ಸಚಿವ ಮಧು ಬಂಗಾರಪ್ಪ ಸವಾಲು । ಬಂಗಾರಧಾಮದಲ್ಲಿ ಶಕುಂತಲಾ ಬಂಗಾರಪ್ಪ ಅವರ 12ನೇ ಪುಣ್ಯಸ್ಮರಣೆಕನ್ನಡಪ್ರಭ ವಾರ್ತೆ ಸೊರಬ

ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಿದಾಗ ಅಂದು ಧ್ವನಿ ಎತ್ತದ ಬಿಜೆಪಿ ಶಾಸಕರು ಹಾಗೂ ಸಂಸದರು ನಿಜವಾದ ಮಹಿಳಾ ದ್ರೋಹಿಗಳು. ಕಾಂಗ್ರೆಸ್ ನಾಯಕರನ್ನು ಟೀಕಿಸುವುದನ್ನು ಬಿಟ್ಟು ಮಸೂದೆ ಜಾರಿಗೊಳಿಸಲು ಇಚ್ಚಾಶಕ್ತಿ ಪ್ರದರ್ಶಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸವಾಲು ಹಾಕಿದರು.

ಬುಧವಾರ ಪಟ್ಟಣದ ಬಂಗಾರಧಾಮದಲ್ಲಿ ಬುಧವಾರ ಶಕುಂತಲಾ ಬಂಗಾರಪ್ಪ ಅವರ 12ನೇ ಪುಣ್ಯಸ್ಮರಣೆ ಅಂಗವಾಗಿ ಕುಟುಂಬಸ್ಥರ ಜೊತೆಗೆ ಆಗಮಿಸಿ ಅವರ ಸಮಾಧಿ ಸ್ಥಳಕ್ಕೆ ವಿಶೇಷ ಪೂಜೆ ಸಲ್ಲಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೆಚ್ಚಿಸಲು ಶಾಸಕರು, ಸಂಸದರು ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ವಿರೋಧವಿದೆ ಎನ್ನುವುದು ಸುಳ್ಳು ರಾಜಕೀಯವಾಗಿ ಸುದ್ದಿಯಲ್ಲಿರಲು ಶ್ರೀ ಮೀಸಲಾ ಮೀಸಲಾತಿ -ವಿಷಯ ತಂದು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆ ಹಿಂದಿಗೆ ಗ್ರೇಡ್ ಬದಲು ಅಂಕ ನೀಡುವಂತೆ ಹೈಕೋರ್ಟ್ ಆದೇಶ ಹೊರಡಿಸಿದ್ದು, ಕೋರ್ಟ್ ಆದೇಶದಂತೆ ಅಂಕಗಳನ್ನು ನೀಡಲಾಗುತ್ತದೆ. ಆದರೆ ಸರ್ಕಾರ ಯಾವತ್ತೂ ಹಿಂದಿ ವಿರೋಧಿಯಲ್ಲ. ಬದಲಾಗಿ ಕನ್ನಡವನ್ನು ನಿರಂತರವಾಗಿ ಉಳಿಸುವ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಸರ್ಕಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೃತಿಯ ಭಾಷೆಯಾದ ಹಿಂದಿ ಕಡ್ಡಾಯವಲ್ಲ ಎಂಬ ತೀರ್ಮಾನ ಕೈಗೊಂಡಿದೆ. ಇದರಿಂದ ಪೋಷಕರಲ್ಲಿ ಗೊಂದಲ ಮೂಡುವುದಿಲ್ಲ. ಕನ್ನಡ ಭಾಷೆ ಉಳಿವಿಗೆ ಹಾಗೂ ಕನ್ನಡ ಪರವಾದ ಧ್ವನಿಯಾಗಿ ನಿಲ್ಲಲು ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಆದರೆ ಹೈಕೋರ್ಟ್ ಆದೇಶವನ್ನು ಸ್ವಾಗತಿಸಿದ್ದು, ಈ ಭಾರಿ ಪರೀಕ್ಷೆಯಲ್ಲಿ ಅಂಕಗಳನ್ನು ನೀಡಲಾಗುವುದು ಎಂದ ಅವರು, ಮುಂದಿನ ಅವಧಿಗೆ ಗ್ರೇಡ್ ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.


ಪ್ರಸ್ತುತ ಮುಂಗಾರು ಮಳೆ ಆರಂಭವಾಗುತ್ತಿದ್ದು, ಮಳೆಗಾಳಿಗೆ ಭಾರಿ ಅವಘಡಗಳು ಸಂಭವಿಸುತ್ತಿವೆ. ಈ ಹಿನ್ನಲೆಯಲ್ಲಿ ಕಂದಾಯ ಇಲಾಖೆ, ಮೆಸ್ಕಾಂ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಜಾಗೃತ ಸ್ಥಿತಿಯಲ್ಲಿರಬೇಕು ಎಂದರು.

ಇತ್ತೀಚಿಗೆ ತಾಲೂಕಿನ ಸಾಗದ್ದೆ, ಪುರ, ಶಿಗ್ಗಾ, ಹೆಗ್ಗೋಡು ಸೇರಿದಂತೆ ಇತರೆ ಗ್ರಾಮಗಳಲ್ಲಿ ಮಳೆ-ಗಾಳಿಯಿಂದ ಅಪಾರ ಪ್ರಮಾಣದ ಹಾನಿಯಾಗಿದ್ದರ ಬಗ್ಗೆ ಮಾಹಿತಿ ಪಡೆದ್ದಿದ್ದೇನೆ. ಈಗಾಗಲೇ ಕಂದಾಯ ಇಲಾಖೆ, ಮೆಸ್ಕಾಂ ಹಾಗೂ ಅರಣ್ಯ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಅವಘಡ ಸಂಭವಿಸುವ ಪೂರ್ವದಲ್ಲಿ ಮಾರ್ಗೋಪಾಯ ಕಂಡು ಕೊಳ್ಳುವಂತೆ ಸೂಚನೆ ನೀಡಲಾಗಿದೆ. ಹವಾಮಾನ ಇಲಾಖೆ ವರದಿ ಪ್ರಕಾರ ಈ ಭಾರಿ ಸೂಚನೆ ಮಳೆ ಪ್ರಮಾಣ ಕುಂಠಿತವಾಗುವ ಸಾಧ್ಯತೆ ಇದೆ ಎಂದರು.

ಕಳೆದ ಸೋಮವಾರ ತಡರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ತಾಲೂಕಿನ ಶಿಗ್ಗಾ ಹಾಗೂ ಹೆಗ್ಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮದಲ್ಲಿ ಉಂಟಾದ ಅನಾಹುತವನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ದಿ ಪ್ರಿಂಟರ್ಸ್ ಮೈಸೂರ್ ಲಿಮಿಟೆಡ್ ಜಂಟಿ ನಿರ್ದೇಶಕ ಕೆ.ಎನ್.ತಿಲಕ್‌ಕುಮಾರ್, ನಿರ್ದೇಶಕಿ ಸೌಭಾಗ್ಯಲಕ್ಷ್ಮಿ, ತಹಸೀಲ್ದಾರ್ ಪುರಂದರ, ಇಒ ಶಶಿಧರ್, ಕೃಷಿ ಸಹಾಯಕ ನಿರ್ದೇಶಕ ಕೆ.ಜಿ.ಕುಮಾರ್, ಮೆಸ್ಕಾಂ ಎಇಇ ಸತ್ಯಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ಚಂದನಕುಮಾರ್, ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್, ಮುಖಂಡರಾದ ಜಯಶೀಲಗೌಡ ಅಂಕರವಳ್ಳಿ, ಶಿವಲಿಂಗೇಗೌಡ, ಸುರೇಶ್ ಬಿಳವಾಣಿ, ಕೆ.ಪಿ. ರುದ್ರಗೌಡ, ಪ್ರಭಾಕರ ಶಿಗ್ಗಾ, ನೆಹರೂ ಕೊಡಕಣಿ, ಶ್ರೀಕಾಂತ್ ಚಿಕ್ಕಶಕುನ, ಫಯಾಜ್ ಅಹ್ಮದ್, ಲೋಕೇಶ ಗಾಳಿಪುರ ಮೊದಲಾದವರು ಹಾಜರಿದ್ದರು.

---

ಫೋಟೊ: 22ಕೆಪಿಸೊರಬ-04:

ಸೊರಬ ಪಟ್ಟಣದ ಬಂಗಾರಧಾಮದಲ್ಲಿ ಶಕುಂತಲಾ ಬಂಗಾರಪ್ಪ ಅವರ 12ನೇ ಪುಣ್ಯಸ್ಮರಣೆ ಅಂಗವಾಗಿ ಸಚಿವ ಮಧು ಬಂಗಾರಪ್ಪ ಕುಟುಂಬಸ್ಥರ ಜೊತೆಗೆ ಸಮಾಧಿ ಸ್ಥಳಕ್ಕೆ ಆಗಮಿಸಿ ವಿಶೇಷಪೂಜೆ ಸಲ್ಲಿಸಿದರು.