ಸಾರಾಂಶ
ಧರ್ಮಸ್ಥಳವನ್ನು ಅಪವಿತ್ರಗೊಳಿಸಬೇಕೆನ್ನುವ ಉದ್ದೇಶದಿಂದಲೇ ಬಿಜೆಪಿ ಮತ್ತು ಸಂಘ ಪರಿವಾರದ ಕೆಲ ಶಕ್ತಿಗಳು ಹುನ್ನಾರ ನಡೆಸಿವೆ. ಬುರುಡೆ ಕೇಸ್ ವಿಚಾರದಲ್ಲಿ ಸಿಲುಕಿದವರೆಲ್ಲರೂ ಹಿಂದೂಪರ ಸಂಘಟನೆಗಳ ಮುಖಂಡರೇ ಆಗಿದ್ದು, ಇವರಿಂದಲೇ ಧರ್ಮಸ್ಥಳಕ್ಕೆ ಚ್ಯುತಿ ಉಂಟಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಆರೋಪಿಸಿದ್ದಾರೆ.
ಕನಕಗಿರಿ:
ಧರ್ಮಸ್ಥಳದ ಬುರುಡೆ ಪ್ರಕರಣದಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರಕ್ಕೆ ಸಂಬಂಧಿಸಿದವರ ಕೈವಾಡವಿದ್ದು, ಸರ್ಕಾರ ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.ಕನಕಗಿರಿ ವ್ಯಾಪ್ತಿಯ ನಾಗಲಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳವನ್ನು ಅಪವಿತ್ರಗೊಳಿಸುವ ಉದ್ದೇಶದಿಂದಲೇ ಬಿಜೆಪಿ ಮತ್ತು ಸಂಘ ಪರಿವಾರದ ಕೆಲ ಶಕ್ತಿಗಳು ಹುನ್ನಾರ ನಡೆಸಿವೆ. ಬುರುಡೆ ಕೇಸ್ ವಿಚಾರದಲ್ಲಿ ಸಿಲುಕಿದವರೆಲ್ಲರೂ ಹಿಂದೂಪರ ಸಂಘಟನೆಗಳ ಮುಖಂಡರೇ ಆಗಿದ್ದು, ಇವರಿಂದಲೇ ಧರ್ಮಸ್ಥಳಕ್ಕೆ ಚ್ಯುತಿ ಉಂಟಾಗಿದೆ. ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ವರದಿ ಪಡೆದು ಸರ್ಕಾರ ಕಠಿಣ ಕ್ರಮಕೈಗೊಳ್ಳಲಿದೆ ಎಂದರು. ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ವಿವಾಹವಾದರೆ ₹ 5 ಲಕ್ಷ ನೀಡುತ್ತೇನೆ ಎನ್ನುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಜಾತಿ, ಮತ ಯಾವುದೇ ಇರಲಿ ಹೆಣ್ಣುಮಕ್ಕಳಿಗೆ ಗೌರವ ಕೊಡಬೇಕು. ಇದು ಒಳ್ಳೆ ಬೆಳವಣಿಗೆಯಲ್ಲ ಎಂದ ಸಚಿವರು, ಖಾಲಿ ಇರುವ ಎರಡು ಸಚಿವ ಸ್ಥಾನಗಳನ್ನು ಮತ್ತೆ ವಾಲ್ಮೀಕಿ ಶಾಸಕರಿಗೆ ನೀಡಲು ಪಕ್ಷದಲ್ಲಿ ಚರ್ಚೆ ನಡೆದಿದೆ ಸ್ಪಷ್ಟಪಡಿಸಿದ್ದಾರೆ.