಸಂಘಟನಾತ್ಮಕವಾಗಿ, ನಿಷ್ಪಕ್ಷಪಾತವಾಗಿ ಕೆಲಸ ಮಾಡಿದ್ದೆವು. ಇದರ ಪರಿಣಾಮ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸುವುದಕ್ಕೆ ಸಾಧ್ಯವಾಗಿತ್ತು. ಅದೇ ಮಾದರಿಯಲ್ಲಿ ಈ ಬಾರಿ ಎಚ್.ಡಿ.ಕುಮಾರಸ್ವಾಮಿ ಪರವಾಗಿ ನಿಂತು ಹೈಕಮಾಂಡ್ ಆದೇಶದಂತೆ ಕೆಲಸ ಮಾಡಿದ್ದೇವೆ. ಮೈತ್ರಿ ಅಭ್ಯರ್ಥಿ ಗೆಲುವು ತುಂಬಾ ಸಂತಸ ತಂದಿದೆ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಅವರು ಹೋಬಳಿ, ಗ್ರಾಮ ಪಂಚಾಯಿತಿ ಮಟ್ಟಕ್ಕೆ ಪ್ರಚಾರಕ್ಕೆ ಬಾರದಿದ್ದರೂ ಮುಖಂಡರು-ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಎಚ್ಡಿಕೆ ಪರ ಪ್ರಚಾರ ನಡೆಸಿದೆವು. ಜನರೂ ಕೂಡ ಮೈತ್ರಿ ಅಭ್ಯರ್ಥಿ ಪರವಾಗಿ ಒಲವು ತೋರಿದ್ದರಿಂದಾಗಿ ಗೆಲುವು ಸುಗಮವಾಯಿತು ಎಂದು ನುಡಿದಿದ್ದಾರೆ.ಜೆಡಿಎಸ್ ಪಕ್ಷದ ನಾಯಕರಿಗೆ ಬಿಜೆಪಿ ಕಡೆಯಿಂದ ಎಲ್ಲ ರೀತಿಯ ಸಲಹೆ-ಸಹಕಾರವನ್ನು ನೀಡಲಾಗಿದೆ. ಎಲ್ಲೆಲ್ಲಿ ಕಾಂಗ್ರೆಸ್ನವರು ಬಿಜೆಪಿ ಮತಗಳಿಗೆ ಕೈ ಹಾಕಿದ್ದರೋ ಅದೆಲ್ಲವನ್ನೂ ಗುರುತಿಸಿ ಮತಗಳು ಬೇರೆ ಕಡೆ ಹರಿದುಹೋಗದಂತೆ ತಡೆಯುವಲ್ಲಿ ಹಗಲಿರುಳು ಶ್ರಮಿಸಿದ್ದೇವೆ. ಅದರ ಪರಿಣಾಮವಾಗಿ ಈ ದಾಖಲೆಯ ಗೆಲುವು ಸಾಧ್ವವಾಯಿತು ಎಂದು ಹೇಳಿದ್ದಾರೆ.ನಾನು ಬಿಜೆಪಿ ಜಿಲ್ಲಾಧ್ಯಕ್ಷನಾದ ನಂತರದಲ್ಲಿ ನಡೆದಿರುವ ಮೊದಲ ಚುನಾವಣೆ ಇದಾಗಿದೆ. ಮೇಲುಕೋಟೆ ಕ್ಷೇತ್ರದಲ್ಲಿ ಎಚ್ಡಿಕೆಗೆ ಲೀಡ್ ದೊರಕಿಸುವುದಕ್ಕೆ ಸಾಕಷ್ಟು ಶ್ರಮವಹಿಸಿದ್ದೇನೆ. ಪಕ್ಷದ ನಾಯಕರ ಆದೇಶವನ್ನುಪಾಲಿಸಿ ಮುಖಂಡರು-ಕಾರ್ಯಕರ್ತರ ಸಹಕಾರದೊಂದಿಗೆ ಮೈತ್ರಿ ಅಭ್ಯರ್ಥಿ ಗೆಲುವಿಗೆ ಕಾರಣರಾಗಿರುವುದಕ್ಕೆ ಸಂತಸವಾಗಿದೆ.
- ಎನ್.ಇಂದ್ರೇಶ್, ಜಿಲ್ಲಾಧ್ಯಕ್ಷರು, ಬಿಜೆಪಿ